ಮಮತಾ ಬ್ಯಾನರ್ಜಿಗೆ ಹಿನ್ನಡೆ: ಸಿಎಎ ವಿರುದ್ಧದ ಜಾಹೀರಾತು ನಿಲ್ಲಿಸಿ ಎಂದು ಕೋರ್ಟ್ ಸೂಚನೆ
ಕೋಲ್ಕತಾ, ಡಿಸೆಂಬರ್ 23: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧ ಸಾರ್ವಜನಿಕ ವೇದಿಕೆಗಳಲ್ಲಿ ಪ್ರಕಟಿಸುತ್ತಿರುವ ಸರ್ಕಾರಿ ಪ್ರಾಯೋಜಿತ ಜಾಹೀರಾತುಗಳನ್ನು ಸ್ಥಗಿತಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದೆ.
ಮುಂದಿನ ವಿಚಾರಣೆಯನ್ನು ಜ.9ರಂದು ನಡೆಸಲಾಗುವುದು. ಅಲ್ಲಿಯವರೆಗೂ ಅಂತಹ ಯಾವುದೇ ಬಗೆಯ ಪ್ರಚಾರವನ್ನು ಮಾಧ್ಯಮಗಳಲ್ಲಿ ಮಾಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿಬಿಎನ್ ರಾಧಾಕೃಷ್ಣನ್ ಮತ್ತು ನ್ಯಾ. ಅರಿಜಿತ್ ಬ್ಯಾನರ್ಜಿ ಮಧ್ಯಂತರ ಆದೇಶ ನೀಡಿದ್ದಾರೆ. ಇದರಿಂದ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಜಾಹೀರಾತು ಪ್ರಚಾರದ ತಂತ್ರ ಅನುಸರಿಸಿದ್ದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.
'ಕೇಂದ್ರದ ಪಟ್ಟಿಯಲ್ಲಿರುವ ಕಾಯ್ದೆಗೆ ಅಡ್ಡಿಪಡಿಸಲು ಸಂವಿಧಾನದ ಪ್ರಕಾರ ಒಬ್ಬ ಮುಖ್ಯಮಂತ್ರಿಗೆ ಅಧಿಕಾರವಿಲ್ಲ ಎಂಬುದನ್ನು ಮಮತಾ ಅವರು ತಮ್ಮ ಪಕ್ಷದಲ್ಲಿರುವ ಕೆಲವು ವಿದ್ಯಾವಂತ ಸಂಸದರು ಮತ್ತು ಶಾಸಕರಿಂದ ಸಲಹೆ ಪಡೆದುಕೊಳ್ಳಬಹುದಾಗಿತ್ತು. ದೀದಿ ಹೊರತುಪಡಿಸಿ ಉಳಿದ ಎಲ್ಲರಿಗೂ ಪೌರತ್ವ ಕಾಯ್ದೆ ಸೂಕ್ತವಾಗಿದೆ ಎಂದು ಅರಿತಿದ್ದಾರೆ' ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.

ಕೇಂದ್ರದ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಕಟುವಾದ ಟೀಕೆ ವ್ಯಕ್ತಪಡಿಸುತ್ತಿರುವ ಮಮತಾ, ಕಾಯ್ದೆಗಳ ವಿರುದ್ಧದ ಪ್ರಚಾರಕ್ಕಾಗಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಆರೋಪಿಸಿದ್ದರು.
ಈ ಜಾಹೀರಾತುಗಳು ಅಸಾಂವಿಧಾನಿಕ ಆಗಿರುವುದರಿಂದ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು.












Click it and Unblock the Notifications