ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಗಡಿಬಿಡಿ, ಮೋದಿ-ದೀದಿ ಸಿಡಿಮಿಡಿ
ಕೋಲ್ಕತ್ತಾ, ಜನವರಿ.28: ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗೆ ಮಾತುಕತೆಗೆ ನಾನು ಸಿದ್ಧ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಷರತ್ತು ವಿಧಿಸಿದ್ದಾರೆ.
ಕೋಲ್ಕತ್ತಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸಿಎಎ ವಿರುದ್ಧ ನಿರ್ಣಯ ಪಾಸ್: ಇದು ಮಮತಾ ಸರ್ಕಾರದ ನಿರ್ಧಾರ
ರಾಷ್ಟ್ರೀಯ ನಾಗರಿಕ ನೊಂದಣಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಒಪ್ಪಿಕೊಳ್ಳಲು ಆಗುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯೊಂದಿಗೆ ಶಾಂತಿ ಮಾತುಕತೆ ನಡೆಸಬೇಕಿದ್ದಲ್ಲಿ, ಕೇಂದ್ರ ಸರ್ಕಾರವು ಮೊದಲು ಈ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದರು.
ದೇಶದಲ್ಲಿ ಜಾರಿಗೊಳಿಸಿರುವ ಸಿಎಎ ಯಾರಿಗೂ ಬೇಕಿಲ್ಲ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ(CAA), ರಾಷ್ಟ್ರೀಯ ನಾಗರಿಕ ಕಾಯ್ದೆ(NRC) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR)ಯಿಂದ ಯಾರಿಗೂ ಪ್ರಯೋಜನವಿಲ್ಲ. ಈ ಮೂರು ನಿರ್ಧಾರಗಳಿಂದ ಭಾರತಕ್ಕೆ ಒಳಿತಾಗುವುದಿಲ್ಲ. ದೇಶಕ್ಕೆ ಕಂಟಕಪ್ರಾಯವಾಗಿರುವ ಈ ಯೋಜನೆಗಳನ್ನು ಕೇಂದ್ರ ಸರ್ಕಾರವು ಕೈ ಬಿಡಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದರು.
ಸಿಎಎ ಜಾರಿಗೊಳಿಸಲು ಯಾರಿಂದರೂ ಚರ್ಚಿಸಿಲ್ಲ
ಈ ಹಿಂದೆ 370ರ ಕಾಯ್ದೆಯಡಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿತು. ಅಂದು ಕೂಡಾ ಯಾರೊಂದಿಗೂ ಚರ್ಚೆ ನಡೆಸದೇ ನಿರ್ಧಾರ ತೆಗೆದುಕೊಂಡಿತ್ತು. ಇತ್ತೀಚಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದಾಗಲೂ ಕೇಂದ್ರ ಸರ್ಕಾರವು ಯಾವ ಪಕ್ಷದ ನಾಯಕರ ಜೊತೆಗೂ ಚರ್ಚೆ ನಡೆಸಿಲ್ಲವಲ್ಲ ಎಂದು ದೀದಿ ಕಿಡಿ ಕಾರಿದ್ದಾರೆ.
ಒಕ್ಕೂಟ ಭಾರತ ನಿರ್ಮಾಣಕ್ಕೆ ಕರೆ ಕೊಟ್ಟ ದೀದಿ
ಇನ್ನು, ಭಾರತೀಯರಿಗೆ ಒಕ್ಕೂಟ ಭಾರತ ಬೇಕು. ನಮಗೆ ಒಕ್ಕೂಟ ಪಶ್ಚಿಮ ಬಂಗಾಳವು ಬೇಕೇ ವಿನಃ, ದೇಶವನ್ನು ಒಡೆಯುವ ಕಾಯ್ದೆಗಳನ್ನು ನಾವು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.
ದೀದಿ ಸರ್ಕಾರದಿಂದ ಸಿಎಎ ವಿರುದ್ಧ ನಿರ್ಣಯ ಅಂಗೀಕಾರ
ಜನವರಿ.27ರ ಸೋಮವಾರವಷ್ಟೇ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು. ಪಶ್ಚಿಮ ಬಂಗಾಳ ಸೇರಿದಂತೆ ಈಗಾಗಲೇ ನಾಲ್ಕು ರಾಜ್ಯಗಳ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಕೇರಳ, ಪಂಜಾಬ್, ರಾಜಸ್ಥಾನ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರಗೊಂಡಿದ್ದು, ತೆಲಂಗಾಣ ಸರ್ಕಾರ ಕೂಡಾ ನಿರ್ಣಯ ಅಂಗೀಕರಿಸುವುದಾಗಿ ಘೋಷಿಸಿದೆ.