ಪಶ್ಚಿಮ ಬಂಗಾಳ ಸಂಘರ್ಷ: 20 ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ
ಕೋಲ್ಕತಾ, ಅಕ್ಟೋಬರ್ 9: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುರುವಾರ ಪ್ರತಿಭಟನೆ ವೇಳೆ ಕಾನೂನು ಬಾಹಿರವಾಗಿ ಗುಂಪುಗೂಡಿದ್ದ ಆರೋಪದಲ್ಲಿ ಬಿಜೆಪಿ ಮುಖಂಡರಾದ ಕೈಲಾಶ್ ವಿಜಯ್ ವರ್ಗಿಯ, ಮುಕುಲ್ ರಾಯ್ ಸೇರಿದಂತೆ 20 ಜನರ ವಿರುದ್ಧ ಕೋಲ್ಕತಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾನೂನಿಗೆ ವಿರುದ್ಧವಾಗಿ ಗುಂಪು ಸೇರಿದ್ದು ಮತ್ತು ರಾಜ್ಯ ಸರ್ಕಾರದ ಆಡಳಿತ ಕಚೇರಿಗೆ ಸಾಗುವ ಸಾಮಾನ್ಯ ಉದ್ದೇಶ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಕ್ಕಾಗಿ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗುರುವಾರ ಕೈಲಾಶ್ ವಿಜಯವರ್ಗಿಯ ಅವರು ಜಾಥಾ ನಡೆಸಿದ ಸ್ಥಳದಲ್ಲಿಯೇ ಇರುವ ಹಾಸ್ಟಿಂಗ್ಸ್ ಪೊಲೀಸ್ ಠಾಣೆಯಲ್ಲಿ ಈ ಮುಖಮಡರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ಬಿಜೆಪಿ ಶಾಸಕ ಲಾಕೆಟ್ ಚಟರ್ಜಿ, ಅರುಣ್ ಸಿಂಗ್, ರಾಕೇಶ್ ಸಿಂಗ್ ಮತ್ತು ಬಿಜೆಪಿ ಮುಖಂಡರಾದ ಭಾರತಿ ಘೋಷ್ ಮತ್ತು ಜಯಪ್ರಕಾಶ್ ಮಜುಂದಾರ್ ಅವರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ.

'ನಬಣ್ಣ ಚಲೋ ಮೆರವಣಿಗೆ'
ಬಿಜೆಪಿಯ ಯುವ ಘಟಕವು ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಗುರುವಾರ ನಡೆಸಿದ ನಬಣ್ಣ ಚಲೋ ಮೆರವಣಿಗೆ ವೇಳೆ ಉಂಟಾದ ಸಂಘರ್ಷಕ್ಕೆ ಸಂಬಂಧಿಸಿದಂತೆ 113 ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.
ಕೋಲ್ಕತಾ ಮತ್ತು ಹೌರಾದ ವಿವಿಧ ಭಾಗಗಳಿಂದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರಿಂದ ವಿವಿಧ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರತ್ತ ಬಿಜೆಪಿ ಕಾರ್ಯಕರ್ತರು ಕಚ್ಚಾ ಬಾಂಬ್ಗಳನ್ನು ಎಸೆದಿದ್ದರು. ಕಲ್ಲುಗಳನ್ನು ಸಹ ತೂರಿದ್ದರು. ಹೌರಾ ಮೈದಾನದಲ್ಲಿ ಬಂಧಿಸಲಾದ ಬಿಜೆಪಿ ಕಾರ್ಯಕರ್ತನ ಬಳಿ ಗುಂಡು ತುಂಬಿದ್ದ ಪಿಸ್ತೂಲು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications