ದೀದಿ ಇಲ್ಲದೆ ಬದುಕಲಾಗದು - ಮತ್ತೆ ಟಿಎಂಸಿ ಸೇರ್ಪಡೆಗೆ ಬಿಜೆಪಿಯ ಸೋನಾಲಿ ಒಲವು
ಕೋಲ್ಕತಾ, ಮೇ 22: ಪಶ್ಚಿಮ ಬಂಗಾಳ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾಗಿದ್ದ ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಮಾಜಿ ಶಾಸಕಿ ಸೋನಾಲಿ ಗುಹಾ ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿ ಪಕ್ಷವನ್ನು ಮತ್ತೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶನಿವಾರ ಪತ್ರವೊಂದನ್ನು ಟ್ವೀಟ್ ಮಾಡಿರುವ ಸೋನಾಲಿ ಗುಹಾ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ತೊರೆದಿದ್ದಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಳಿ ಕ್ಷಮೆಯಾಚಿಸಿದ್ದಾರೆ. ಹಾಗೆಯೇ ತನ್ನನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಸುವೇಂದು ಅಧಿಕಾರಿ ತಂದೆ, ಸಹೋದರನಿಗೆ ವಿಐಪಿ ಭದ್ರತೆ
ಭಾವುಕರಾಗಿರುವ ಸೋನಾಲಿ ಗುಹಾ, "ನಾನು ಬೇರೆ ಪಕ್ಷಕ್ಕೆ ಸೇರುವ ತಪ್ಪು ನಿರ್ಧಾರವನ್ನು ಮಾಡಿದ್ದೇನೆ, ಈ ಪತ್ರವನ್ನು ನಾನು ಭಾರವಾದ ಹೃದಯದಿಂದ ಬರೆಯುತ್ತಿದ್ದೇನೆ. ನನ್ನ ಪಕ್ಷವನ್ನು ತೊರೆದು ಬೇರೆ ಪಕ್ಷದಲ್ಲಿ ಒಗ್ಗಿಕೊಳ್ಳಲು ನನಗೆ ಸಾಧ್ಯವಾಗುತ್ತಿ"ಲ್ಲ ಎಂದು ಹೇಳಿದ್ದಾರೆ.
"ಒಂದು ಮೀನು ನೀರಿನಿಂದ ಹೊರಗುಳಿಯಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ದೀದಿ, ನೀವು ಇಲ್ಲದೆ ಬದುಕಲು ನನಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿರುವ ಸೋನಾಲಿ ಗುಹಾ, ನಾನು ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ನೀವು ನನ್ನನ್ನು ಕ್ಷಮಿಸದಿದ್ದರೆ, ನಾನು ಬದುಕಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನಗೆ ನನ್ನದೇ ಪಕ್ಷಕ್ಕೆ ಹಿಂತಿರುಗಲು ಅನುಮತಿ ನೀಡಿ. ನಿಮ್ಮ ವಾತ್ಸಲ್ಯದ ಮಡಿಲಲ್ಲಿ ನನ್ನ ಜೀವನದ ಉಳಿದ ಕ್ಷಣಗಳನ್ನು ಕಳೆಯಲು ನನಗೆ ಅವಕಾಶ ಮಾಡಿಕೊಡಿ" ಎಂದು ಬಂಗಾಳಿ ಭಾಷೆಯಲ್ಲಿ ಪತ್ರ ಬರೆದಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿದ್ದ ಸೋನಾಲಿ ಗುಹಾ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನೆರಳು" ಎಂದು ಕೂಡಾ ಹೇಳಲಾಗುತ್ತಿತ್ತು. ಆದರೆ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಬಾರಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯಿಂದ ಸೋನಾಲಿ ಗುಹಾ ಕೈಬಿಡಲಾಗಿತ್ತು. ಇದರಿಂದಾಗಿ ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದ ಸೋನಾಲಿ ಟಿವಿ ಚಾನೆಲ್ಗಳಲ್ಲಿ ಭಾವನಾತ್ಮಕ ಮಾತುಗಳನ್ನಾಡಿದ್ದರು. ಬಳಿಕ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಬಿಜೆಪಿಯ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುವುದಾಗಿ ಹೇಳಿದ್ದರು.
ಇದೀಗ ತನ್ನ ನಿರ್ಧಾರ ತಪ್ಪು ಎಂದು ಪಕ್ಷತಾಪ ಪಡುತ್ತಿರುವ ಸೋನಾಲಿ, ತಾನು ಬಿಜೆಪಿಯಲ್ಲಿ ಅನಗತ್ಯ ಎಂಬಂತೆ ಆಗಿದೆ ಎಂದು ಹೇಳಿದ್ದಾರೆ.
ಸಿಎಂಗಳನ್ನು ಬೊಂಬೆಗಳಂತೆ ಕೂರಿಸಿ ಅವಮಾನ ಮಾಡುತ್ತಿದ್ದಾರೆ; ದೀದಿ
"ಬಿಜೆಪಿಗೆ ಸೇರ್ಪಡೆಗೊಳ್ಳುವ ನನ್ನ ನಿರ್ಧಾರ ತಪ್ಪು. ಇಂದು ಆ ತಪ್ಪಿನ ಪರಿಣಾಮವನ್ನು ನಾನು ಅನುಭವಿಸುತ್ತಿದ್ದೇನೆ. ಪಕ್ಷವನ್ನು ನಾನು ತೊರೆಯುತ್ತೇನೆ ಎಂದು ಬಿಜೆಪಿಗೆ ಹೇಳಲು ನಾನು ಯಾವುದೇ ತಲೆಕೆಡಿಸಿಕೊಳ್ಳಲಿಲ್ಲ. ನನಗೆ ಬಿಜೆಪಿಯಲ್ಲಿ ನಾನು ಅನಗತ್ಯ ಎಂಬ ಭಾವನೆ ಬಂದಿದೆ. ಅವರು ತಮ್ಮ ರಾಜಕೀಯಕ್ಕೆ ನನ್ನ ಭಾವನೆಯನ್ನು ಬಳಸುವ ಪ್ರಯತ್ನ ಮಾತ್ರ ಮಾಡಿದ್ದಾರೆ. ಅವರು ಮಮತಾ ದೀದಿ ಬಗ್ಗೆ ಕೆಟ್ಟದಾಗಿ ಮಾತನಾಡಲು ನನ್ನ ಬಳಿ ಹೇಳಿದರು. ಆದರೆ ನನ್ನಿಂದ ಅದು ಸಾಧ್ಯವಾಗಲಿಲ್ಲ" ಎಂದು ಕೂಡಾ ಹೇಳಿದ್ದಾರೆ.
ಇನ್ನು ಟಿಎಂಸಿಗೆ ಮತ್ತೆ ಸೇರ್ಪಡೆಗೊಳ್ಳಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಲು ಸಿದ್ಧರಿರುವುದಾಗಿ ರಾಜ್ಯ ವಿಧಾನಸಭೆಯ ಮಾಜಿ ಉಪ ಸ್ಪೀಕರ್ ಗುಹಾ ಹೇಳಿದ್ದಾರೆ.
"ನಾನು ವೈಯಕ್ತಿಕವಾಗಿ ದೀದಿಯನ್ನು ಭೇಟಿಯಾಗಲು ಪ್ರಯತ್ನಿಸುತ್ತೇನೆ. ಆದರೆ ಅವರು ಮುಖ್ಯಮಂತ್ರಿಯಾದ ಕಾರಣ ತನ್ನ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ನಾವು ಬಯಸಿದಾಗಲೆಲ್ಲಾ ದೀದಿ ನಮಗೆ ಸಮಯವಕಾಶ ನೀಡುತ್ತಾರೆ ಎಂದು ನಾವು ನಿರೀಕ್ಷಿಸಲಾಗುವುದಿಲ್ಲ" ಎಂದಿದ್ದಾರೆ ಸೋನಾಲಿ.
"ಇತ್ತೀಚೆಗೆ ನಿಧನರಾದ ದೀದಿಯ ಸಹೋದರನ ಅಂತಿಮ ಆಚರಣೆಗಳು ಮುಂದಿನ ವಾರ ಅವರ ನಿವಾಸದಲ್ಲಿ ನಡೆಯಲಿದೆ. ನಾನು ಅಂದು ದೀದಿ ನಿವಾಸಕ್ಕೆ ಹೋಗುತ್ತೇನೆ. ಅಲ್ಲಿ ದೀದಿ ಬಳಿ ಈ ವಿಚಾರದಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ" ಎಂದು ಗುಹಾ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)