ಹೂಗ್ಲಿ: ಟಿಎಂಸಿ ಹಲ್ಲೆಗೆ ಬಿಜೆಪಿ ಕಾರ್ಯಕರ್ತ ಬಲಿ
ಹೂಗ್ಲಿ(ಪಶ್ಚಿಮ ಬಂಗಾಳ), ಆ. 16: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕಾರ್ಯಕರ್ತರೊಬ್ಬರನ್ನು ಕೊಚ್ಚಿ ಕೊಲ್ಲಲಾಗಿದೆ. ತೃಣಮೂಲ ಕಾಂಗ್ರೆಸ್ ನವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ತ್ರಿವರ್ಣ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ, ವಿಕೋಪಕ್ಕೆ ತಿರುಗಿ ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡಲು ಶುರು ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆದರೆ, ಹೂಗ್ಲಿ ಜಿಲ್ಲೆಯ ಖಾನಾಕುಲ್ ಪ್ರದೇಶದಲ್ಲಿ ನಡೆದ ಗಲಾಟೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ಇದು ಬಿಜೆಪಿ ಆಂತರಿಕ ಕಚ್ಚಾಟ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಪ್ರಭೀರ್ ಘೋಶಾಲ್ ಅವರು ಆರೋಪವನ್ನು ಅಲ್ಲಗೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

ಮೃತ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತ ಸುದರ್ಶನ್ ಪ್ರಾಮಾಣಿಕ್ (40) ಎಂದು ಗುರುತಿಸಲಾಗಿದೆ. ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ, ಪ್ರಕರಣದ ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯನ್ನು ಖಂಡಿಸಿ ಭಾನುವಾರದಂದು 12 ಗಂಟೆಗಳ ಕಾಲ ಹೂಗ್ಲಿ ಜಿಲ್ಲೆ ಬಂದ್ ಗೆ ಬಿಜೆಪಿ ಕರೆ ನೀಡಿದೆ.












Click it and Unblock the Notifications