"ಬಂಗಾಳದಲ್ಲಿ ಉಚಿತ ಪಡಿತರ ನೀಡುವ ಭರವಸೆ ಈಡೇರಿಸಲ್ಲ ಬಿಜೆಪಿ"
ಕೋಲ್ಕತ್ತಾ, ಮಾರ್ಚ್ 22: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷ ಉಚಿತವಾಗಿ ಪಡಿತರವನ್ನು ನೀಡುವುದಾಗಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಬಂಕುರ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ನೀಡುವ ಆಶ್ವಾಸನೆಗಳನ್ನು ಎಂದಿಗೂ ಈಡೇರಿಸುವುದಿಲ್ಲ. ಬಿಜೆಪಿ ಹೊರಗಿನ ಜನರಿಂದಲೇ ಕೂಡಿರುವ ಪಕ್ಷವಾಗಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದಕ್ಕಾಗಿ ಹೊರಗಿನಿಂದ ಗೂಂಡಾಗಳನ್ನು ಕರೆ ತರಲಾಗುತ್ತಿದೆ ಎಂದು ದೂಷಿಸಿದ್ದಾರೆ.
ರೋಚಕ ಕಾರಣ: 2 ಮನೆ ಬಾಡಿಗೆ ಪಡೆದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಎಲ್ಲರಿಗೂ ಉಚಿತವಾಗಿ ಪಡಿತರ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಲಾಗುತ್ತಿದೆ. ಇಂಥ ಆಶ್ವಾಸನೆಗಳನ್ನು ಬಿಜೆಪಿಗರು ಎಂದಿಗೂ ಪೂರ್ಣಗೊಳಿಸುವುದಕ್ಕೆ ಆಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಗೂಂಡಾಗಳನ್ನು ಓಡಿಸಲು ಸಿದ್ಧರಾಗಿರಿ:
ಬಿಜೆಪಿಯ ಗೂಂಡಾಗಳು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರಬಹುದು. ಒಂದು ವೇಳೆ ಅವರು ನಿಮಗೆ ಬೆದರಿಕೆ ಹಾಕಲು ಮುಂದಾದರೆ ನೀವು ಪಾತ್ರಗೆಳನ್ನು ಹಿಡಿದು ಅಂಥವರನ್ನು ಓಡಿಸಲು ಸಿದ್ಧರಾಗಿರಿ ಎಂದರು. ಅಲ್ಲದೇ, ಮಹಿಳೆಯರಿಗೆ ಏನು ಧರಿಸಬೇಕು ಮತ್ತು ಏನು ತಿನ್ನಬೇಕು ಎಂಬ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಅವರು "ಬಿ.ಆರ್.ಅಂಬೇಡ್ಕರ್ ಅವರಿಗಿಂತ ದೊಡ್ಡವರು ಎನ್ನುವಂತೆ ಆಲೋಚಿಸುವಂತೆ ಮಾಡುತ್ತಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.