ಒಂದು ಪಕ್ಷಿ ಕೂಡ ಪಶ್ಚಿಮ ಬಂಗಾಳಕ್ಕೆ ಅಕ್ರಮವಾಗಿ ಬರಲು ಬಿಡಲ್ಲ; ಅಮಿತ್ ಶಾ
ಕೋಲ್ಕತ್ತಾ, ಫೆಬ್ರವರಿ 19: ಇದೇ ಏಪ್ರಿಲ್- ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷಗಳ ಪ್ರಚಾರ ಕಾರ್ಯ ಜೋರಾಗಿದೆ. ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದು, ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.
ಎರಡನೇ ದಿನವಾದ ಶುಕ್ರವಾರ ಅಮಿತ್ ಶಾ, ನ್ಯಾಷನಲ್ ಲೈಬ್ರರಿಯಲ್ಲಿ, ಹುತಾತ್ಮರಾದ ರಾಜ್ಯದ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ. ಬಿಜೆಪಿಯ ಐದನೇ ರಥಯಾತ್ರೆಯಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಮುಂದೆ ಓದಿ...
"ಒಂದು ಪಕ್ಷಿ ಕೂಡ ಬೇರೆ ಕಡೆಯಿಂದ ರಾಜ್ಯಕ್ಕೆ ಬರುವುದಿಲ್ಲ"
ಬರೀ ಮಮತಾ ಬ್ಯಾನರ್ಜಿ ಸರ್ಕಾರ ಸೋಲಿಸುವುದು ನಮ್ಮ ಗುರಿಯಲ್ಲ. ಇದು ಪಶ್ಚಿಮ ಬಂಗಾಳವನ್ನು ಚಿನ್ನದ ಬಂಗಾಳ ಮಾಡಲು ಬಿಜೆಪಿ ಹೋರಾಟ. ಇದಕ್ಕಾಗಿ ನೀವು ಬಿಜೆಪಿಗೆ ಮತ ಹಾಕಿ ಎಂದು ಅಮಿತ್ ಶಾ ಮನವಿ ಮಾಡಿದರು. ಅಕ್ರಮ ವಲಸಿಗರ ಸಮಸ್ಯೆ ಕುರಿತು ಮಾತನಾಡಿದ ಅವರು, ಒಂದು ಪಕ್ಷಿ ಕೂಡ ಹೊರಗಿನಿಂದ ಬರದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮೋದಿಗೆ ಒಂದೇ ಒಂದು ಅವಕಾಶ ಕೊಟ್ಟು ನೋಡಿ; ಬಂಗಾಳ ಜನರಿಗೆ ಅಮಿತ್ ಶಾ ಮನವಿ
"ಟಿಎಂಸಿ ಸಿಂಡಿಕೇಟ್ ರಾಜ್ ಆಡಳಿತ ಕೊನೆಗೊಳಿಸಿ"
ಕುಟುಂಬ ರಾಜಕಾರಣದ ಕುರಿತು ಮಾತನಾಡಿದ ಅಮಿತ್ ಶಾ, ತಮ್ಮ ಹಾಗೂ ತಮ್ಮ ಸಂಬಂಧಿಗಳ ಕಲ್ಯಾಣಕ್ಕಾಗಿ ಮಮತಾ ಬ್ಯಾನರ್ಜಿ ಕೆಲಸ ಮಾಡುತ್ತಿದ್ದರೇ ಹೊರತು ಇಲ್ಲಿನ ಜನರ ಏಳಿಗೆಗಾಗಿ ಅಲ್ಲ ಎಂದು ಟೀಕಿಸಿದ್ದಾರೆ. ಜೊತೆಗೆ ಟಿಎಂಸಿ "ಸಿಂಡಿಕೇಟ್ ರಾಜ್" ಭ್ರಷ್ಟಾಚಾರ ಆಡಳಿತವನ್ನು ತಡೆಯಲು ಜನರು ಬಿಜೆಪಿಗೆ ಅವಕಾಶ ನೀಡಬೇಕಿದೆ ಎಂದು ಕೇಳಿಕೊಂಡಿದ್ದಾರೆ.
"ಮೊದಲು ನನ್ನ ಸಂಬಂಧಿ ಸೋಲಿಸಿ, ಆಮೇಲೆ ನನ್ನ ಬಗ್ಗೆ ಮಾತಾಡಿ"
ಗುರುವಾರ ಒಂದೇ ಜಿಲ್ಲೆಯಲ್ಲಿ ಟಿಎಂಸಿ ಹಾಗೂ ಬಿಜೆಪಿ ಪ್ರಚಾರ ಮೆರವಣಿಗೆ ಹಮ್ಮಿಕೊಂಡಿದ್ದವು. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಎರಡೂ ಪಕ್ಷಗಳು ಪ್ರಚಾರ ಮೆರವಣಿಗೆ ನಡೆಸಿದ್ದು, ಪರಸ್ಪರ ಆರೋಪಗಳನ್ನು ಮಾಡಿದವು. ಈ ಸಂದರ್ಭ ಮಾತನಾಡಿದ ಮಮತಾ ಬ್ಯಾನರ್ಜಿ, ಮೊದಲು ನನ್ನ ಸಂಬಂಧಿ ಅಭಿಷೇಕ್ ನನ್ನು ಸೋಲಿಸಿ ನೋಡಿ, ಆಮೇಲೆ ನನ್ನನ್ನು ಸೋಲಿಸುವ ಬಗ್ಗೆ ಯೋಚಿಸುವಿರಂತೆ ಎಂದು ಸವಾಲು ಹಾಕಿದ್ದಾರೆ.
"ನಿಮ್ಮ ಮಗ ಕೋಟಿಕೋಟಿ ಗಳಿಸುವುದು ಹೇಗೆ", ಅಮಿತ್ ಶಾಗೆ ದೀದಿ ತಿರುಗೇಟು
" ಬಿಜೆಪಿ ನಾಯಕರಿಂದ ಹಿಂದೂ ಧರ್ಮದ ಕುರಿತು ತಿಳಿಯಬೇಕಿಲ್ಲ"
ಬಿಜೆಪಿ ನಾಯಕರಿಂದ ಹಿಂದೂ ಧರ್ಮದ ಕುರಿತು ತಿಳಿದುಕೊಳ್ಳುವ ಅಗತ್ಯ ನನಗಿಲ್ಲ ಎಂದಿದ್ದಾರೆ ಬ್ಯಾನರ್ಜಿ. ಇದೇ ಸಂದರ್ಭ ಕೇಂದ್ರ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಗ್ಗೆ ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, "ಪ್ರತಿನಿತ್ಯ ನೀವು ಸೋದರಳಿಯ ಎಂಬ ವಿಷಯವನ್ನು ಎತ್ತಿಕೊಂಡು ಮಾತನಾಡುತ್ತೀರ. ನಿಮ್ಮ ಮಗ ಕೂಡಾ ಕೋಟಿ ಕೋಟಿ ರೂಪಾಯಿ ಗಳಿಸುತ್ತಿರುವುದು ಹೇಗೆ, ನಿಮ್ಮ ಮಗ ಕೂಡಾ ಇದರಿಂದ ಹೊರತಾಗಿಲ್ಲ" ಎಂದು ದಾಳಿ ನಡೆಸಿದ್ದರು.