"ರಾಮನ ಹೆಸರನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಹೇಳೋಕಾಗುತ್ತಾ?"
ಘತಾಲ್(ಪಶ್ಚಿಮ ಬಂಗಾಳ), ಮೇ 07: "ಮಮತಾ ಬ್ಯಾನರ್ಜಿ ಅವರು ಜೈ ಶ್ರೀರಾಮ್ ಎಂದು ಘೋಷಿಸುವುದಕ್ಕೂ ಅವಕಾಶ ನೀಡದಿದ್ದುದ್ದು ಆಶ್ಚರ್ಯದ ಸಂಗತಿ. ಶ್ರೀರಾಮನ ಹೆಸರನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಉಚ್ಚರಿಸುವುದಕ್ಕಾಗುತ್ತದೆಯೇ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಘತಾಲ್ ನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅಮಿತ್ ಶಾ, ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಲೇವಡಿ ಮಾಡಿದರು.
"ಭಗವಾನ್ ರಾಮ ಭಾರತೀಯ ಸಂಸ್ಕೃತಿಯ ಒಂದು ಭಾಗ. ಆತ ಹೆಸರನ್ನು ಉಚ್ಚರಿಸುವುದನ್ನು ತಡೆಯುವುದು ಸರಿಯೇ? ಭಾರತದಲ್ಲೇ ಆತನ ಹೆಸರು ಹೇಳದಿದ್ದರೆ, ಪಾಕಿಸ್ತಾನದಲ್ಲಿ ಹೇಳಲಾಗುತ್ತದೆಯೇ?" ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಪಶ್ಚಿಮಬಂಗಾಳದ ಮಿಡ್ನಾಪುರದಲ್ಲಿ ಜೈ ಶ್ರೀರಾಮ್ ಎಂದು ಪಠಿಸುತ್ತಿದ್ದ ಕೆಲವರನ್ನು ಮಮತಾ ಬ್ಯಾನರ್ಜಿ ತಡೆದ ದೃಶ್ಯ ಸಮಾನಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಶಾ ಆಕ್ಷೇಪ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಮತಾ ಬ್ಯಾನರ್ಜಿ, "ರಾಮನ ಬಗ್ಗೆ ಅಷ್ಟೇಲ್ಲ ಕಾಳಜಿ ಇರುವ ಮೋದಿಯವರಿಗೆ ಒಂದು ರಾಮಮಂದಿರ ಕಟ್ಟುವುದಕ್ಕೆ ಸಾಧ್ಯವಾಗದಿರುವುದು ವಿಷಾದ" ಎಂದು ಕುಹಕದ ಹೇಳಿಕೆ ನೀಡಿದ್ದರು.












Click it and Unblock the Notifications