ಮಹಾ ಮೈತ್ರಿಕೂಟದಿಂದ ಕೆಸಿಎಆರ್ ಹೊರಗಿಟ್ಟ ಮಮತಾ!
ಕೋಲ್ಕತ್ತಾ, ಅಕ್ಟೋಬರ್ 10 : 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಮಹಾಮೈತ್ರಿ ಸಿದ್ಧವಾಗುತ್ತಿದೆ. ಅಚ್ಚರಿ ಎಂಬಂತೆ ಮೈತ್ರಿಕೂಟದಿಂದ ಟಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರರಾವ್ ಅವರನ್ನು ಹೊರಗಿಡಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆ.ಚಂದ್ರಶೇಖರರಾವ್ ಅವರ ಬದಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕೋಲ್ಕತ್ತಾದಲ್ಲಿ ನಡೆಯಲಿರುವ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಮಹಾಮೈತ್ರಿಕೂಟದ ಮಾತುಕತೆಗಳು ಆರಂಭವಾದಾಗ ಕೆ.ಚಂದ್ರಶೇಖರರಾವ್ ಮುಂಚೂಣಿಯಲ್ಲಿದ್ದರು. ಅವರು ಕೋಲ್ಕತ್ತಾಗೆ ತೆರಳಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದರು. ಆದರೆ, ಈಗ ಅವರನ್ನು ದೂರವಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ತೆಲಂಗಾಣ ವಿಧಾನಸಭೆ ವಿಸರ್ಜನೆ ಮಾಡಿದ ಬಳಿಕ ಕೆ.ಚಂದ್ರಶೇಖರರಾವ್ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಆದ್ದರಿಂದ, ಅವರನ್ನು ಮಹಾಮೈತ್ರಿಕೂಟದ ಚಟುವಟಿಕೆಗಳಿಂದ ದೂರವಿಡಲಾಗಿದೆ. ತೆಲಂಗಾಣ ಚುನಾವಣೆಯಲ್ಲಿ ಬಿಜೆಪಿ ಜೊತೆ ಅವರು ರಹಸ್ಯ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಕೆ.ಚಂದ್ರಶೇಖರರಾವ್ ಅವರಿಗೆ ಹೋಲಿಕೆ ಮಾಡಿದರೆ ಮಮತಾ ಬ್ಯಾನರ್ಜಿ ಅವರು ಚಂದ್ರಬಾಬು ನಾಯ್ಡು ಅವರನ್ನು ಹೆಚ್ಚಾಗಿ ನಂಬುತ್ತಾರೆ. ಆದ್ದರಿಂದ, ಅವರಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಮಮತಾ ಮತ್ತು ಚಂದ್ರಬಾಬು ನಾಯ್ಡು ಆಗಮಿಸಿದ್ದರು. ಆಗಲೂ ಈ ಮೈತ್ರಿಕೂಟದ ಮಾತುಕತೆ ನಡೆದಿತ್ತು.
ಮಹಾಮೈತ್ರಿಕೂಟದ ಬೆಳವಣಿಗೆಗಳನ್ನು ದೇಶದ ಹಲವು ಪಕ್ಷಗಳು ಗಂಭೀರವಾಗಿ ನೋಡುತ್ತಿವೆ. ಅದರಲ್ಲೂ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ವೀಕ್ಷಿಸುತ್ತಿವೆ. ಈ ಎರಡು ಪಕ್ಷಗಳು ಕಾಂಗ್ರೆಸ್ ಜೊತೆ ಸೇರಿ 2019ರ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧವಿಲ್ಲ.












Click it and Unblock the Notifications