ಬಂಗಾಳ ಸಿಎಂ ಭದ್ರತಾ ಅಧಿಕಾರಿಯನ್ನು ತೆಗೆದು ಹಾಕಿದ ಆಯೋಗ
ಕೋಲ್ಕತ್ತಾ, ಏಪ್ರಿಲ್ 09: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರತಾ ಅಧಿಕಾರಿ ಅಶೋಕ ಚಕ್ರವರ್ತಿ ಅವರನ್ನು ಕೇಂದ್ರ ಚುನಾವಣಾ ಆಯೋಗ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ.
ಅಶೋಕ ಚಕ್ರವರ್ತಿ ಅವರನ್ನು ಪಶ್ಚಿಮ ಬಂಗಾಳದ ಡೈರೆಕ್ಟರೇಟ್ ಆಫ್ ಸೆಕ್ಯುರಿಟಿಯಲ್ಲಿ ಎಸ್ಪಿ ಶ್ರೇಣಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನೇಮಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ಮೊದಲೇ ಚುನಾವಣಾ ಆಯೋಗ (ಇಸಿ) ಮೂವರು ಚುನಾವಣಾ ಅಧಿಕಾರಿಗಳನ್ನು ಬೇರೆ ವಲಯದ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ.
ಏಪ್ರಿಲ್ 10ರಂದು ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತರದ ಮತದಾನ ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ದಿನ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಚುನಾವಣಾ ಆಯೋಗವು ಮೂವರು ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸೂಚನೆಯನ್ನು ನೀಡಿದೆ.

ಬಂಗಾಳದಲ್ಲಿ ವರ್ಗಾವಣೆಯಾದ ಅಧಿಕಾರಿಗಳು:
ಕೇಂದ್ರ ಚುನಾವಣಾ ಆಯೋಗ ನೀಡಿದ ಸೂಚನೆಯಲ್ಲಿ ಪುರ್ಬಾ ಬರ್ದಮನ್ ಅಧಿಕಾರಿ ಎನೌರ್ ರೆಹಮಾನ್, ಪಶ್ಚಿಮ ಬರ್ದಮನ್ ಅಧಿಕಾರಿ ಪುರ್ನೆಂದು ಕುಮಾರ್ ಮಾಝಿ ಮತ್ತು ದಕ್ಷಿಣ ದಿನಜಪುರ್ ಅಧಿಕಾರಿ ನಿಖಿಲ್ ನಿರ್ಮಲ್ ಅವರನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅದರ ಜೊತೆಗೆ ಈ ಅಧಿಕಾರಿಗಳನ್ನು ಯಾವುದೇ ರೀತಿ ಚುನಾವಣಾ ಕಾರ್ಯಗಳಿಗೆ ನೇಮಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಈ ಮೂವರು ಅಧಿಕಾರಿಗಳ ಹುದ್ದೆಗೆ ಶಿಲ್ಪಾ ಗೌರಿಸಾರಿಯಾ, ಸಿ ಮುರುಗನ್ ಮತ್ತು ಅನುರಾಗ್ ಶ್ರೀವಾಸ್ತವ್ ಅವರನ್ನು ನೇಮಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೂರು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು 3ನೇ ಹಂತದ ಮತದಾನ ಮುಗಿದಿದೆ. ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.












Click it and Unblock the Notifications