ವಿಸ್ಟ್ರಾನ್ ಘಟಕದ ಗಲಭೆ; 7 ಸಾವಿರ ಜನರ ವಿರುದ್ಧ ಪ್ರಕರಣ ದಾಖಲು!
ಕೋಲಾರ, ಡಿಸೆಂಬರ್ 15: ಕೋಲಾರ ಸಮೀಪದ ನಸರಾಪುರದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಘಟಕದಲ್ಲಿ ಶನಿವಾರ ಗಲಭೆ ನಡೆದಿದೆ. ವೇತನ ಪಾವತಿ ಮಾಡಿಲ್ಲ ಎಂದು ನೌಕರರು ನಡೆಸಿದ ಹಿಂಸಾತ್ಮಕ ಹೋರಾಟಕ್ಕೆ ನೂರಾರು ಕೋಟಿ ರೂ. ನಷ್ಟ ಉಂಟಾಗಿದೆ. ಗಲಭೆಗೆ ಸಂಬಂಧಿಸಿದಂತೆ 7 ಸಾವಿರ ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
Recommended Video
ಸುಮಾರು 3 ಸಾವಿರ ಕೋಟಿ ವೆಚ್ಚದಲ್ಲಿ ಮೇಕ್ ಇನ್ ಇಂಡಿಯಾ ಹಾಗೂ ಚೀನಾ ಸರಕುಗಳಿಗೆ ಸೆಡ್ದು ಹೊಡೆಯಲು ಕೋಲಾರದಲ್ಲಿ ವಿಸ್ಟ್ರಾನ್ ಘಟಕ ನಿರ್ಮಾಣ ಮಾಡಲಾಗಿತ್ತು. ಶನಿವಾರ ಈ ಘಟಕದಲ್ಲಿ ನಡೆದ ಗಲಭೆ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಈ ಗಲಾಟೆಯಿಂದ ಕಂಪನಿಗೆ ಸುಮಾರು 400 ಕೋಟಿಗೂ ಅಧಿಕ ನಷ್ಟವಾಗಿದೆ.
ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ; 156 ಮಂದಿ ಬಂಧನ
ವೇತನ ವಿಚಾರದಲ್ಲಿ ಶುಕ್ರವಾರ ಸಂಜೆಯಿಂದ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಹಾಗೂ ಆಡಳಿತ ಮಂಡಳಿಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಶನಿವಾರ ಅದು ತೀವ್ರ ಸ್ವರೂಪ ಪಡೆದುಕೊಂಡು ದೇಶವೇ ತಿರುಗಿ ನೋಡುವಂತೆ ಮಾಡಿತು.
ಕೋಲಾರದ ಮೊಬೈಲ್ ಘಟಕ ವಿಸ್ತರಣೆ ಮಾಡಲಿದೆ ವಿಸ್ಟ್ರಾನ್
ಘಟಕದಲ್ಲಿ ನಡೆದ ದಾಂಧಲೆ ಪ್ರಕರಣದ ಸಂಬಂಧ 7 ಸಾವಿರ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 500ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಕೆಲವು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆಕ್ರೋಶಗೊಂಡಿದ್ದ ಯುವಕ/ ಯುವತಿಯರು ಶನಿವಾರ ಘಟಕದಲ್ಲಿ ಗಲಾಟೆ ಮಾಡಿದ್ದಾರೆ, ಘಟಕವನ್ನು ಧ್ವಂಸ ಮಾಡಿದ್ದಾರೆ.
ಐಫೋನ್ ಕಂಪನಿ ಗಲಭೆ: ಆರೋಪಿತರಿಗೆ ಕ್ರೂರ ಶಿಕ್ಷೆ ?
ನೌಕರರೇ ಆರಂಭಿಸಿದ ಗಲಾಟೆ
ಡಿಸೆಂಬರ್ 12ರ ಶನಿವಾರ ಮುಂಜಾನೆ 3.30ರ ಸುಮಾರಿಗೆ ವಿಸ್ಟ್ರಾನ್ ಘಟಕದಲ್ಲಿ ಸಾವಿರಾರು ನೌಕರರು ಪ್ರತಿಭಟನೆ ಆರಂಭಿಸಿದರು. ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು. ಕಾರುಗಳಿಗೆ ಬೆಂಕಿ ಹಚ್ಚಿದರು. ಪೀಠೋಪಕರಣ ಧ್ವಂಸ ಮಾಡಿದರು. ಕಂಪ್ಯೂಟರ್ಗಳನ್ನು ಒಡೆದು ಹಾಕಿದರು. ನೌಕರರ ಹೋರಾಟದ ಕಿಚ್ಚಿಗೆ ನೂರಾರು ಕೋಟಿ ನಷ್ಟವಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗಲಾಟೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ವಿವಿಧ ಜೈಲುಗಳಿಗೆ ಕಳುಹಿಸಲಾಗಿದೆ
ದಾಂಧಲೆಯಿಂದಾಗಿ ಘಟಕದಲ್ಲಿ ಐಫೋನ್ ಲೂಟಿಯಾಗಿದೆ. ವಿಸ್ಟ್ರಾನ್ ಕಂಪನಿಗೆ ಸುಮಾರು 400 ಕೋಟಿ ನಷ್ಟವಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ಪೊಲೀಸರಿಗೆ ಹಾಗೂ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದಾರೆ. ಇದುವರೆಗೂ ಸುಮಾರು 500 ಜನರನ್ನು ಬಂಧಿಸಲಾಗಿದೆ. 149 ಜನರನ್ನು ಬಂಧಿಸಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಚಿತ್ರದುರ್ಗ, ಕೆಜಿಎಫ್ ಹಾಗೂ ಚಿಂತಾಮಣಿ ಜೈಲಿಗೆ ಕಳುಹಿಸಲಾಗಿದೆ. ಆರೋಪಿಗಳಿಗೆ ಪೊಲೀಸರಿಗೆ ಲಾಠಿ ರುಚಿ ತೋರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ
ಗಲಭೆ ನಡೆದ ಸಂಪೂಣ೯ ದೃಶ್ಯಗಳು ಹೆಚ್ಡಿ ಕ್ವಾಲಿಟಿ ಸಿಸಿಟಿಬಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಲಾ ನೌಕರರ ವಿಚಾರಣೆ ನಡೆಸಲಾಗುತ್ತಿದ್ದು, ವಾಟ್ಸಪ್ ಚಾಟ್, ಕರೆಯನ್ನು ಆಧರಿಸಿ ಕೃತ್ಯ ಎಸಗಿದವರನ್ನು ಬಂಧಿಸಲಾಗುತ್ತಿದೆ. 6 ಖಾಸಗಿ ಏಜೆನ್ಸಿಗಳ ಮೂಲಕ 8,490 ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ಹಾಗೂ 1,343 ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಕಂಪನಿ ನೇಮಿಸಿಕೊಂಡಿತ್ತು. ಕೋಲಾರದ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
7 ಸಾವಿರ ಜನರ ವಿರುದ್ಧ ಪ್ರಕರಣ
ಕಂಪನಿಯಿಂದ ಒಟ್ಟು 7 ಸಾವಿರ ಕಾರ್ಮಿಕರ ವಿರುದ್ದ ದೂರು ನೀಡಿದ್ದು, ಇದರಲ್ಲಿ 5 ಸಾವಿರ ಕಾರ್ಮಿಕರು ಪ್ರಮುಖ ಆರೋಪಿಗಳು. 2 ಸಾವಿರ ಕಾರ್ಮಿಕರು ಎ 2 ಆರೋಪಿಗಳಾಗಿದ್ದಾರೆ. ಉಪಕರಣ, ವಾಹನ, ಧ್ವಂಸವಾಗಿದೆ. 10 ಕೋಟಿ ಬೆಳೆಬಾಳುವ ಉಪಕರಣಗಳು ಕಳುವಾಗಿದೆ ಎಂದು ಕಂಪನಿ ದೂರಿನಲ್ಲಿ ಹೇಳಿದೆ. ದಾಂಧಲೆ, ಆಸ್ತಿ-ಪಾಸ್ತಿಗೆ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ದರೋಡೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಲಾರ ಸಂಸದ ಮುನಿಸ್ವಾಮಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೇಗ ತನಿಖೆ ಪೂರ್ಣಗೊಳ್ಳಲಿದೆ
ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ಈ ಕುರಿತು ಹೇಳಿಕೆ ನೀಡಿದ್ದು, "ಧಾಂದಲೆಗೆ ಪ್ರಮುಖ ಕಾರಣ ಏನೆಂದು ತಿಳಿದುಬಂದಿಲ್ಲ, ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಕಂಪನಿಯಲ್ಲಿ 1500 ಮಂದಿ ಖಾಯಂ, 10 ಸಾವಿರ ಮಂದಿ ಗುತ್ತಿಗೆ ನೌಕರರು ಇದ್ದಾರೆ. ಸಂಬಳ ನೀಡದ ಏಜೆನ್ಸಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ಹಾನಿಯಾಗಿದೆ, ಘಟಕ ಪುನಃ ಆರಂಭವಾಗಲು ಮೂರು ತಿಂಗಳು ಬೇಕಾಗಬಹುದು" ಎಂದು ಹೇಳಿದ್ದಾರೆ.