ಮಾಲೂರಿನಲ್ಲಿ ಆನೆ ಕಾಡಿಗಟ್ಟುವಾಗ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಇಬ್ಬರ ಸಾವು
ಕೋಲಾರ, ಮಾರ್ಚ್ 3: ಕಳೆದ ಹಲವು ವರ್ಷಗಳಿಂದ ಕೋಲಾರ ಜಿಲ್ಲೆಯ ಗಡಿಯಲ್ಲಿ ಕಾಡಾನೆ ಹಾವಳಿ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ನಿನ್ನೆಯೂ ತಮಿಳುನಾಡಿನಿಂದ ಬಂದಿರುವ ಆನೆ ಹಿಂಡನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಇಬ್ಬರು, ಕಾಡಾನೆ ದಾಳಿಯಿಂದಾಗಿ ಸಾವನ್ನಪ್ಪಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ನೂಟವೆ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗುಟ್ಟು ಮುನಿಯಪ್ಪ (55) ಹಾಗೂ ಕೊಮ್ಮನಳ್ಳಿ ಗ್ರಾಮದ ಆನಂದಯ್ಯ (45) ಅವರ ಮೇಲೆ ಆನೆಗಳ ಹಿಂಡು ದಾಳಿ ನಡೆಸಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬಂಡೀಪುರದಲ್ಲಿ ನಾಡಿನತ್ತ ನುಸುಳುವ ಆನೆಗಳ ಅಟಾಟೋಪಕ್ಕೆ ಬ್ರೇಕ್
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಸಚಿವ ಆನಂದ್ ಸಿಂಗ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡುವ ಭರವಸೆ ನೀಡಿದರು. ಪದೇ ಪದೇ ಆನೆ ದಾಳಿಯಿಂದ ಆಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗುತ್ತದೆ, ಆನೆ ಕಾರಿಡಾರ್ ಅಥವಾ ಬ್ಯಾರಿಕೇಡ್ ನಿರ್ಮಾಣ, ಹೀಗೆ ಪರಿಹಾರಕ್ಕೆ ಶಾಶ್ವತ ಯೋಜನೆ ರೂಪಿಸುವುದಾಗಿ ತಿಳಿಸಿದರು.
ಆನೆಗಳಿಂದ ಪದೇ ಪದೇ ದಾಳಿ ನಡೆಯುತ್ತಿದ್ದರೂ ಸರಿಯಾದ ಕ್ರಮ ವಹಿಸದ ಅಧಿಕಾರಿಗಳನ್ನು ಸ್ಥಳೀಯರು ಸಚಿವರ ಮುಂದೆ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.