ಕೆಜಿಎಫ್ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಇಳಿದಿದ್ದ ಮೂವರ ಸಾವು
ಕೋಲಾರ, ಮೇ 14: ಚಿನ್ನದ ಗಣಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದವರಲ್ಲಿ ಮೂರು ಜನ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನ ಮೈಸೂರು ಮೈನ್ಸ್ ಸಿಂಕ್ ಒಳಗೆ ನಡೆದಿದೆ.
ತಡರಾತ್ರಿ ಐದು ಜನರ ಗುಂಪೊಂದು ಕಳ್ಳತನ ಮಾಡಲೆಂದು ಬಿಜಿಎಂಎಲ್ ಒಳ ಪ್ರವೇಶಿಸಿದ್ದು ಅಲ್ಲಿನ ಮೈಸೂರು ಮೈನ್ಸ್ ನ ಸಿಂಕ್ ಒಳಗೆ ಮೊದಲು ಸ್ಕಂದ ಎಂಬಾತ ರೋಪ್ ಬಳಸಿ ಇಳಿದಿದ್ದಾನೆ. ನಂತರ ತನ್ನ ಜೊತೆ ಬಂದಿದ್ದ ಮತ್ತೊಬ್ಬನೂ ಸಹ ರೋಪ್ ಬಳಸಿ ಒಳಗೆ ಇಳಿದು ಒಳಗೆ ಹೋದ ಹತ್ತು ನಿಮಿಷಗಳ ನಂತರ ಮೂರನೇ ವ್ಯಕ್ತಿ ಒಳಗೆ ಇಳಿಯಲು ಮುಂದಾಗುತ್ತಾನೆ.
ಸಿಂಕ್ ನ 20 ಅಡಿ ಆಳಕ್ಕೆ ಇಳಿದ ಕೂಡಲೇ ಮೇಲಿರುವವರಿಗೆ ನನ್ನನ್ನು ಮೇಲಕ್ಕೆ ಕರೆದುಕೊಳ್ಳಿ, ಉಸಿರಾಡಲು ತೊಂದರೆಯಾಗುತ್ತಿದೆ ಎಂದು ಗೋಗರೆಯುತ್ತಾನೆ. ಮೇಲಕ್ಕೆ ಬಂದ ಈತನ ಪರಿಸ್ಥಿತಿ ನೋಡಿ ಉಳಿದವರು ಕೆಳಗೆ ಇಳಿದ ಸ್ಕಂದ ಮತ್ತು ಮತ್ತೊಬ್ಬನಿಗೆ ಫೋನಿನ ಮೂಲಕ ಟಾರ್ಚ್ ಹಾಗೂ ಕಾಲ್ ಮಾಡುತ್ತಾರೆ.

ಪತ್ತೆ ಸಿಗದೇ ಹೋದಾಗ ಗಾಬರಿಗೊಂಡು ಸ್ಕಂದನ ಮಗನಿಗೆ ಫೋನ್ ಮೂಲಕ ವಿಷಯ ತಿಳಿಸಿದಾಗ ಸ್ಥಳಕ್ಕೆ ಬಂದ ಮಗ ತಂದೆಯನ್ನು ರಕ್ಷಿಸಲು ಒಳಗೆ ಇಳಿಯುತ್ತಾರೆ. ಆಗ ಆತನು ಉಸಿರಾಟದ ತೊಂದರೆಯಿಂದ ಒಳಗೆ ಸಾವನ್ನಪ್ಪುತ್ತಾನೆ.
2001 ರಲ್ಲಿ ಬಿಜಿಎಂಎಲ್ ಮುಚ್ಚಿದ್ದು, ಆಗ ಹಲವಾರು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಕಳೆದ ಮೂರು ವರ್ಷಗಳಿಂದ ಯಾವುದೇ ಕಳ್ಳತನ ಪ್ರಕರಣ ನಡೆದಿರಲಿಲ್ಲ. ಇಂದು ಕಳ್ಳತನಕ್ಕೆ ಯತ್ನಿಸಿದವರು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಸಿಂಕ್ ಒಳಗೆ ಸಾವನ್ನಪ್ಪಿದ ಮೂರು ವ್ಯಕ್ತಿಗಳಲ್ಲಿ ಇಬ್ಬರನ್ನು ಮೇಲಕ್ಕೆತ್ತಿದ್ದು, ಉಳಿದ ಒಬ್ಬನಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ಕಳ್ಳತನ ಮಾಡಲು ಯತ್ನಸಿದ ಮೂರು ಜನರ ಮೇಲೆ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications