ನಿವೃತ್ತಿ ಹೊಂದಿದ ಮರುದಿನವೇ ಯೋಧನಿಗೆ ಹೃದಯಾಘಾತ; ಸಾವು
ಕೋಲಾರ, ಫೆಬ್ರವರಿ 2: ಸೇನೆಯಿಂದ ನಿವೃತ್ತಿ ಹೊಂದಿದ ಮರುದಿನವೇ ಯೋಧನಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.
ನಿವೃತ್ತಿ ಹೊಂದಿದ್ದ ಯೋಧ ಮಂಜುನಾಥ್ (36) 16 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶಸೇವೆ ಸಲ್ಲಿಸಿ ಜನವರಿ 31 ರಂದು ಬೆಂಗಳೂರಿನ ಸೇನಾ ಕಚೇರಿಯಲ್ಲಿ ನಿವೃತ್ತಿ ಹೊಂದಿದರು.
ನಿನ್ನೆ ಫೆಬ್ರವರಿ 1ರಂದು ತವರಿಗೆ ವಾಪಸು ಆಗಿದ್ದರು. ನಿವೃತ್ತಿ ನಂತರ ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯಬೇಕಾಗಿದ್ದ ಯೋಧ ಮಂಜುನಾಥ್ ಹೃದಯಾಘಾತದಿಂದ ಸಾವನ್ನಪ್ಪಿದರು.

ಕೋಲಾರದ ಅಂಬೇಡ್ಕರ್ ನಗರದಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ಯೋಧ ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ ಸೇರಿದಂತೆ ವಿವಿದೆಡೆ ಕರ್ತವ್ಯ ನಿರ್ವಹಿಸಿದ್ದರು.

ನಾಳೆ ಫೆ.೩ರಂದು ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿಯ ಯೋಧನ ಸ್ವಗ್ರಾಮವಾದ ಕೊಡಗುರ್ಕಿಯಲ್ಲಿ ಅಂತಿಮ ನಮನ ಸಲ್ಲಿಸಿ, ಅಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ. ಮೃತ ನಿವೃತ್ತ ಯೋಧ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಟುಂಬದವರು ಹಾಗೂ ಗ್ರಾಮಸ್ಥರು ದುಃಖ ತಪ್ತರಾಗಿದ್ದಾರೆ.












Click it and Unblock the Notifications