ಸೂಕ್ಷ್ಮಕಲೆಯಲ್ಲಿ ಗಿನ್ನಿಸ್ ದಾಖಲೆ; ಇದು ಕೋಲಾರದ ಪ್ರತಿಭೆಯ ಅಸಾಧಾರಣ ಕಲೆ
ಕೋಲಾರ, ಫೆಬ್ರವರಿ 04: ಚಿಕ್ಕಂದಿನಿಂದಲೇ ಸೂಕ್ಷ್ಮ ಕಲೆಯತ್ತ ಮನಸ್ಸು ಹೊರಳಿಸಿದ್ದ ಇವರು ಇದೀಗ ಆ ಕಲೆಯಿಂದಲೇ ವಿಶ್ವದ ಗಮನ ಸೆಳೆದಿದ್ದಾರೆ. ತಮ್ಮ ಕೈ ಚಳಕದ ಮೂಲಕ ಬಳಪ, ಟೂತ್ ಪಿಕ್, ಅಕ್ಕಿಕಾಳಿನಲ್ಲಿ ಸಾವಿರಾರು ಸೂಕ್ಷ್ಮ ಕಲಾಕೃತಿಗಳನ್ನು ರಚಿಸಿ, ಸೂಕ್ಷ್ಮ ಕಲಾಕೃತಿಗಳ ರಚನೆಯಲ್ಲಿ ಗಿನ್ನೀಸ್ ದಾಖಲೆಯನ್ನೂ ಮಾಡಿದ್ದಾರೆ.
ಅವರೇ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಗಡಿತೊಪ್ಪನಹಳ್ಳಿ ಮೂಲದ ಮಲ್ಲಿಕಾರ್ಜುನ ರೆಡ್ಡಿ. ಬಿಎಸ್ ಸಿ ಬಯೋಟೆಕ್ನಾಲಜಿ ಓದಿರುವ ಇವರು ವೃತ್ತಿಯಲ್ಲಿ ಸಂಶೋಧಕರು. ಹವ್ಯಾಸವಾಗಿ ಅವರ ಜೊತೆ ಸೂಕ್ಷ್ಮ ಕಲಾಕೃತಿಗಳ ರಚನೆ ಇದೆ. ಅದರಲ್ಲೇ ಹಲವು ಮಾದರಿಗಳನ್ನು ತಯಾರಿಸಿ ಎಲ್ಲರ ಕಣ್ಸೆಳೆಯುವಂತೆ ಮಾಡಿದ್ದಾರೆ.

ಟೂತ್ ಪಿಕ್ ನಲ್ಲಿ 28 ಲಿಂಕ್
ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ, ವಿಶೇಷ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೂತ್ ಪಿಕ್ ನಲ್ಲಿ 17 ಚೈನ್ ಲಿಂಕ್ ಮಾಡಿ ದಾಖಲೆ ಮಾಡಿದ್ದ ಅಮೆರಿಕಾದ ದಾಖಲೆಯನ್ನು ಹಿಂದಟ್ಟಿ ಟೂತ್ ಪಿಕ್ ನಲ್ಲಿ 28 ಲಿಂಕ್ ಮಾಡುವ ಮೂಲಕ 2005ರ ಫೆಬ್ರವರಿ 21 ರಂದೇ ಮಲ್ಲಿಕಾರ್ಜುನ ರೆಡ್ಡಿ ಗಿನ್ನೀಸ್ ವಿಶ್ವ ದಾಖಲೆ ಪುಟ ಸೇರಿದ್ದಾರೆ.
ಇನ್ನು ಸೀಮೆ ಸುಣ್ಣದಲ್ಲಿ 62 ಸಾವಿರ ವಿವಿಧ ಗಣ್ಯರ, ಸ್ಥಳಗಳ, ದೇವರ ವಿಗ್ರಹಗಳನ್ನು ಕೆತ್ತನೆ ಮಾಡಿರುವ ಇವರು ಒಂದೇ ಅಕ್ಕಿ ಕಾಳಿನಲ್ಲಿ 18 ವಿವಿಧ ವಿಗ್ರಹಗಳನ್ನು ಮಾಡಿರುವುದು ಮತ್ತೊಂದು ವಿಶೇಷ ಸಾಧನೆ.

ಚಿತ್ರಕಲಾ ಪರಿಷತ್ ನಲ್ಲಿ ಬೆಳಕಿಗೆ ಬಂದ ಪ್ರತಿಭೆ
ಇನ್ನು ಮಲ್ಲಿಕಾರ್ಜುನ್ ಚಿಕ್ಕಂದಿನಿಂದ ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ಸೂಕ್ಷ್ಮ ಕಲೆಗಳಲ್ಲಿ ಆಸಕ್ತಿ ಹೊಂದಿದ್ದರು. ಮಲ್ಲಿಕಾರ್ಜುನ್ ಲಾಸ್ಟ್ ಬೆಂಚ್ ವಿದ್ಯಾರ್ಥಿ. ಕೊನೆ ಬೆಂಚ್ ನಲ್ಲಿ ಕುಳಿತುಕೊಂಡು ತನ್ನ ಕೈಗೆ ಸುಲಭವಾಗಿ ಸಿಗುತ್ತಿದ್ದ ಅಕ್ಕಿ ಕಾಳು, ಸೀಮೆ ಸುಣ್ಣ, ಟೂತ್ ಪಿಕ್ ನಲ್ಲಿ ವಿವಿಧ ಕಲಾಕೃತಿಗಳನ್ನು ಬಿಡಿಸುತ್ತಾ ಈ ಮಟ್ಟಕ್ಕೆ ಬೆಳೆದಿದ್ದಾರೆ ಈ ಗ್ರಾಮೀಣ ಪ್ರತಿಭೆ.
ಇವರ ಸೂಕ್ಷ್ಮ ಕಲೆಗೆ ಮೊದಲು ಇವರ ಮನೆಯಲ್ಲಿ ವಿರೋಧ ಇತ್ತು. ಹಾಗಾಗಿ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಎಂದು ಹೋದಾಗ ಚಿತ್ರಕಲಾ ಪರಿಷತ್ ನಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ.

ವಿವಿಧ ವಿಶ್ವವಿದ್ಯಾಲಯಗಳಿಂದ ಹಲವು ಪುರಸ್ಕಾರಗಳು
ಅದಾದ ಬಳಿಕ ವಿಶ್ವ ದಾಖಲೆಯ ಹಂತ ತಲುಪಿರುವ ಇವರು, ಸದ್ಯ ಹರಪ್ಪ-ಮಹೆಂಜೋದಾರೋ ಸಂಸ್ಕೃತಿ ಕುರಿತು ಹೆಚ್ಚಿನ ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.ಇವರ ಸಾಧನೆ ಪರಿಗಣಿಸಿ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳು ವಿಶೇಷ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ದೇಶದ ಹಲವು ಗಣ್ಯರಿಂದ ಪ್ರಶಂಸೆಗಳು ದೊರೆತಿವೆ. ಸದ್ಯ ತೊಪ್ಪನಹಳ್ಳಿಯಲ್ಲಿ ತಂದೆ ತಾಯಿಯ ಜೊತೆಗೆ ವಾಸವಾಗಿದ್ದಾರೆ.

ಸರ್ಕಾರದಿಂದ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಮಲ್ಲಿಕಾರ್ಜುನ್
ಸೂಕ್ಷ್ಮ ಕಲೆಯ ಸಂಶೋಧನೆಯ ಜೊತೆಗೆ, ಸಮಾಜ ಸೇವೆಯಲ್ಲಿ ತೊಡಗಿರುವ ಮಗ ಮಲ್ಲಿಕಾರ್ಜುನ ಬಗ್ಗೆ ತಂದೆ ಚಂಗಲರಾಯರೆಡ್ಡಿ ಅವರಿಗೆ ಮೆಚ್ಚುಗೆಯಿದೆ.
ಸೂಕ್ಷ್ಮ ಕಲೆಯಿಂದಲೇ ಬಹುದೊಡ್ಡ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿರುವ ಮಲ್ಲಿಕಾರ್ಜುನ ರೆಡ್ಡಿ, ಗಿನ್ನೀಸ್ ದಾಖಲೆ ಮಾಡಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತಷ್ಟು ಮಗದಷ್ಟು ಸಾಧನೆ ಮಾಡಬೇಕೆನ್ನುವ ಹಂಬಲದಿಂದ ಮುಂದಾಗಿರುವ ಇವರಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ.











Click it and Unblock the Notifications