ಕೋಲಾರ ಕ್ಷೇತ್ರದಲ್ಲಿ ಗೆದ್ದು ಬೀಗಿದ ಕೊತ್ತೂರು ಮಂಜುನಾಥ್!
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆಂಬ ಊಹಾಪೋಹದ ನಂತರ ಕೋಲಾರ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿತ್ತು. ಆದರೆ ಕೊನೆಗೆ ಕಾಂಗ್ರೆಸ್ ಪಕ್ಷದಿಂದ ಕೊತ್ತೂರು ಮಂಜುನಾಥ್ಗೆ ಟಿಕೆಟ್ ಸಿಕ್ಕು ವರ್ತೂರ್ ಪ್ರಕಾಶ್ ವಿರುದ್ಧ ಅಖಾಡಕ್ಕೆ ಇಳಿದಿದ್ದರು. ಈಗ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಕೊತ್ತೂರು ಮಂಜುನಾಥ್ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿದ್ದ ವರ್ತೂರು ಪ್ರಕಾಶ್ 50,278 ಮತ ಪಡೆದು 3ನೇ ಸ್ಥಾನ ಪಡೆದರೆ, ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ 52,365 ಮತಗಳ ಮೂಲಕ 2ನೇ ಸ್ಥಾನ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಟ್ರಿ ಕೊಟ್ಟಿದ್ದ ಕೊತ್ತೂರು ಮಂಜುನಾಥ್ 83,156 ಮತ ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಆರಂಭದಿಂದಲೂ ಭಾರಿ ಕುತೂಹಲ ಮೂಡಿತ್ತು. ನಂತರ ಕೊತ್ತೂರು ಮಂಜುನಾಥ್ ಮುನ್ನಡೆ ಸಾಧಿಸುತ್ತಾ ಬಂದರು. ಅಂತಿಮವಾಗಿ ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದಿದ್ದಾರೆ.

2 ಲಕ್ಷಕ್ಕೂ ಹೆಚ್ಚು ಮತದಾರರು
ಕ್ಷೇತ್ರದಲ್ಲಿ ಜನರು ಹೆಚ್ಚಾಗಿ ಕೃಷಿಕರು. ಪ್ರಮುಖವಾಗಿ ರೇಷ್ಮೆ, ಹಾಲು, ಜೊತೆಗೆ ನರಸಾಪುರ ಹಾಗೂ ವೇಮಗಲ್ ಕೈಗಾರಿಕಾ ಪ್ರದೇಶಗಳು ಈ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ಜನ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡ್ತಾರೆ. ಕ್ಷೇತ್ರದಲ್ಲಿ 1,15,107 ಪುರುಷ, 1,16,583 ಮಹಿಳಾ ಮತದಾರರು ಸೇರಿ ಒಟ್ಟು 2,31,742 ಮತದಾರರಿದ್ದಾರೆ. ಕೋಲಾರ ಕ್ಷೇತ್ರ ವ್ಯಾಪ್ತಿಗೆ ನಾಲ್ಕು ಹೋಬಳಿಗಳು ಒಳಪಡುತ್ತವೆ ಕೋಲಾರ ಕಸಬಾ, ವೇಮಗಲ್, ವಕ್ಕಲೇರಿ, ನರಸಾಪುರ ಹೋಬಳಿಗಳು ಒಡಪಡುತ್ತವೆ.
ಹೇಗಿತ್ತು ಮತದಾರರ ಲೆಕ್ಕಾಚಾರ?
ಕೋಲಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಾಗಿದೆ. ಮುಸ್ಲಿಂ ಸಮುದಾಯದ ಮತಗಳ ಸಂಖ್ಯೆ 2ನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಒಕ್ಕಲಿಗರು, ಕುರುಬ, ಪಳ್ಳಿಗರು, ಬಲಿಜಿಗ, ಗೊಲ್ಲ ಸಮುದಾಯದ ಮತದಾರರಿದ್ದಾರೆ. ಕೋಲಾರ ನಗರದಲ್ಲಿ ಮುಸ್ಲಿಂ ಸಮುದಾಯ ಮತ್ತು ಕಸಾಬ ಹೋಬಳಿಯಲ್ಲಿ ಒಕ್ಕಲಿಗರು, ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ವೇಮಗಲ್ ಹೋಬಳಿಯಲ್ಲಿ ಒಕ್ಕಲಿಗರು, ಹಿಂದುಳಿದ ವರ್ಗದವರಿದ್ದು, ನರಸಾಪುರ ಹೋಬಳಿಯಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಒಕ್ಕಲಿಗರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.












Click it and Unblock the Notifications