ಕೋಲಾರಕ್ಕೆ ಮುನಿಯಪ್ಪ ಬೇಡ,ಎಚ್.ಸಿ.ಮಹದೇವಪ್ಪ ಬೇಕು:ಕೈ ಶಾಸಕರ ಒತ್ತಾಯ
ಕೋಲಾರ, ಮಾರ್ಚ್ 18: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಮಧ್ಯೆ ಅಸಮಾಧಾನದ ಹೊಗೆ ಎದ್ದಿದ್ದು, ಶಾಸಕರು ಮುನಿಯಪ್ಪ ವಿರುದ್ಧ ನಿಂತಿದ್ದಾರೆ.
ಕಾಂಗ್ರೆಸ್ನ ಕೆ.ಎಚ್.ಮುನಿಯಪ್ಪ ಅವರು ಕೋಲಾರ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಎಂಟನೇ ಬಾರಿ ಕೋಲಾರದಿಂದಲೇ ಸ್ಪರ್ಧೆಗೆ ಸಕಲ ಸಿದ್ಧತೆ ನಡೆಸಿದ್ದಾರೆ. ಆದರೆ ಅವರಿಗೆ ಅವರದ್ದೇ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬಂಗಾರಪೇಟೆ ಕ್ಷೇತ್ರದ ಶಾಸಕ ನಾರಾಯಣಸ್ವಾಮಿ ಅವರು ಸಂಸದ ಮುನಿಯಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಮುನಿಯಪ್ಪ ಅವರ ಬದಲಿಗೆ ಎಚ್.ಸಿ.ಮಹದೇವಪ್ಪ ಅವರಿಗೆ ಕೋಲಾರ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆ.ಎಚ್.ಮುನಿಯಪ್ಪ ಅವರು ಶಾಸಕರಾದ ನಂಜೇಗೌಡ, ಕೃಷ್ಣಾ ರೆಡ್ಡಿ, ಎಚ್.ನಾಗೇಶ್, ವಿ.ಮುನಿಯಪ್ಪ ಮುಖಂಡ ಕೊತ್ತನೂರು ಮಂಜುನಾಥ ಅವರುಗಳನ್ನು ಮೂಲೆಗುಂಪು ಮಾಡಿದ್ದಾರೆ ಹಾಗಾಗಿ ಅವರಿಗೆ ಟಿಕೆಟ್ ನೀಡಬಾರದು, ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ನಾವು ಅವರ ವಿರುದ್ಧವಾಗಿ ಕೆಲಸ ಮಾಡುತ್ತೇವೆ ಎಂದು ಈಗಾಗಲೇ ವೇಣುಗೋಪಾಲ್ ಅವರಿಗೆ ತಿಳಿಸಿದ್ದಾರೆ.

ವೇಣುಗೋಪಾಲ್ಗೆ ದೂರು ನೀಡಿರುವ ಶಾಸಕರು
ವೇಣುಗೋಪಾಲ್ ಅವರು ಈ ಬಗ್ಗೆ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಮಾತನಾಡಿದ್ದಾರೆ. ಕೆ.ಎಚ್.ಮುನಿಯಪ್ಪ ಅವರು ಈ ಆರೋಪವನ್ನು ಅಲ್ಲಗಳೆದಿದ್ದು, ಎಲ್ಲ ಶಾಸಕರು ತಮ್ಮ ವಿಶ್ವಾಸದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಆದರೆ ಶಾಸಕರು ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.

ಏಳುಬಾರಿ ಗೆದ್ದಿರುವ ಮುನಿಯಪ್ಪ
ಏಳು ಬಾರಿ ಗೆದ್ದಿರುವ ಮುನಿಯಪ್ಪ ಅವರ ವಿರುದ್ಧ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ, ಹಾಗಾಗಿ ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸುವುದು ಸೂಕ್ತ. ಕ್ಷೇತ್ರದ ಜನರು ಬದಲಾವಣೆ ಕೋರುತ್ತಿದ್ದು, ಅಭ್ಯರ್ಥಿಯನ್ನು ಬದಲಾಯಿಸದಿದ್ದರೆ ಅದು ನಮಗೆ ಮಾರಕವಾಗುತ್ತದೆ ಎಂದು ಕೈ ಶಾಸಕರು ಹೈಕಮಾಂಡ್ ಬಳಿ ಹೇಳಿದ್ದಾರೆ.

ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಮೊರೆ
ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಎಚ್.ಸಿ.ಮಹದೇವಪ್ಪ ಅವರು ಸಹ ಸಿದ್ದರಾಮಯ್ಯ ಅವರ ಬಳಿ ಬಗ್ಗೆ ಮಾತನಾಡಿ ಹೈಕಮಾಂಡ್ ಮೇಲೆ ಒತ್ತಾಯ ಹೇರಿಸುತ್ತಿದ್ದಾರೆ ಎನ್ನಲಾಗಿದೆ. ಕೆ.ಎಚ್.ಮುನಿಯಪ್ಪ ಅವರಿಗೆ ರಾಜ್ಯಸಭಾ ಸೀಟು ಕೊಡಿಸುವ ಅಥವಾ ಅವರ ಮಗಳಿಗೆ ಸಚಿವ ಸ್ಥಾನ ಕೊಡಿಸುವ ಭರವಸೆ ನೀಡಿ ಕ್ಷೇತ್ರವನ್ನು ಮಹದೇವಪ್ಪ ಅವರಿಗೆ ಕೊಡಿಸುವ ತೆರೆಮರೆ ಯತ್ನಗಳು ದೆಹಲಿ ಮಟ್ಟದಲ್ಲಿ ನಡೆಯುತ್ತಿವೆ ಎನ್ನಲಾಗಿದೆ.

ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲ
ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಪರಸ್ಪರ ಎದುರಾಳಿಯಾಗಿತ್ತು. ಆದರೆ ಈ ಬಾರಿ ಮೈತ್ರಿ ಆಗಿರುವ ಕಾರಣ ಕೋಲಾರ ಕ್ಷೇತ್ರವು ಕಾಂಗ್ರೆಸ್ನ ಸುಪರ್ಧಿಗೆ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಇಲ್ಲಿ ಸುಲಭ ಗೆಲುವು ಎನ್ನಲಾಗುತ್ತಿದೆ. ಆದರೆ ಮುನಿಯಪ್ಪ ವಿರುದ್ಧ ಅವರದ್ದೇ ಪಕ್ಷದ ಶಾಸಕರು ಎದುರು ನಿಂತಿರುವುದು ಅವರ ಗೆಲ್ಲುವ ಆಸೆಯನ್ನು ಕಡಿಮೆಯಾಗಿಸಿದೆ.












Click it and Unblock the Notifications