ರಸ್ತೆ ವಿಸ್ತರಣೆ ಕಾಮಗಾರಿಗೆ ಒತ್ತಾಯಿಸಿ ಕೆಜಿಎಫ್ ಶಾಸಕಿ ಏಕಾಂಗಿ ಪ್ರತಿಭಟನೆ
ಕೋಲಾರ, ಸೆಪ್ಟೆಂಬರ್ 19: ರಸ್ತೆ ಅಗಲೀಕರಣ ಕಾಮಗಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಜಿಲ್ಲಾಡಳಿತ ಹಾಗೂ ಪಿಡಬ್ಲು ಡಿ ಇಲಾಖೆ ಅಧಿಕಾರಿಗಳ ವಿರುದ್ಧ ಕೆಜಿಎಫ್ ಶಾಸಕಿ ರೂಪ ಶಶಿಧರ್ ಅವರು ಜಿಲ್ಲಾಡಳಿತ ಕಾವೇರಿ ಮುಂಭಾಗ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೋಲಾರ ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಮುಂಭಾಗ ಕೆಜಿಎಫ್ ಶಾಸಕಿ ಮೌನ ಹೋರಾಟ ನಡೆಸುತ್ತಿದ್ದು, ಕೆಜಿಎಫ್ ನ ಅಶೋಕ ರಸ್ತೆಯನ್ನು ನಾಲ್ಕೈದು ವರ್ಷಗಳಿಂದ ಅಗಲೀಕರಣ ಮಾಡಲು ಅಧಿಕಾರಿಗಳು ಮುಂದಾಗದೇ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಆರು ತಿಂಗಳ ಹಿಂದೆ ತಮ್ಮ ಕ್ಷೇತ್ರದ ಜನರೊಟ್ಟಿಗೆ ಪಿಡಬ್ಲು ಡಿ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿದ್ದರೂ ರಸ್ತೆ ಅಗಲೀಕರಣ ಮಾಡಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಕೆಜಿಎಫ್ ನ ಅಶೋಕ ರಸ್ತೆ ಅಗಲೀಕರಣ ಕಾಮಗಾರಿಗೆ ಅನುಮೋದನೆ ಸಿಕ್ಕರೂ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಆಧಿಕಾರಿಗಳ ನಿರ್ಲಕ್ಷ್ಯದಿಂದ 6 ವರ್ಷವಾದರೂ ಇನ್ನೂ ಪ್ರಾರಂಭವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸೋಮವಾರದಿಂದ ಶುರುವಾಗುವ ವಿಧಾನಸಭೆಯ ಅಧಿವೇಶನಕ್ಕೂ ಗೈರಾಗಲು ತಿರ್ಮಾನಿಸಿರುವ ಶಾಸಕಿ ರೂಪಾ, ಸಮಸ್ಯೆ ಇತ್ಯರ್ಥವಾಗುವರೆಗೂ ಪ್ರತಿಭಟನೆ ಕೈಬಿಡದಿರಲು ನಿರ್ಧರಿಸಿದ್ದಾರೆ.

ಇನ್ನು ಕೋವಿಡ್ ಇರುವ ಕಾರಣ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆ ಅಗಲೀಕರಣ ಗಂಭೀರತೆಯನ್ನು ಜಿಲ್ಲಾಧಿಕಾರಿಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಇದಾಗಿದೆ. ರಸ್ತೆ ಅಗಲೀಕರಣ ವಿಚಾರದಲ್ಲಿ ಕ್ಷೇತ್ರದ ಜನರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರ ಪರವಾಗಿ ನಾನು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದೇನೆ ಎಂದರು.
ಜನತೆ ರಸ್ತೆ ಅಗಲೀಕರಣಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಪ್ರತಿದಿನ ವಾಹನ ಸವಾರರು ಅಪಘಾತಕ್ಕೆ ಈಡಾಗುತ್ತಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳವರೆಗೂ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.












Click it and Unblock the Notifications