ಕರ್ನಾಟಕ ವಿಧಾನಸಭಾ ಚುನಾವಣೆ 2023: ಕೋಲಾರದಲ್ಲಿ ಮಹಿಳಾ ಶಕ್ತಿಪ್ರದರ್ಶಕ್ಕೆ ಮುಂದಾದ ಸಿದ್ದರಾಮಯ್ಯ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಈಗ ಅಲ್ಲಿನ ಮಹಿಳೆಯರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.
ಕೋಲಾರ, ಫೆಬ್ರವರಿ. 13: ರಾಜ್ಯದ ಹಾಟ್ ಸೀಟ್ ಆಗಿರುವ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗಮನವೆಲ್ಲಾ ಕೋಲಾರ ವಿಧಾನಸಭಾ ಕ್ಷೇತ್ರದ ಮೇಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಜನವರಿ 9 ರಂದು ಇಲ್ಲಿಂದ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದ ನಂತರ ಎಲ್ಲಾ ರಾಜಕೀಯ ಪಕ್ಷಗಳ ಕಣ್ಣು ಇತ್ತಲೇ ಇದ್ದು, ನಾಮುಂದು, ತಾಮುಂದು ಎಂದು ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಅಷ್ಟರ ಮಟ್ಟಿಗೆ ಹವಾ ಇಟ್ಟಿದೆ ಕೋಲಾರ ಕ್ಷೇತ್ರ.
ಎರಡೆನೇ ಹಂತದ ಪ್ರಜಾಧ್ವನಿ ಬಸ್ ಯಾತ್ರೆ ಮುಗಿಸಿರುವ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ದಂಡಯಾತ್ರೆ ಆರಂಭಿಸಿದ್ದಾರೆ. ಈಗಾಗಲೇ ಪ್ರತಿಪಕ್ಷಗಳು ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಸೋಲಿಸಲು ಎಲ್ಲಾ ರೀತಿಯ ರಣತಂತ್ರಗಳನ್ನು ಹೊಡುತ್ತಿದ್ದು, ಇವುಗಳನ್ನು ದಾಟಿ ಮಾಜಿ ಸಿಎಂ ತಮ್ಮ ಗೆಲುವು ದಾಖಲಿಸುವ ಪ್ರಯತ್ನದಲ್ಲಿದ್ದಾರೆ.
ಕೋಲಾರ ತಾಲೂಕು ಬೆಳ್ಳೂರಿನ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಭೇಟಿ ನೀಡಿ ಪದ್ಮಭೂಷಣ, ದಿವಂಗತ ಬಿ.ಕೆ.ಎಸ್ ಅವರಿಗೆ ಗೌರವ ನಮನ ಸಲ್ಲಿಸಿದೆ. pic.twitter.com/GrjH1yCgHM
— Siddaramaiah (@siddaramaiah) February 13, 2023
ಸದ್ಯ ಮಹಿಳಾ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಸೋಮವಾರ ಕೋಲಾರ ತಾಲೂಕಿನ ವೇಮಗಲ್ನ ಮಿನಿ ಕ್ರೀಡಾಂಗಣದಲ್ಲಿ ಮಹಿಳಾ ಸಮಾವೇಶ ಆಯೋಜನೆ ಮಾಡಿದ್ದಾರೆ. ಈ ಸಮಾವೇಶದಲ್ಲಿ 15 ರಿಂದ 20 ಸಾವಿರ ಮಹಿಳೆಯರನ್ನು ಸೇರಿಸಲಾಗುತ್ತಿದ್ದು, ಮಹಿಳೆಯ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

ಕಾರ್ಯಕ್ರಮದ ಜವಾಬ್ದಾರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಹಿಸಿಕೊಂಡಿದ್ದಾರೆ. ಡಿಸಿಸಿ ಬ್ಯಾಂಕ್, ಕೋಲಾರ ಮತ್ತು ಸಿದ್ದರಾಮಯ್ಯಗೆ ತೀವ್ರವಾದ ಸಂಬಂಧವಿದ್ದು, ದಿವಾಳಿಯಾಗಿದ್ದ ಕೋಲಾರದ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಪಡಿಸಿ ಮಹಿಳಾ ಸ್ರ್ತೀಶಕ್ತಿ ಸಂಘಗಳಿಗೆ ಮತ್ತು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗಿದೆ. ಹೀಗಾಗಿ ಮತ್ತೆ ಇದೇ ತಂತ್ರವನ್ನಿ ಕಾಂಗ್ರೆಸ್ ಹೂಡುತ್ತಿದ್ದು, ಸಿದ್ದರಾಮಯ್ಯ ಅವರ ಗೆಲುವಿಗೆ ತಳಪಾಳ ಮಾಡಲು ನಿರ್ಧರಿಸಿದೆ.
ಆದರೆ, ಕಾಂಗ್ರೆಸ್ ಸಿದ್ದರಾಮಯ್ಯ ಅವರಿಗಾಗಿ ಮಹಿಳಾ ಸಮಾವೇಶ ಆಯೋಜನೆ ಮಾಡಿರುವುದಕ್ಕೆ ಜಾತ್ಯಾತಿತ ಜನತಾದಳ ಮತ್ತು ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಡಿಸಿಸಿ ಬ್ಯಾಂಕ್ ಮತ್ತು ಸಹಕಾರಿ ಕ್ಷೇತ್ರವನ್ನು ಕಾಂಗ್ರೆಸ್ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿವೆ. ಜೊತೆಗೆ ಸಮಾವೇಶದ ಹೊಣೆ ಹೊತ್ತುಕೊಂಡಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ವಿರುದ್ಧವು ವಾಗ್ದಾಳಿ ನಡೆಸಿವೆ.
ಕಾಂಗ್ರೆಸ್ ಈಗಾಗಲೇ ಮಹಿಳಾ ಮತದಾರರಿಗೆ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ತನ್ನ ಪ್ರಣಾಳಿಕೆ ಎಂಬ ರೀತಿಯಲ್ಲಿ ಘೋಷಿಸಿದೆ.
ಕೋಲಾರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಬೆಳ್ಳೂರಿನ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಭೇಟಿ ನೀಡಿ ಪದ್ಮಭೂಷಣ, ದಿವಂಗತ ಬಿ.ಕೆ.ಎಸ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಒಟ್ಟಾರೆ, ಪಕ್ಷದಲ್ಲಿದ್ದ ಭಿನ್ನಮತ ಮತ್ತು ಕುರುಬ ಸಂಘದ ಅಸಮಾಧಾನಗಳನ್ನು ಪರಿಹರಿಸಿಕೊಂಡು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಕಣಕ್ಕೆ ಇಳಿದಿರುವ ಸಿದ್ದರಾಮಯ್ಯ ಅವರಿಗೆ ಕೋಲಾರ ವಿಧಾನಸಭಾ ಕ್ಷೇತ್ರ ಸುಲಭದ ತುತ್ತಲ್ಲ.












Click it and Unblock the Notifications