ಆವಲುಕುಪ್ಪ ಸಸ್ಯ ಕ್ಷೇತ್ರ, ಅಶೋಕ ರೆಡ್ಡಿ ಎಂಬ ಅಕ್ಕರೆ...
ಶ್ರೀನಿವಾಸಪುರ, ಜುಲೈ 6: ಕಾಡು, ಸಾಲುಮರ, ತೋಪು ಇವುಗಳ ಬೆಳವಣಿಗೆಯಲ್ಲಿ ಸಸ್ಯ ಕ್ಷೇತ್ರಗಳ ಪಾತ್ರ ಬಹುಮುಖ್ಯ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದೇ ಒಂದು ಸಾಹಸ. ಅಂತಹ ಸಾಹಸವನ್ನು ಶ್ರೀನಿವಾಸಪುರ ತಾಲೂಕಿನ ಅರಣ್ಯ ಇಲಾಖೆಯ ಆವಲುಕುಪ್ಪ ಸಸ್ಯ ಕ್ಷೇತ್ರದಲ್ಲಿ ಕಾಣಬಹುದು.
ಈ ಸಸ್ಯಕ್ಷೇತ್ರ ಎಸ್.ಆರ್.ಅಶೋಕರೆಡ್ಡಿ ಅವರ ಉಸ್ತುವಾರಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸಸ್ಯಗಳನ್ನು ಉತ್ಪಾದಿಸಿ, ರೈತರ ಮತ್ತು ಇಲಾಖೆಯ ಅವಶ್ಯಕತೆಗಳಿಗೆ ತಕ್ಕ ಹಾಗೆ ಪೂರೈಸುತ್ತಿದೆ ಎಂದು ವಲಯಾಧಿಕಾರಿ ರಾಮಕೃಷ್ಣ ಅಭಿಪ್ರಾಯ ಪಟ್ಟರೆ, ಇಲ್ಲಿನ ಯಾವುದೇ ಗಿಡಗಳು ಬೆಳವಣಿಗೆಯಲ್ಲಾಗಲಿ, ಬಾಳಿಕೆಯಲ್ಲಾಗಲಿ ಉತ್ತಮ ಸ್ಪಂದನೆ ತೋರುತ್ತವೆ ಎಂದು ಬಳಕೆದಾರ ರೈತರು ಹಾಗೂ ಇತರರು ಅನಿಸಿಕೆ ವ್ಯಕ್ತಪಡಿಸುತ್ತಾರೆ.

ಈ ನರ್ಸರಿ ಶ್ರೀಗಂಧ ಮೊಳಕೆ ಕಟ್ಟುವಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದೆ. ಇವುಗಳ ಗುಣಮಟ್ಟವಂತೂ ಅತ್ಯುತ್ತಮ ಎಂದು ಶ್ರೀಗಂಧ ಕೃಷಿಕರ ಅಭಿಪ್ರಾಯ ಮಾತ್ರವಲ್ಲದೆ ಜಿಲ್ಲೆಯ ಆಚಿನ ಅರಣ್ಯ ಇಲಾಖಾ ವಲಯದಲ್ಲಿಯೂ ಇದೇ ಅನಿಸಿಕೆ ವ್ಯಕ್ತವಾಗುತ್ತಿದೆ. ಈ ಖ್ಯಾತಿಯನ್ನು ಆವಲಕುಪ್ಪ ಸಸ್ಯಕ್ಷೇತ್ರ ದಶಕಗಳಿಂದ ತನ್ನ ಹೆಸರಿನಲ್ಲಿ ಉಳಿಸಿಕೊಂಡು ಬಂದಿದೆ.
ನಾಟಿ ಮಾವು, ಹಲಸು, ನಾಯಿನೇರಳೆ, ಜಂಬುನೇರಳೆ, ಬೆಟ್ಟಬೇವು, ಹುಣಸೆ, ಆಲ, ಹೊಂಗೆ, ಜುವ್ವಿ(ಬಸರಿ), ಬಿದಿರು, ಕಮರ, ಹಿಪ್ಪೆ, ಹೊನ್ನೆ ಮುಂತಾದವು ಕೃಷಿಕರ ಮನಗೆದ್ದಿವೆ. ಆವಲಕುಪ್ಪದ ಗಿಡಗಳೆಂದರೆ 'ಗ್ಯಾರಂಟಿ ಗಿಡಗಳು' ಎಂದು ರೈತರು ಮಾತನಾಡಿಕೊಳ್ಳುತ್ತಾರೆ.

ಸುವಿಖ್ಯಾತಿ ಪಡೆದ ಸಾಲುಮರದ ತಿಮ್ಮಕ್ಕ ಹಸಿರು ಹೊನ್ನು ಬಳಗಕ್ಕೆ ಬಂದಿದ್ದಾಗ, ನೀಲ್ಬಾಗ್ ವಸತಿಶಾಲೆ ಮತ್ತು ಚಿಂತಾಮಣಿ ತಾಲೂಕಿನ ಲಕ್ಕೇಪಲ್ಲಿಯಲ್ಲಿ ನೆಟ್ಟಿದ್ದು ಇಲ್ಲಿಯ ಆಲದಗಿಡಗಳನ್ನೇ. ಆಗ ಆಕೆ ಈ ಗಿಡಗಳ ಸೊಂಪನ್ನು ಕಂಡು ಪ್ರಶಂಸಿದ್ದಲ್ಲದೆ, ಅಶೋಕರೆಡ್ಡಿ ಅವರನ್ನು ಸಂತೋಷದಿಂದ ಹರಸಿ ಸನ್ಮಾನಿದ್ದರು. ಈ ಭಾಗದ ಅರಣ್ಯ ಇಲಾಖೆಯನ್ನು ಪ್ರಶಂಸೆ ಮಾಡಿದ್ದರು.

ಇಲ್ಲಿ ಬೆಳೆಸಿದ ಶ್ರೀಗಂಧದ ಸಸಿಗಳು ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿರುವ ದಳಸನೂರು ರಾಜಾರಣ್ಯ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳವಣಿಗೆ ಆಗುತ್ತಿರುವುದನ್ನು ಕಾಣಬಹುದು. ಇಲ್ಲಿ ಮೂರು ಲಕ್ಷ ಶ್ರೀಗಂಧದ ಸಸಿಗಳಿವೆ. ಜೊತೆಗೆ ಪೋಷಕ ಸಸ್ಯಗಳೂ ಇವೆ.

ಈಗ ಹೆದ್ದಾರಿಯಾಗಿ ಪರಿವರ್ತಿತವಾಗಿರುವ ಮೂಡಬಿದಿರೆ- ತಿರುವಣ್ಣಾಮಲೈ ರಸ್ತೆಯಲ್ಲಿ ಶ್ರೀನಿವಾಸಪುರ-ಮುಳಬಾಗಿಲು ನಡುವೆ ಇಲ್ಲಿನ ಆಲ, ಅತ್ತಿ, ನೇರಳೆ, ಅರಳಿ ಮುಂತಾದವು ಮರವಾಗಲು ಭೂಮಿತಾಯಿಯ ಒಡಲಲ್ಲಿ ಬೇರು ಬಿಡತೊಡಗಿವೆ. ಹಸಿರು ಹೊನ್ನು ಬಳಗದ ಗಿಡ ನೆಡುವ ನಿರಂತರ ಕಾರ್ಯಕ್ರಮದಲ್ಲಿ ಆವಲಕುಪ್ಪ ನರ್ಸರಿಯ ಪಾತ್ರ ದೊಡ್ಡದು. ಅರಣ್ಯ ಇಲಾಖೆಯ ಸಹಕಾರ ಸ್ಮರಣೀಯ.

ಆವಲಕುಪ್ಪ ಸಸ್ಯ ಕ್ಷೇತ್ರದ ಈ ಖ್ಯಾತಿಯ ಹಿಂದೆ ಇಲ್ಲಿ ಕೆಲಸ ಮಾಡುವ ಭೀಮಣ್ಣ ಮುಂತಾದವರ ಶ್ರಮ-ಶ್ರದ್ಧೆಗಳ ಪಾತ್ರವೂ ಇವೆ. ಇವರು ಕೇವಲ ಕೂಲಿಗಾಗಿ ದುಡಿಯದೆ ಅಕ್ಕರೆಯಿಂದ ತಮ್ಮ ಕೆಲಸಕಾರ್ಯ ನಿರ್ವಹಿಸುವುದನ್ನು ಅಶೋಕರೆಡ್ಡಿ ಮುಕ್ತವಾಗಿ ಪ್ರಶಂಸಿಸುವುದಲ್ಲದೆ ಅವರಿಗೆ ಕಾರ್ಯಪ್ರೇರಕರಾಗಿದ್ದಾರೆ.












Click it and Unblock the Notifications