ನಾನು ಸಿದ್ದರಾಮಯ್ಯನವರಂತೆ ತಡರಾತ್ರಿ ಬಿಎಸ್ವೈ ಭೇಟಿಯಾಗಲಿಲ್ಲ, ನಮ್ಮದೇನಿದ್ದರೂ ಓಪನ್: ಕುಮಾರಸ್ವಾಮಿ
ಕೋಲಾರ, ಡಿ 9: "ಭೂಸುಧಾರಣಾ ಕಾಯ್ದೆಯ ಬಗ್ಗೆ ಮೊದಲು ವಿರೋಧ ವ್ಯಕ್ತಪಡಿಸಿದವರು ನಾನು ಮತ್ತು ದೇವೇಗೌಡ್ರು. ಇದಾದ ನಂತರ ಕಾಯ್ದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳಿಗೆ ನಮ್ಮ ಬೆಂಬಲವಿದೆ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ನೂತನ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ,"ಕೆಲವರು ನಾವು ರೈತರ ಪರವಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ ಬಗ್ಗೆ ಮೃಧ ಧೋರಣೆ ಹೊಂದಿದ್ದೇವೆ ಎನ್ನುತ್ತಿದ್ದಾರೆ. ನಾನು ಏನಿದ್ದರೂ, ಓಪನ್ ಆಗಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದೇನೆ. ಅವರ ರೀತಿ ತಡರಾತ್ರಿ ಭೇಟಿಯಾಗಲಿಲ್ಲ"ಎಂದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಎಚ್ಡಿಕೆ ಟಾಂಗ್ ನೀಡಿದರು.
ರೈತರ ಪ್ರತಿಭಟನೆ ಮತ್ತು ಕಾಂಗ್ರೆಸ್ ವಿರುದ್ದ ಕುಮಾರಸ್ವಾಮಿ ಸಾಲುಸಾಲು ಟ್ವೀಟ್ ಮಾಡಿದ್ದಾರೆ. ಅದು ಹೀಗಿದೆ,"ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್ ಕಡೆಯೂ ಇರಲಿಲ್ಲ, ಬಿಜೆಪಿ ಕೆಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್ ಮಾಡಿದೆ".
"ಬಿಜೆಪಿ ಪ್ರಸ್ತಾಪಿಸಿದ ಭೂ ಸುಧಾರಣಾ ತಿದ್ದುಪಡಿ ಮಸೂದೆ, ಅದರಲ್ಲಿದ್ದ ಕೆಲ ಅಂಶಗಳನ್ನು ಜೆಡಿಎಸ್ ಆರಂಭದಲ್ಲಿ ವಿರೋಧಿಸಿತ್ತು. ಅದರಲ್ಲಿ ಏನೇನು ಬದಲಾವಣೆಗಳು ಆಗಬೇಕು ಎಂಬುದನ್ನು ಹೇಳಿತ್ತು. ಕಾಂಗ್ರೆಸ್ ಕೂಡ ಮಸೂದೆ ವಿರೋಧಿಸಿತ್ತಾದರೂ, ಏನು ಬದಲಾವಣೆ ಆಗಬೇಕು ಎಂಬುದನ್ನು ಹೇಳಿರಲಿಲ್ಲ. ಅದು ವಿರೋಧಕ್ಕೆ ಮಾತ್ರ ಸೀಮಿತವಾಗಿತ್ತು"ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ದೇವರಾಜ ಅರಸರ ಆಶಯವನ್ನು ಕಾಪಾಡಿಕೊಂಡಿದ್ದು ಜೆಡಿಎಸ್ನ ಹೆಗ್ಗಳಿಕೆಯಲ್ಲವೇ
"ಜೆಡಿಎಸ್ ಸೂಚಿಸಿದಂತೆ ಕಾಯ್ದೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮೊದಲು ಪ್ರಸ್ತಾಪಿಸಿದ ಮಸೂದೆಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 248 ಎಕರೆ ಜಮೀನು ಹೊಂದಲು ಅವಕಾಶವಿತ್ತು. ಆದರೆ, ಈಗ ಅದನ್ನು ತೆಗೆದು ಹಾಕಲಾಗಿದೆ. ಕಲಂ 80ರ ಅಡಿಯ ನೀರಾವರಿ ಜಮೀನನ್ನು ಕೃಷಿ ಉದ್ದೇಶಕ್ಕೆ ಮಾತ್ರವೇ ಬಳಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ. ಉಳುವವನೇ ಭೂಮಿ ಒಡೆಯ ಎಂಬ ತತ್ವದಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚಿಸಲಾಗಿತ್ತು".
"ಅದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರಲ್ಲಿ ದೇವರಾಜ ಅರಸರ ಆಶಯವನ್ನು ಕಾಪಾಡಿಕೊಂಡಿದ್ದು ಜೆಡಿಎಸ್ನ ಹೆಗ್ಗಳಿಕೆಯಲ್ಲವೇ? ಎಸ್ಸಿ/ಎಸ್ಟಿ ಜನರ ಭೂಮಿ ವಿಚಾರದಲ್ಲಿ ಯಾವುದೇ ವಿನಾಯಿತಿಯೂ ನೀಡದಂತೆ ನೋಡಿಕೋಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ" - ಕುಮಾರಸ್ವಾಮಿ ಟ್ವೀಟ್

ಸಿದ್ದರಾಮಯ್ಯ ಅವರೂ ಸಿಎಂ ಆಗಿದ್ದಾಗ
"ಕಾಯ್ದೆಯಲ್ಲಿನ 79(ಎ, ಬಿ) ಕಲಂಗಳ ಔಚಿತ್ಯದ ಬಗ್ಗೆ ಈ ವರೆಗೆ ಶಾಸನಸಭೆಗಳ ಒಳ, ಹೊರಗೆ ಸಾಕಷ್ಟು ಚರ್ಚೆಗಳಾಗಿವೆ. ಪ್ರೊ. ನಂಜುಂಡಸ್ವಾಮಿ ಅವರೇ, 'ಇದು ಜನರ ಸ್ವಾತಂತ್ರ್ಯ ಹರಣ ಮಾಡುತ್ತದೆ' ಎಂದು ಪ್ರತಿಪಾದಿಸಿದ್ದರು. ಕೃಷಿ ಮಾಡುವ ಇಚ್ಛೆ ಇದ್ದೂ, ಕೃಷಿಕರಲ್ಲದಿದ್ದರೆ ಕೃಷಿ ಭೂಮಿ ಹೊಂದಂತೆ ಮಾಡುತ್ತಿದ್ದ ಈ ನಿಯಮವನ್ನು ತೆಗೆದುಹಾಕಲಾಗಿದೆ".
"79(ಎ, ಬಿ) ಕಲಂ ಅಗತ್ಯತೆ, ಸಾಧಕ-ಬಾಧಕಗಳ ಪರಾಮರ್ಶೆಗೆ ಸಿದ್ದರಾಮಯ್ಯ ಅವರೂ ಸಿಎಂ ಆಗಿದ್ದಾಗ ಶ್ರೀನಿವಾಸ ಪ್ರಸಾದ್ರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದ್ದರು. ಆದರೆ, ಈ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಅವರದ್ದು ಈಗ ದಿವ್ಯ ಮೌನ. ಈ ಕಲಂ ತೆಗೆದು ಹಾಕಿ ಕೃಷಿ ಮಾಡುವ ಮನಸ್ಸುಗಳಿಗೆ ಕೃಷಿ ಸಾಧ್ಯವಾಗಿಸುತ್ತಿರುವುದು ಜೆಡಿಎಸ್" ಕುಮಾರಸ್ವಾಮಿ ಟ್ವೀಟ್.

ಭೂಸುಧಾರಣ ಕಾಯ್ದೆ
"79(ಎ, ಬಿ) ಕಲಂಗೆ ಇತಿಶ್ರೀ ಹಾಡಿರುವುದು ನಮ್ಮ ಕೃಷಿ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬಯಸುವವರಿಗೆ ಹಾದಿ ಸುಗಮವಾಗುತ್ತದೆ. ಸಾಂಪ್ರದಾಯಕ ಕೃಷಿಯ ಜಾಗಕ್ಕೆ ವೈಜ್ಞಾನಿಕ ಕೃಷಿ ಬರಲು ಅನುಕೂಲವಾಗುತ್ತದೆ. ಇದನ್ನು ಎಲ್ಲರೂ ಗಮನಿಸಬೇಕು".
"ಭೂಸುಧಾರಣ ಕಾಯ್ದೆಯಲ್ಲಿ ನಿಜವಾದ ಸುಧಾರಣಾ ಕ್ರಮಗಳನ್ನು ಸಾಧಿಸಿದ್ದು ಜೆಡಿಎಸ್. ಆದರೂ ವಿಮರ್ಶೆ ಇಲ್ಲದೇ ಏಕಾಏಕಿ ಜೆಡಿಎಸ್ ಅನ್ನು ದೂರಲಾಗುತ್ತಿದೆ. ಜೆಡಿಎಸ್ನ ಮೇಲೆ ದಾಳಿ ಮಾಡುತ್ತಿರುವ ಕೆಲ ರೈತ ಮುಖಂಡರು ಒಂದು ಬಾರಿ ಪರಾಮರ್ಶೆ ಮಾಡಲಿ. ಜೆಡಿಎಸ್ ರೈತ ವಿರೋಧಿ ನಿಲುವು ತಳೆಯಲು ಎಂದಾದರೂ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಲಿ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
Recommended Video

ನನ್ನ ರೈತ ಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ
"ಮಿತಿಗಳು, ಭಿನ್ನಮತಗಳ ನಡುವೆಯೂ ರೈತರ 25 ಸಾವಿರ ಕೋಟಿಗೂ ಮಿಗಿಲಾದ ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿಯೇ ಹೊರತು ಬೇರಾರೂ ಅಲ್ಲ. ಆಗ ನನ್ನನ್ನು ಯಾರೊಬ್ಬರೂ ಬೆನ್ನುತಟ್ಟಲಿಲ್ಲ, ರೈತರಿಗೆ ನೀಡಿದ ವಚನ ಪಾಲಿಸಿ, ಅಧಿಕಾರದಿಂದ ಹೊರ ನಡೆದಾಗ ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಈಗ ಸುಧಾರಣೆ ಕ್ರಮಗಳನ್ನು ಸಾಧಿಸಿದಾಗಲೂ ನಾನು ಏಕಾಂಗಿ".
"ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತ ಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ, ಈ ವರೆಗಿನ ನನ್ನ ರೈತ ಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ. ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications