ಜಾತಿ ಗಣತಿ ವರದಿ ಸ್ವೀಕರಿಸಲು ಬಿಎಸ್ವೈಗೆ ತೊಂದರೆ ಏನು?
ಕೋಲಾರ, ಮಾರ್ಚ್ 28: "ಮುಖ್ಯಮಂತ್ರಿ ಯಡಿಯೂರಪ್ಪಗೆ ಜಾತಿ ಗಣತಿ ವರದಿಯನ್ನು ಸ್ವೀಕರಿಸಲು ತೊಂದರೆ ಏನಿದೆ?. ವರದಿಯನ್ನು ಕೊಡಿಸಲು ಸಾಧ್ಯವಾಗದ ಸಚಿವ ಈಶ್ವರಪ್ಪ ಪ್ರಭಾವಿ ಸಚಿವ ಅಲ್ಲ ಅಂತ ಸಾಬೀತಾಗಿದೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಕೋಲಾರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಒಕ್ಕೂಟದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. "ಈ ಪ್ರತಿಭಟನೆ ಯಾವುದೇ ಜಾತಿ, ವರ್ಗದ ವಿರುದ್ದ ಅಲ್ಲ. ಸಾಮಾಜಿಕ ನ್ಯಾಯದ ಪರವಾಗಿ ನನ್ನ ಧ್ವನಿ ನಿರಂತರ" ಎಂದರು.
"ಹಿಂದುಳಿದ ವರ್ಗಗಳ ಜಾತಿ, ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಕಾಂತರಾಜು ವರದಿಯು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೂರ್ಣವಾಗಿತ್ತು. ವರದಿಯನ್ನು ಸ್ವೀಕರಿಸಲು ಸಮ್ಮಿಶ್ರ ಸರ್ಕಾರದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಾಕರಿಸಿದ್ದರು. ವೈಜ್ಞಾನಿಕವಾಗಿ ಸಿದ್ದವಾದ ವರದಿ ಪೂರ್ಣವಾಗಿ 3 ವರ್ಷವಾದರೂ ಸರ್ಕಾರ ಸ್ವೀಕರಿಸುತ್ತಿಲ್ಲ" ಎಂದು ಆರೋಪಿಸಿದರು.

"ಸಮಿತಿಯ ಸಮೀಕ್ಷೆ ವರದಿಯ ಬಗ್ಗೆ ಯಾರೂ ಸಂಶಯಪಡುವ ಅಗತ್ಯವಿಲ್ಲ. ವರದಿಯನ್ನು ಈಗಿನ ಸರ್ಕಾರ ಸ್ವೀಕರಿಸಿ ಸದನದ ಮುಂದೆ ಮಂಡಿಸಬೇಕು. 70 ವರ್ಷದ ನಂತರವಾದರೂ ವರದಿಯನ್ನು ಪರಾಮರ್ಶಿಸಿ ಅರ್ಹರಿಗೆ ನ್ಯಾಯ ಸಿಗುವಂತೆ ಮಾಡಬೇಕು" ಎಂದು ಒತ್ತಾಯಿಸಿದರು.
"ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಈ ಹಿಂದುಳಿದ ಜಾತಿಗೆ ವಿರುದ್ದ ಇದ್ದಾರೆ. ರಾಜ್ಯದಲ್ಲಿ ಶೇ 24.1ರಷ್ಟು ಇರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದವರಿಗೆ ಸಮರ್ಪಕ ಮೀಸಲಾತಿ ಕೊಡಿ. ಸಂವಿಧಾನದ ಪ್ರಕಾರವಾಗಿ ಅರ್ಹರಿದ್ದವರಿಗೆ ಮೀಸಲಾಗಿ ಸಿಗಬೇಕಾಗಿದೆ" ಎಂದು ಸಿದ್ದರಾಮಯ್ಯ ಹೇಳಿದರು.
"ಮೀಸಲಾತಿ ಹೋರಾಟದ ಬಗ್ಗೆ ಪರಿಶೀಲಿಸಲು ಯಡಿಯೂರಪ್ಪ ರಚನೆ ಮಾಡಿರುವ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯು ಅಸಂವಿಧಾನಿಕ. ಈ ಸಮಿತಿಯನ್ನು ರದ್ದುಗೊಳಿಸಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಬೇಕು" ಎಂದು ಆಗ್ರಹಿಸಿದರು.
"ಹಿಂದುಳಿದ ಜಾತಿಗಳ ಒಕ್ಕೂಟದ ಚಳವಳಿಗೆ ನನ್ನ ಬೆಂಬವಿದೆ. ಹೋರಾಟದಲ್ಲಿ ನಾನೇ ಭಾಗವಹಿಸುತ್ತೇನೆ. ಈಗಿನ ಬಜೆಟ್ನಲ್ಲಿ ಹಿಂದುಳಿದ ಜಾತಿ, ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಅನ್ಯಾಯವಾಗಿದೆ. ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. ತಾರತಮ್ಯ ತೋರುತ್ತಿರುವ ಸರ್ಕಾರದ ಅನ್ಯಾಯದ ವಿರುದ್ದ ಜನತೆ ಬೀದಿಗೆ ಬರಬೇಕು" ಎಂದು ಸಿದ್ದರಾಮಯ್ಯ ಕರೆ ನೀಡಿದರು.












Click it and Unblock the Notifications