ಮಾಜಿ ಸ್ಪೀಕರ್ ರಾಜಕೀಯ ನಿವೃತ್ತಿ ವದಂತಿ; ರಮೇಶ್ ಕುಮಾರ್ ಹೇಳಿದ್ದೇನು?
ಕೋಲಾರ, ಡಿಸೆಂಬರ್ 8: ಮಾಜಿ ಸ್ಪೀಕರ್, ಹಾಲಿ ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರ ರಾಜಕೀಯ ನಿವೃತ್ತಿ ಎಂಬ ವದಂತಿ ಹಿನ್ನೆಲೆಯಲ್ಲಿ ಸ್ವತಃ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕೋಲಾರದ ಜನ್ನಘಟ್ಟ ಗ್ರಾಮದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ""ನಾನು ಜನರಿಗಾಗಿ ಮಾಡುವುದು ಇನ್ನೂ ಸಾಕಷ್ಟಿದೆ. ನಾನು ಇಂದಿರಾ ಗಾಂಧಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಿದವನು'' ಎಂದು ತಿಳಿಸಿದರು.
ನನ್ನ ಜೀವನದಲ್ಲಿ ಯಾರೂ ಆಟವಾಡಲು ಬರಬಾರದು, ನನ್ನ ರಾಜಕೀಯ ನಿವೃತ್ತಿ ಎಂದು ತಿಳಿದು ಸುಮಾರು ಜನ ಗಣ್ಯರು ಫೋನ್ ಮಾಡುತ್ತಿದ್ದಾರೆ. ಆದರೆ ನಾನು ಈಗಲೇ ರಾಜಕೀಯ ನಿವೃತ್ತಿ ಬಯಸಿಲ್ಲವೆಂದರು.

ಬೆಂಗಳೂರು, ಬೆಳಗಾವಿ, ವಿಜಯಪುರಗಳಿಂದ ಹಲವರು ಫೋನ್ ಮಾಡಿ ವಿಚಾರಿಸಿದ್ದಾರೆ. ನನ್ನ ರಾಜಕೀಯ ನಿವೃತ್ತಿ ನನ್ನೊಬ್ಬನ ನಿರ್ಧಾರ ಆಗಿರುವುದಿಲ್ಲ. ನಿವೃತ್ತಿಯಾಗುವಷ್ಟು ಸಮಯ ನನಗಿಲ್ಲ, ನಾನು ಸಾಕಷ್ಟು ಬಂಧನದಲ್ಲಿ ಸಿಲುಕಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದರು.
ಯಾರಿಗೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿಲ್ಲ. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನ ಹರಣ ಮಾಡಬೇಡಿ ಎಂದು ವಿನಂತಿಸಿದರು.
ಖಾಸಗಿ ದಿನ ಪತ್ರಿಕೆ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರಾಜಕೀಯ ನಿವೃತ್ತಿ ವದಂತಿ ತಳ್ಳಿಹಾಕಿದರು. ಇವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.












Click it and Unblock the Notifications