ನಟ ಧೃವ ಸರ್ಜಾ ಅವರಿಂದ ಕೊರೊನಾ ನಿಯಮ ಉಲ್ಲಂಘನೆ
ಕೋಲಾರ, ನವೆಂಬರ್ 20: ನಟ ಧೃವ ಸರ್ಜಾ ಅವರು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣಕ್ಕೆ ಭೇಟಿ ನೀಡಿದ್ದರಿಂದ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಒಂದೆಡೆ ಜಮಾಯಿಸಿದ್ದರು. ಇದೇ ಸಂದರ್ಭದಲ್ಲಿ ಧೃವ ಸರ್ಜಾ ಅವರು ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಮುಖಕ್ಕೆ ಮಾಸ್ಕ್ ಧರಿಸದೆ ಧೃವ ಸರ್ಜಾ ಅವರು ಸಾವಿರಾರು ಜನರೊಟ್ಟಿಗೆ ಭಾಷಣ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ. ಟೈಲ್ಸ್ ಅಂಗಡಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೋಲಾರ-ಹೊಸೂರು-ಬೆಂಗಳೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು.
ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೊರೊನಾವನ್ನು ಲೆಕ್ಕಿಸದೇ ಸಾವಿರಾರು ಜನರು ಒಂದೆಡೆ ಸೇರಿ ಎಂಜಾಯ್ ಮಾಡಿದ್ದು, ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಲಿಲ್ಲ.

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ ಧೃವ ಸರ್ಜಾ, ಕೊರೊನಾ ಸಂದರ್ಭದಲ್ಲಿ ನಿಮ್ಮನ್ನು ಭೇಟಿ ಮಾಡಿಲ್ಲ, ಇಷ್ಟು ಜನರನ್ನು ನೋಡಿದಕ್ಕೆ ಖುಷಿಯಾಯಿತು ಎಂದು ಹೇಳಿದರು.
ನಟ ಧ್ರುವ ಸರ್ಜಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ನಿಯಂತ್ರಿಸಲು ಮಾಲೂರು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ಗುಂಪು ಚದುರಿಸಲು ಸಾಕಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಅಭಿಮಾನಿಗಳು ಚದುರಿದರು.
ಟೈಲ್ಸ್ ಅಂಗಡಿ ಉದ್ಘಾಟನೆ ಮಾಡಿ ಧೃವ ಸರ್ಜಾ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು. ಹಾಗಾಗಿ ಗುಂಪು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ಮಾಡಬೇಕಾಯಿತು.












Click it and Unblock the Notifications