ಕೋಲಾರ; ಬಂಗಾರಪೇಟೆಯಲ್ಲಿ ಕಾಡಾನೆಗಳ ದಾಳಿಗೆ ರೈತ ಬಳಿ
ಕೋಲಾರ, ಡಿಸೆಂಬರ್ 22: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಕಾಡಾನೆಗಳ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ. 15 ದಿನಗಳಿಂದ 20ಕ್ಕೂ ಹೆಚ್ಚು ಕಾಡಾನೆಗಳು ತಾಲೂಕಿನ ಗಡಿ ಪ್ರದೇಶದಲ್ಲಿ ಬೀಡು ಬಿಟ್ಟಿವೆ.
ತಾಲೂಕಿನ ಸಾಕರಸನಹಳ್ಳಿ ಗ್ರಾಮದ ಹೊರವಲಯದಲ್ಲಿ ಕಾಡಾನೆಗಳ ದಾಳಿಯಿಂದಾಗಿ ತಿಮ್ಮಾರಾಯಪ್ಪ (65) ಎಂಬ ರೈತ ಮೃತ್ತಪಟ್ಟದ್ದಾರೆ. ಜಿಲ್ಲೆಯ ಬಂಗಾರಪೇಟೆ, ಕೆಜಿಎಫ್ ಗಡಿ ಗ್ರಾಮಗಳ ಸಮೀಪ ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ.
ಕಾಡಾನೆಗಳು ತಮಿಳುನಾಡು ಅರಣ್ಯ ಪ್ರದೇಶದಿಂದ ಆಗಮಿಸಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ.

ತಿಮ್ಮಾರಾಯಪ್ಪ ಸಾವಿಗೆ ಅರಣ್ಯ ಇಲಾಖೆಯೇ ಹೊಣೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ರೈತನ ಸಾವಿನ ಕುರಿತು ಕಾಮಸಮುದ್ರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಮುಂಜಾನೆ ಕೆಜಿಎಫ್ ಗಡಿಭಾಗವಾದ ರಾಜ್ ಪೇಟೆ ಬಳಿ 13 ಕಾಡಾನೆಗಳು ಪ್ರತ್ಯಕ್ಷವಾಗಿದ್ದವು. ಆನೆಗಳ ಗುಂಪಿನಲ್ಲಿ ಮರಿಗಳು ಸಹ ಇದ್ದವು. ರೈತರ ತೋಟಗಳಿಗೆ ನುಗ್ಗಿರುವ ಆನೆಗಳು ಬೆಳೆಗಳನ್ನು ನಾಶ ಮಾಡಿದ್ದವು.
ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಿಂದ ಹೊರಗಡೆ ಬಾರದಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದರು. ಆಂಧ್ರ ಪ್ರದೇಶದ ಕಡೆ ಆನೆಗಳನ್ನು ಓಡಿಸಲು ಅಧಿಕಾರಿಗಳ ತಂಡ ಪ್ರಯತ್ನ ನಡೆಸಿತ್ತು.












Click it and Unblock the Notifications