ಕೋಲಾರ: ಮಾಜಿ ಸಂಸದ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಗಲಾಟೆ
ಕೋಲಾರ, ಸೆಪ್ಟೆಂಬರ್ 23: ಕೋಲಾರದಲ್ಲಿ ನಗರಸಭೆ ಮುಂಭಾಗ ಭಾರಿ ಹೈಡ್ರಾಮಾ ನಡೆದಿದ್ದು, ಮಾಜಿ ಸಂಸದ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಗಲಾಟೆಯಾಗಿದೆ.
ಮುಳಬಾಗಿಲು ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಹಾಗೂ ಕೋಲಾರ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಬೆಂಬಲಿಗರ ನಡುವೆ ಪೌರ ಕಾರ್ಮಿಕರಿಗೆ ಮಿಕ್ಸಿ ಕೊಡುವ ವಿಚಾರದಲ್ಲಿ ಗಲಾಟೆ ಮಾಡಿದರು.
ಖಾಸಗಿ ವ್ಯಕ್ತಿ ಬಂದು ಇಲ್ಲಿ ಏಕೆ ಮಿಕ್ಸಿ ಹಂಚಬೇಕು ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಕಡೆಯ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ನಗರಸಭೆಯ ಮತ್ತಷ್ಟು ಸದಸ್ಯರು ಗಲಾಟೆ ಮಾಡಲು ಕೂಡಿಕೊಂಡರು.

ಕೊನೆಗೆ ಕೋಲಾರ ನಗರಸಭೆಯ ಪಕ್ಕದಲ್ಲಿರುವ ಒಕ್ಕಲಿಗರ ಸಮುದಾಯ ಭವನದ ಬಳಿ ಮಿಕ್ಸಿ ಹಂಚಿಕೆ ಮಾಡಲಾಯಿತು. ದಲಿತ್ ನಾರಾಯಣಸ್ವಾಮಿ ಅವರು ಅಲ್ಲಿಗೂ ಬಂದು ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದರು.
ಕೊತ್ತನೂರು ಮಂಜುನಾಥ್ ನಮ್ಮ ಸಮಾಜದವರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ರಸ್ತೆ ಮಧ್ಯೆ ಕುಳಿತು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ದಲಿತ್ ನಾರಾಯಣಸ್ವಾಮಿ ವಿರುದ್ಧವಾಗಿ ಆಕ್ರೋಶಗೊಂಡು ಕೊತ್ತನೂರು ಮಂಜುನಾಥ್ ಬೆಂಬಲಿಗರು ಜೈಕಾರ ಹಾಕಿದರು. ಈ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಸದ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೊತ್ತನೂರು ಮಂಜುನಾಥ್ ಅವರು ಒಲವು ವ್ಯಕ್ತಪಡಿಸುತ್ತಿದ್ದು, ತಮ್ಮ ರಾಜಕೀಯ ವೈರಿ ಕೆ.ಎಚ್ ಮುನಿಯಪ್ಪ ಅವರಿಂದ ಭಾರಿ ವಿರೋಧ ವ್ಯಕ್ತವಾಗಿದೆ.












Click it and Unblock the Notifications