ಕೋಲಾರ; 13 ಕಾಡಾನೆಗಳು ಪ್ರತ್ಯಕ್ಷ, ಬೆಳೆಗಳ ನಾಶ
ಕೋಲಾರ, ಡಿಸೆಂಬರ್ 18: ಕೋಲಾರ ಜಿಲ್ಲೆಯ ಗಡಿಭಾಗದಲ್ಲಿ 13 ಕಾಡಾನೆಗಳು ಪ್ರತ್ಯಕ್ಷವಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ. ಅಪಾರ ಪ್ರಮಮಾಣದ ಬೆಳೆಗಳನ್ನು ಆನೆಗಳು ನಾಶ ಮಾಡಿವೆ.
ಶುಕ್ರವಾರ ಮುಂಜಾನೆ ಕೆಜಿಎಫ್ ಗಡಿಭಾಗವಾದ ರಾಜ್ ಪೇಟೆ ಬಳಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಕಾಡಾನೆಗಳ ಗುಂಪಿನಲ್ಲಿ ಮರಿಗಳು ಸಹ ಇದ್ದು, ರೈತರ ತೋಟಗಳಿಗೆ ನುಗ್ಗಿರುವ ಆನೆಗಳು ಬೆಳೆಗಳನ್ನು ನಾಶ ಮಾಡಿವೆ.
ಟೊಮೆಟೋ, ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ಬೆಳೆಗಳನ್ನು ಆನೆಗಳು ತುಳಿದು ಹಾಕಿದ್ದು, ರೈತರಿಗೆ ಅಪಾರವಾದ ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜನರು ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ್ದಾರೆ.

ಆನೆಗಳನ್ನು ಕಾಡಿಗಟ್ಟುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಗ್ರಾಮದಿಂದ ಹೊರಗಡೆ ಬಾರದಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆಂಧ್ರ ಪ್ರದೇಶದ ಕಡೆ ಆನೆಗಳನ್ನು ಓಡಿಸಲು ಅಧಿಕಾರಿಗಳ ತಂಡ ಪ್ರಯತ್ನ ನಡೆಸುತ್ತಿದೆ.
ಗಡಿಭಾಗದಲ್ಲಿ ಯಾವಾಗಲೂ ಆನೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸುವಂತೆ ರೈತರು ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಇದ್ದಾರೆ. ಆನೆ ಕಾರಿಡಾರ್ ನಿರ್ಮಾಣ ಮಾಡಿ ಎಂದು ಸಚಿವರಿಗೆ ಮಾಡಿದ ಮನವಿಯೋ ಪ್ರಯೋಜನಕ್ಕೆ ಬಂದಿಲ್ಲ.
ರೈತರು ಜೀವ ಕೈಯಲ್ಲಿ ಹಿಡಿದು ಜೀವನ ಮಾಡಬೇಕಾಗಿದೆ. ಮಹಿಳೆಯರು, ಮಕ್ಕಳು ತೋಟ, ಗದ್ದೆಗೆ ಹೋಗುವುದಕ್ಕೆ ಭಯಪಡುತ್ತಿದ್ದಾರೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕಡೆಯ ಅರಣ್ಯ ಇಲಾಖೆಯವರು ಕರ್ನಾಟಕದ ಗಡಿ ಗ್ರಾಮಗಳಿಗೆ ಆನೆಗಳನ್ನು ಓಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.












Click it and Unblock the Notifications