ತಾನೇ ಪಕ್ಷದ ಅಭ್ಯರ್ಥಿ ಎಂದು ಯಾರೂ ಧೈರ್ಯವಾಗಿ ಪ್ರಚಾರ ಆರಂಭಿಸಿಲ್ಲ
ಒಂದೆಡೆ ಬಿಸಿಲಿನ ಝಳ ಮತ್ತೆ ಹೆಚ್ಚಾಗುತ್ತಿದೆ. ಆದರೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾವು ಹೆಚ್ಚಾದಂತೆ ಕಂಡು ಬರುತ್ತಿಲ್ಲ. ಅಲ್ಲದೇ ಯಾವುದೇ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿಲ್ಲ. ಈಗಾಗಲೇ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದ್ದು, ಅ.21 ರಂದು ಮತದಾನ ನಡೆಯಲಿದೆ.
ಸೆ.29 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ಸೆ.30 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅ.1 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.3ರಂದು ನಾಮಪತ್ರ ಹಿಂಪಡೆಯಬಹುದಾಗಿದೆ. ಅ.21 ರಂದು ಮತದಾನ ನಡೆಯಲಿದ್ದು, ಅ.24 ರಂದು ಮತ ಎಣಿಕೆ ನಡೆಯಲಿದೆ.
ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ, 66,290 ಮತಗಳನ್ನು ಪಡೆದು ಗೆದ್ದು ಬೀಗಿದ್ದರು. ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ವಿ.ಎಸ್.ಪಾಟೀಲ್ ಸ್ಪರ್ಧಿಸಿ 64,807 ಮತಗಳನ್ನು ಪಡೆದು ಸೋಲುಂಡಿದ್ದರು.

ಮತದಾರರಿಗೆ ಅಥವಾ ರಾಜಕೀಯ ಪಕ್ಷದವರಿಗಾಗಲಿ ಚುನಾವಣೆ ಬೇಕಾಗಿಲ್ಲ. ಯಾರದೋ ಅಧಿಕಾರದ ದುರಾಸೆಗಾಗಿ ಅನಿವಾರ್ಯವಾಗಿ ಚುನಾವಣೆ ಬಂದಿದೆ ಎಂಬ ಅಭಿಪ್ರಾಯ ಯಲ್ಲಾಪುರದ ಮತದಾರ ದೊರೆಗಳದ್ದು. ಅಲ್ಲದೇ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬಿ ಫಾರಂ ಪಡೆಯಲು ತೆರೆ ಮರೆಯಲ್ಲಿ ತಾಲೀಮು ಪ್ರಾರಂಭಗೊಂಡಿದೆ.
ಇದುವರೆಗೆ ತಾನೇ ಪಕ್ಷದ ಅಭ್ಯರ್ಥಿ ಎಂದು ಯಾರೂ ಧೈರ್ಯವಾಗಿ ಪ್ರಚಾರ ಆರಂಭಿಸಿಲ್ಲ. ಮೈತ್ರಿ ಸರ್ಕಾರದ ಪತನದ ಬಳಿಕ ಕಾಂಗ್ರೆಸ್, ಜೆಡಿಎಸ್ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಹಾಗಾಗಿ ವಿವಿಧ ಪಕ್ಷಗಳ ಬಿ ಫಾರ್ಮ್ ಯಾರಿಗೆ ದೊರೆಯಲಿದೆ ಎಂಬ ಕುತೂಹಲ ಈಗ ಮನೆ ಮಾಡಿದೆ.

ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅವರು ಚುನಾವಣೆಯನ್ನು ಎದುರಿಸುತ್ತಾರೋ ಅಥವಾ ಕುಟುಂಬದವರು ಸ್ಪರ್ಧಿಸುತ್ತಾರೋ ಎಂಬ ಗೊಂದಲ ಮನೆ ಮಾಡಿದೆ. ಇತ್ತ ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದ್ದು, ಅರಣ್ಯ ಅತಿಕ್ರಮಣದಾರರ ಹೋರಾಟಗಾರ ಎ ರವೀಂದ್ರ ನಾಯ್ಕ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಕ್ಷೇತ್ರದಲ್ಲಿ ಸಮಸ್ಯೆಗಳ ಮಹಾಪೂರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳು ಬೆಟದಷ್ಟಿದೆ. ಆದರೆ ಇದಕ್ಕೆ ಪರಿಹಾರ ದೊರಕಿಸಿಕೊಡುವಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ವಿಫಲರಾಗಿದ್ದಾರೆ. ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ನೋಡುವುದಾದರೆ:
1) ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಇರುವ ಪ್ರಮುಖ ಸಮಸ್ಯೆಯೆಂದರೆ ಅತಿಕ್ರಮಣದಾರರ ಸಮಸ್ಯೆ. ಕ್ಷೇತ್ರದ ಅತಿಕ್ರಮಣದಾರರು ಪಟ್ಟಾ ದೊರಕುವ ನಿರೀಕ್ಷೆಯಲ್ಲಿದ್ದರೂ ಈವರೆಗೆ ಪಟ್ಟಾ ದೊರೆತಿಲ್ಲ.
2) ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹೊಂಡ-ಗುಂಡಿಗಳಿಂದ ಕೂಡಿದ್ದು, ರಸ್ತೆಗಳ ಸ್ಥಿತಿ ದೇವರಿಗೇ ಪ್ರೀತಿ!
3) ಈ ವರ್ಷ ಸುರಿದ ಭಾರೀ ಮಳೆಗೆ ನೆರೆ ಪರಿಸ್ಥಿತಿ ಉಂಟಾಗಿ ಅನೇಕ ಬೆಳೆಗಳು, ರಸ್ತೆಗಳು, ಸೇತುವೆ ಹಾನಿಗೊಂಡಿದ್ದು ಜನಜೀವನ ಅಸ್ಥವ್ಯಸ್ಥಗೊಂಡಿದೆ. ಅವರಿಗೆ ಪರಿಹಾರ ದೊರಕಿಸುವಲ್ಲಿ ವಿಫಲ.
4) ಪಟ್ಟಣದಲ್ಲಿ ಬೈಪಾಸ್ ನಿರ್ಮಾಣ ಮಾಡಬೇಕೆಂದು ಬಹು ವರ್ಷಗಳ ಬೇಡಿಕೆ.
5) ಪ್ರವಾಸೋದ್ಯಮಕ್ಕೆ ಅವಕಾಶ ಇದ್ದರೂ ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯ ಮರೀಚಿಕೆ.
6) ಯಲ್ಲಾಪುರ ಪಟ್ಟಣದಲ್ಲಿ ಗೂಡಂಗಡಿಗಳ ತೆರವು ಮಾಡಿದ್ದು, ಗೂಡಂಗಡಿ ಮಾಲೀಕರಿಗೆ ಪ್ರತ್ಯೇಕ ವ್ಯವಸ್ಥೆಯ ಕುರಿತು ಭರವಸೆಯೇ ಹೊರತು ವ್ಯವಸ್ಥೆ ಕನಸಾಗಿಯೇ ಉಳಿದಿದೆ.
ಇವು ಕ್ಷೇತ್ರದ ಪ್ರಮುಖ ಸಮಸ್ಯೆಗಳು ಅಷ್ಟೇ. ಈ ಎಲ್ಲಾ ಸಮಸ್ಯೆಗಳಿದ್ದರೂ ಯಾವುದೇ ಯೋಜನೆ ಅನುಷ್ಠಾನಗೊಳಿಸಿಲ್ಲ ಎಂಬುದು ಕ್ಷೇತ್ರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಆಪರೇಷನ್ ಆಗದಿದ್ದರೂ ಆಕ್ರೋಶ ಇದ್ದೇ ಇದೆ: ಆಪರೇಷನ್ ಕಮಲ ಆಗಲಿ ಅಥವಾ ಆಗದಿರಲಿ. ಯಲ್ಲಾಪುರದಲ್ಲಿ ಅನರ್ಹ ಶಾಸಕ ಹೆಬ್ಬಾರ್ ಬಗ್ಗೆ ಅಸಮಾಧಾನ ಮೊದಲಿನಿಂದಲೂ ಇದೆ. ಬರೀ ಪಟ್ಟಣದ ಪ್ರದೇಶಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಗ್ರಾಮೀಣ ಭಾಗದ ಮತದಾರರು ಮತ ನೀಡಿಲ್ಲವೆಂದು ಕಡೆಗಣಿಸಿದ್ದಕ್ಕೆ ಮತದಾರರ ಕೆಂಗಣ್ಣಿಗೆ ಶಿವರಾಮ ಹೆಬ್ಬಾರ್ ಗುರಿಯಾಗಿದ್ದಾರೆ.
ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಾಳೆ (ಗುರುವಾರ) ನ್ಯಾಯಾಲಯದಲ್ಲಿ ಅನರ್ಹತೆ ರದ್ದಾದಲ್ಲಿ ಶಿವರಾಮ ಹೆಬ್ಬಾರ್ಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತ ಎಂದು ಹೆಬ್ಬಾರರ ಆಪ್ತ ವಲಯದಲ್ಲಿ ಕೇಳಿಬಂದಿದೆ.
1,72,630 ಮತದಾರರು: ಯಲ್ಲಾಪುರ, ಮುಂಡಗೋಡು ಪೂರ್ತಿ ತಾಲೂಕು ಮತ್ತು ಶಿರಸಿ ತಾಲೂಕಿನ ಬನವಾಸಿಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. 87,942 ಪುರುಷರು, 84,687 ಮಹಿಳೆಯರು ಹಾಗೂ ಇತರೆ ಒಬ್ಬರನ್ನು ಸೇರಿ ಕ್ಷೇತ್ರದಲ್ಲಿ ಒಟ್ಟೂ 1,72,630 ಮತದಾರರಿದ್ದಾರೆ.
231 ಮತಗಟ್ಟೆಗಳು ಕ್ಷೇತ್ರದಲ್ಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದರೂ ಬುಧವಾರದವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.












Click it and Unblock the Notifications