130 ಗ್ರಾಹಕರಿಗೆ ಲಕ್ಷಗಟ್ಟಲೆ ವಂಚಿಸಿದವನನ್ನು ಬಂಧಿಸಿದ ಉತ್ತರ ಕನ್ನಡ ಪೊಲೀಸರು
ಕಾರವಾರ, ಮಾರ್ಚ್ 22: ಅಮೋಘ ಟ್ರೇಡರ್ಸ್ ಹೆಸರಿನಲ್ಲಿ ಕಾರವಾರ ನಗರದ 130 ಗ್ರಾಹಕರಿಂದ 12 ಲಕ್ಷ ಹಣ ಪಡೆದು ವಂಚನೆಗೈದ ತಮಿಳುನಾಡು ಮೂಲದ ವಂಚಕನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಜಾರಿಗೊಳಿಸಿರುವ ಅನಿಯಂತ್ರಿತ ಠೇವಣಿ ಕಾಯ್ದೆ- 201 (BUDS) ಅಡಿಯಲ್ಲಿ ಈ ವಂಚನೆಯ ಕುರಿತು ದಾಖಲಾದ ದೂರಿನ ಅನ್ವಯ, ವಂಚನೆಗೆ ರೂಪುರೇಷೆ ಹೆಣೆಯುವ ಹಂತದಲ್ಲಿಯೇ ಪ್ರಕರಣವನ್ನು ಭೇದಿಸಿದ ರಾಜ್ಯದಲ್ಲಿಯೇ ಪ್ರಥಮ ಪ್ರಕರಣ ಇದಾಗಿದೆ. ಬಂಧಿತ ವ್ಯಕ್ತಿ ಶಿವರಾಜು ರೆಂಗರಸು (38) ಎಂದು ಗುರುತಿಸಲಾಗಿದ್ದು, ಈತನೊಂದಿಗೆ ಇನ್ನೂ ಐವರು ತಮಿಳುನಾಡಿನ ತಂಜಾವೂರು ಮೂಲದವರು ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ.
ಏನಿದು ಪ್ರಕರಣ?
ಬಂಧಿತ ಆರೋಪಿ ಶಿವರಾಜು ರೆಂಗರಸು, ನಾಸೀರ್ ಮತ್ತು ಗೋವಿಂದರಾಜು ಎಂಬುವವರು ಕಾರವಾರದ ಕಾಜುಬಾಗ್ನಲ್ಲಿ ಗಣಪತಿ ಅಣ್ವೇಕರ್ ಎಂಬುವವರ ಅಂಗಡಿಯನ್ನು ಬಾಡಿಗೆಗೆ ಪಡೆದು, ಫೆ.13ರಿಂದ ಅಮೋಘ ಟ್ರೇಡರ್ಸ್ ಹೆಸರಿನಲ್ಲಿ ಅಂಗಡಿ ಪ್ರಾರಂಭಿಸಿದ್ದರು. ಅಂಗಡಿಯಲ್ಲಿ ಕೆಲವು ದಿನ ಬಳಕೆಯ ವಸ್ತುಗಳು, ಎಲ್ಲ ಬಗೆಯ ಗೃಹೋಪಯೋಗಿ, ಇಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಜೋಡಿಸಿಟ್ಟು, ರಿಯಾಯಿತಿ ದರದಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸಾರ್ವಜನಿಕವಾಗಿ ಪ್ರಚಾರ ಪಡಿಸಿದ್ದರು.

ನಂತರ ಅವುಗಳನ್ನು ಶೇ.45ರ ಕಡಿಮೆ ದರಕ್ಕೆ ನೀಡಿವುದಾಗಿ ನಂಬಿಸಿ ಗ್ರಾಹಕರಿಂದ ಮುಂಗಡವಾಗಿ ಹಣವನ್ನು ಪಡೆಯುತ್ತಿದ್ದರು. ಮೊದಲು ಬಂದ ಕೆಲವು ಗ್ರಾಹಕರಿಗೆ ಪ್ರಥಮ ಆದ್ಯತೆ ಮೇರೆಗೆ ಅತೀ ಕಡಿಮೆ ದರದಲ್ಲಿ ವಸ್ತುಗಳನ್ನು ನೀಡುವುದಾಗಿ ತಿಳಿಸಿ ಜನರಿಂದ ಹಣ ಪಡೆದು, ಸ್ವಲ್ಪ ದಿನಗಳ ನಂತರ ಮೊದಲು ಹಣ ನೀಡಿದವರಿಗೆ ವಸ್ತುಗಳನ್ನು ಕೊಟ್ಟು ಜನರನ್ನು ನಂಬಿಸುತ್ತಿದ್ದರು.
ಹೀಗಾಗಿ ಆರೋಪಿಗಳ ಆಮಿಷಕ್ಕೆ ಒಳಗಾಗಿ ಕಾರವಾರದ ಸುಮಾರು 130ಕ್ಕೂ ಹೆಚ್ಚಿನ ಗ್ರಾಹಕರು ಸುಮಾರು 12 ಲಕ್ಷ ಹಣವನ್ನು ಆರೋಪಿತರಿಗೆ ನೀಡಿ ವಸ್ತುಗಳನ್ನು ಕಾಯ್ದಿರಿಸಿದ್ದರು. ಆದರೆ ವಂಚಕರು ಗ್ರಾಹಕರಿಂದ ಹಣ ಪಡೆದುಕೊಂಡು ಕಾರವಾರದಿಂದ ಪರಾರಿಯಾಗಿದ್ದರು.

ಈ ರೀತಿ ವಂಚನೆಗೆ ಒಳಗಾದವರ ಪೈಕಿ ನಗರದ ಮಾಡಿಬಾಗ ಕಡವಾಡದ ನಿವಾಸಿ ಹಾಗೂ ವೀ ಗಾರ್ಡ್ ಕಂಪನಿಯ ಸಾಮಗ್ರಿಗಳ ರಿಪೇರಿ ಕೆಲಸ ಮಾಡುವ ಸಮರ್ಥ ನೇತಾಳಕರ್ ಎಂಬುವರೂ ಒಬ್ಬರಾಗಿದ್ದಾರೆ. ವಂಚನೆಗೊಳಗಾದ ಸಮರ್ಥ ನೇತಾಳಕರ್ ಆರೋಪಿಗಳ ಬಳಿ ಗೃಹ ಬಳಕೆಯ ಸೋಫಾ, 2 ಕಬ್ಬಿಣದ ಮಂಚ, ವಾಸಿಂಗ್ ಮಶೀನ್, ಕಪಾಟು ಹಾಗೂ ಇತರೆ ಅಡುಗೆ ಪಾತ್ರೆಗಳನ್ನು ತಂದುಕೊಡುವಂತೆ ಮುಂಗಡವಾಗಿ 1.13 ಲಕ್ಷ ರೂ. ಹಣವನ್ನು ನೀಡಿದ್ದಾರೆ. ನಂತರ ಆರೋಪಿಗಳು ವಸ್ತುಗಳನ್ನು ತಂದುಕೊಡದೇ ವಂಚಿಸಿದ್ದು, ಈ ಕುರಿತು ಮಾ.13ರಂದು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರು ಜನ ವಂಚಿತರ ತಂಡದ ಮಾಹಿತಿ ಕಲೆ ಹಾಕಿದ ಪೊಲೀಸರು, ಈ ಪೈಕಿ ಓರ್ವನನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಕರೆ ತಂದಿದ್ದಾರೆ. ಉಳಿದ ಐವರನ್ನೂ ಆದಷ್ಟು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಡಿವೈಎಸ್ಪಿ ಅರವಿಂದ ಕಲಗುಜ್ಜಿಯವರ ಮಾರ್ಗದರ್ಶನದಲ್ಲಿ ಕಾರವಾರ ಸಿಪಿಐ ಸಂತೋಷ ಶೆಟ್ಟಿ, ಪಿಎಸ್ಐಗಳಾದ ಸಂತೋಷ ಕುಮಾರ, ಎಸ್.ಬಿ ಪೂಜಾರಿ, ಹಾಗೂ ಸಿಬ್ಬಂದಿಯನ್ನೊಳಗೊಂಡ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ವಂಚಕರ ಜಾಲವನ್ನು ಭೇದಿಸಲಾಗಿದೆ.
ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವ್ಯವಹಾರ ನಡೆಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಹೀಗಾಗಿ ಈ ವ್ಯವಹಾರಗಳಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾರನ್ನು ಸಹಜವಾಗಿ ನಂಬಬಾರದು. ವಂಚನೆಗಳ ಕುರಿತು ಮಾಹಿತಿ ಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಬೇಕು ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಕಿವಿಮಾತು ಹೇಳಿದ್ದಾರೆ.












Click it and Unblock the Notifications