ಅಕ್ರಮ ಕಲ್ಲು ಕ್ವಾರಿಗಳಿಗೆ ಮೂಗುದಾರ ಹಾಕಲು ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ
ಕಾರವಾರ, ಜನವರಿ 23: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಉತ್ತರ ಕನ್ನಡ ಜಿಲ್ಲಾಡಳಿತ ಸಹ ಕಠಿಣ ಕ್ರಮಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿರುವ ಕಲ್ಲು ಕ್ವಾರಿಗಳ ಮಾಹಿತಿ ಕಲೆಹಾಕುವ ಮೂಲಕ ಅಕ್ರಮ ಕಲ್ಲುಕ್ವಾರಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿದೆ. ಕಲ್ಲು ಕ್ವಾರಿ ಬ್ಲಾಸ್ಟಿಂಗ್ ಮಾಡಲು ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಜಿಲೆಟಿನ್ ಸ್ಫೋಟಗೊಂಡ ಹಿನ್ನಲೆಯಲ್ಲಿ ಸುಮಾರು 70 ರಿಂದ 80 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪನವಾಗಿದ್ದು, ಘಟನೆಯಲ್ಲಿ ಐದಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ.

ಸಿಎಂ ಯಡಿಯೂರಪ್ಪಗೂ ಮುಜುಗರ
ತಮ್ಮ ತವರು ಜಿಲ್ಲೆಯಲ್ಲೇ ನಡೆದ ಈ ಘಟನೆಯಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೂ ಮುಜುಗರ ಉಂಟಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಅಕ್ರಮ ಕ್ವಾರಿಗಳ ಕಡಿವಾಣ ಹಾಕಲು ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲೂಕಿನ ತಹಶೀಲ್ದಾರ್ಗಳಿಗೆ ತಾಲೂಕುಗಳಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿಗಳ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಕ್ರಮವಾಗಿ ಕ್ವಾರಿ ನಡೆಸಿದವರ ವಿರುದ್ಧ ಕ್ರಮ
ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ಕಲ್ಲುಕ್ವಾರಿಗಳು ನಡೆಯುತ್ತಿವೆ? ಅವುಗಳು ಅಧಿಕೃತವಾಗಿ ಪರವಾನಗಿ ಪಡೆದಿವೆಯೇ? ಕ್ವಾರಿ ಮಾಲೀಕರ ಬಳಿ ಬ್ಲಾಸ್ಟಿಂಗ್ ಅನುಮತಿ ಇದೆಯೇ? ಎನ್ನುವ ಮಾಹಿತಿ ಕೇಳಿದ್ದಾರೆ. ಒಂದೊಮ್ಮೆ ಅಕ್ರಮ ಕ್ವಾರಿ ನಡೆಸುತ್ತಿದ್ದರೆ ಅವುಗಳ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಅಂಕೋಲಾ, ಶಿರಸಿ ಸೇರಿದಂತೆ ಹಲವೆಡೆ ಅನುಮತಿ ಪಡೆಯದೇ ಕಲ್ಲು ಕ್ವಾರಿ ನಡೆಸುತ್ತಿದ್ದು, ಜಿಲ್ಲಾಡಳಿತದ ಖಡಕ್ ವಾರ್ನಿಂಗ್ನಿಂದ ಅಕ್ರಮ ನಡೆಸುವವರಲ್ಲಿ ನಡುಕ ಹುಟ್ಟಿಸಿದೆ. ಅಕ್ರಮ ಕಲ್ಲುಕ್ವಾರಿಗಳನ್ನು ನಿಲ್ಲಿಸುವುದರ ಜೊತೆಗೆ ಈಗಾಗಲೇ ಅನುಮತಿ ಪಡೆಯದೇ ಅಕ್ರಮವಾಗಿ ಕ್ವಾರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ನಾಲ್ಕು ಕ್ರಷರ್ಗಳ ಪವರ್ ಕಟ್
ಕಾರವಾರ ತಾಲೂಕಿನ ಶಿರವಾಡ ಭಾಗದಲ್ಲಿದ್ದ ಮೂರು ಕ್ರಷರ್ ಹಾಗೂ ಅಂಕೋಲಾ ತಾಲೂಕಿನಲ್ಲಿನ ಒಂದು ಕ್ರಷರ್ ನ್ನು ಅನುಮತಿ ಪಡೆಯದೇ ಅಕ್ರಮವಾಗಿ ನಡೆಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಅವುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಅಲ್ಲದೇ ಕ್ರಷರ್ ಮಾಲೀಕರ ವಿರುದ್ಧ ಕ್ರಮ ಸಹ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಕಲ್ಲುಕ್ವಾರಿ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವಕಾಶ ಕೊಡುವುದಿಲ್ಲ. ಎಲ್ಲೇ ಅಕ್ರಮ ಕ್ವಾರಿ ನಡೆದರೂ ಸಾರ್ವಜನಿಕರು ಇಲಾಖೆಗೆ ದೂರು ನೀಡಿದರೆ, ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಶಿವಮೊಗ್ಗದಲ್ಲಿ ನಡೆದ ಘಟನೆಯ ನಂತರ ಈ ಬಗ್ಗೆ ಇನ್ನೂ ಹೆಚ್ಚಿನ ಗಮನ ಇಡಲಿದ್ದು, ಎಲ್ಲಾ ತಾಲೂಕುಗಳಲ್ಲೂ ಇರುವ ಕ್ವಾರಿಗಳ ಮಾಹಿತಿಯನ್ನು ಕಲೆ ಹಾಕಿ ಅಕ್ರಮವಿದ್ದರೆ ಪ್ರಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ 56 ಪ್ರಕರಣ
ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ಅಕ್ರಮ ಕ್ವಾರಿ ನಡೆಸಿದರೆ ಅಂಥವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಕ್ವಾರಿಗಳಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ವರ್ಷದಲ್ಲಿ ಸುಮಾರು 56 ಪ್ರಕರಣಗಳನ್ನು ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ದಾಖಲಿಸಿದ್ದೇವೆ ಎಂದು ಸೋಮಶೇಖರ್ ವಿವರಿಸಿದ್ದಾರೆ.












Click it and Unblock the Notifications