ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡದ ಅಭ್ಯರ್ಥಿಗಳ ಸಾಧನೆ
ಕಾರವಾರ, ಮೇ 31: ಸೋಮವಾರ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಶಿರಸಿ ತಾಲೂಕಿನ ಮನೋಜ ಆರ್. ಹೆಗಡೆ 213ನೇ ರ್ಯಾಂಕ್ ಮತ್ತು ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದ ದೀಪಕ್ ಆರ್. ಶೇಟ್ 311 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಿದ್ದಾಪುರ ತಾಲೂಕಿನ ಹಣಗಾರ ಗ್ರಾಮದ ಮನೋಜ್ ಆರ್. ಹೆಗಡೆ ಪಶು ಸಂಗೋಪನೆ ಇಲಾಖೆಯ ನಿವೃತ್ತ ಅಧಿಕಾರಿ ರಾಮನಾಥ ಹೆಗಡೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಹೆಗಡೆಯವರ ಪುತ್ರರಾಗಿದ್ದಾರೆ. 1 ರಿಂದ 6ನೇ ತರಗತಿವರೆಗೆ ಉಂಚಳ್ಳಿ ಶಾಲೆಯಲ್ಲಿ ಓದಿದ ಇವರು ನಂತರ ಶಿರಸಿಯ ಲೈನ್ಸ್ನಲ್ಲಿ ಪ್ರೌಢ ಶಿಕ್ಷಣ, ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ. ನಂತರ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಬಿಎಸ್ಸಿ (ಕೃಷಿ) ಪದವಿ ಪಡೆದಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಲೇ ಮನೋಜ್ 2016, 2017 ಮತ್ತು 2019ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. 2015ರಲ್ಲಿ ಮೊದಲ ಬಾರಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಪರೀಕ್ಷೆ ಬರೆದಿದ್ದರು.
ಮೊದಲ 200 ರ್ಯಾಂಕ್ ಗಳಿಸುವ ಗುರಿ
2019ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಮನೋಜ್ ಕೇವಲ 12 ಅಂಕಗಳಿಂದ ಅನುತ್ತೀರ್ಣಗೊಂಡಿದ್ದರು. ಆದರೆ ಉತ್ತೀರ್ಣರಾದರೂ ಆ ವೈಫಲ್ಯ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಈ ವರ್ಷ ಖಂಡಿತ ಅಗ್ರ 200 ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿಟ್ಟುಕೊಂಡಿದ್ದ ಮನೋಜ್ 213ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಪರೀಕ್ಷೆಗೆ ವಿಶೇಷ ಸಿದ್ಧತೆ ನಡೆಸಿರಲಿಲ್ಲ ಎಂದು ತಿಳಿಸಿರುವ ಮನೋಜ್, ಓದಿದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದೆ. ಸಾಮಾನ್ಯ ಜ್ಞಾನದ ವಿಷಯದ ಕಡೆಗೆ ಹೆಚ್ಚು ಗಮನ ಹರಿಸಿದ್ದೆ. ನನಗೆ ನಾಗರಿಕ ಸೇವೆಗಳ ಪರೀಕ್ಷೆ ಬರೆಯಲು ಚಿಕ್ಕಪ್ಪ ಪ್ರೇರೇಪಿಸಿದರು ಎಂದು ಮಾಧ್ಯಮಕ್ಕೆ ಮನೋಜ್ ತಿಳಿಸಿದ್ದಾರೆ.
ಸಾಧನೆಗೆ ಅಡ್ಡಿಯಾಗದ ಸಾಧನೆ
ತಾಲೂಕಿನ ಮಂಕಿ ಗ್ರಾಮ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದ ಚಿತ್ತಾರ ಮಜರೆಯ ದೀಪಕ್ ರಾಮಚಂದ್ರ ಶೇಟ್ 311 ನೇ ರ್ಯಾಂಕ್ ನೊಂದಿಗೆ ಈ ಸಾಧನೆ ಮಾಡಿದ್ದಾರೆ. ಬಡತನ, ಅಂತಸ್ತು, ಪ್ರದೇಶ ಸಾಧನೆಗೆ ಅಡ್ಡಿ ಆಗುವುದಿಲ್ಲ ಎಂದು ನಿರೂಪಿಸಿ ಸಾಧನೆಗಾಗಿ ಹಂಬಲಿಸುತ್ತಿರುವ ಯುವಕರಿಗೆ ಮಾದರಿಯಾಗಿದ್ದಾರೆ. ತಂದೆ ರಾಮಚಂದ್ರ ಶೇಟ್ ಬಡ ರೈತನಾಗಿದ್ದು, ತಾಯಿ ಸೀತಾ ಶೇಟ್ ಅಂಗನವಾಡಿ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಇವರಿಗೆ 3 ಗಂಡು ಹಾಗೂ 2 ಹೆಣ್ಣು ಮಕ್ಕಳ ಪೈಕಿ ಕೊನೆಯ ಮಗ ದೀಪಕ ಶೇಟ್ ಇದೀಗ ಭಾರತೀಯ ಆಡಳಿತ ಸೇವೆಗೆ ಅಣಿಯಾಗಲು ಅರ್ಹರಾಗಿದ್ದಾರೆ.
ಉದ್ಯೋಗ ತ್ಯಜಿಸಿ ತರಬೇತಿ
ಅರಣ್ಯದ ನಡುವಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಶಿರಸಿಯ ಮುರಾರ್ಜಿಯಲ್ಲಿ ಪ್ರೌಢ ಶಿಕ್ಷಣ, ಆಳ್ವಾಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಬೆಂಗಳೂರಿನ ಆರ್. ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಬಿಇ ಪದವಿ ಹಾಗೂ 1 ವರ್ಷ ಉದ್ಯೋಗ ಮಾಡಿದ್ದರು. ಬಳಿಕ ಐಎಎಸ್ ಮಾಡುವ ತವಕದಿಂದ ದೆಹಲಿಗೆ ಪಯಣಿಸಿ ಅಲ್ಲಿ ಸತತ ತರಬೇತಿ ಪಡೆದಿದ್ದ ಅವರು ಕೊನೆಗೂ 311 ನೇ ರ್ಯಾಂಕ್ ಪಡೆದು ಈ ಸಾಧನೆ ಮಾಡಿದ್ದಾರೆ.
ದಾವಣೆಗೆರೆ ಅವಿನಾಶ್ಗೆ 31ನೇ ರ್ಯಾಂಕ್
ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಒಟ್ಟು 27 ಮಂದಿ ಉತ್ತೀರ್ಣರಾಗಿದ್ದು ಅದ್ವಿತೀಯ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಅವಿನಾಶ್ ವಿ. ಅವರು ಮೊದಲ ಪ್ರಯತ್ನದಲ್ಲೇ 31ನೇ ರೈಂಕ್ ಪಡೆದಿದ್ದಾರೆ. ಒಟ್ಟು ದೇಶದಲ್ಲಿ 685 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಒಟ್ಟು 244 ಸಾಮಾನ್ಯ ವರ್ಗ, 73 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ, 203 ಮಂದಿ ಅಭ್ಯರ್ಥಿಗಳು ಇತರ ಹಿಂದುಳಿದ ವರ್ಗ, 105 ಪರಿಶಿಷ್ಟ ಜಾತಿ ಮತ್ತು 60 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ನಾಗರಿಕ ಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.