ನಗರಸಭೆ ಅಧಿಕಾರಿಗಳಿಂದ ದಬ್ಬಾಳಿಕೆ ಆರೋಪ; ಬೀದಿಗ ಬಂದ ಹೂ ಹಣ್ಣು ಮಾರಾಟಗಾರರು!
ಕಾರವಾರ, ಆಗಸ್ಟ್ 4: ನೂತನ ಮಾರುಕಟ್ಟೆಗೆ ಗ್ರಾಹಕರು ಬಾರದಕ್ಕೆ ಆ ವ್ಯಾಪಾರಿಗಳು ಬೀದಿ ಬದಿಗಳಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದರು. ಅದರಲ್ಲಿಯೂ ಶ್ರಾವಣ ಇರುವ ಕಾರಣಕ್ಕೆ ಉತ್ತಮ ವ್ಯಾಪಾರವಾಗುವ ನಿರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು, ಹಣ್ಣುಗಳನ್ನು ಖರೀದಿಸಿ ತಂದು ಮಾರಾಟಕ್ಕೆ ಕುಳಿತಿದ್ದರು. ಆದರೆ ನಗರಸಭೆ ಅಧಿಕಾರಿಗಳ ದಬ್ಬಾಳಿಕೆಯಿಂದಾಗಿ ಇದೀಗ ಬೀದಿ ಬದಿ ವ್ಯಾಪಾರಸ್ಥರು ತಂದಿದ್ದ ಹೂವು, ಹಣ್ಣು ರಸ್ತೆ ಪಾಲಾಗಿದ್ದು ಇತ್ತ ವ್ಯಾಪಾರವೂ ಹಾಳಾಗಿ ಗೋಳಾಡುವಂತಾಯಿತು.
ಶ್ರಾವಣ, ವರಮಹಾಲಕ್ಷ್ಮಿ ಪೂಜೆ ಇರುವ ಹಿನ್ನೆಲೆಯಲ್ಲಿ ನೂತನ ಮಾರುಕಟ್ಟೆ ಬದಲಾಗಿ ನಗರದ ವಿವಿಧೆಡೆ ಸುಮಾರು 30 ಕ್ಕೂ ಹೆಚ್ಚು ವ್ಯಾಪಾರಸ್ಥರು ಹೂ ಹಾಗೂ ಹಣ್ಣು ಮಾರಾಟಕ್ಕೆ ಮುಂದಾಗಿದ್ದರು. ಆದರೆ ಈ ಬಗ್ಗೆ ತಿಳಿದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೀದಿ ಬದಿ ಅಂಗಡಿ ಇಡದೇ ಮಾರುಕಟ್ಟೆಯಲ್ಲೆಯೇ ವ್ಯಾಪಾರ ಮಾಡುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದೆ ವ್ಯಾಪಾರಕ್ಕೆ ಮುಂದಾದ ಕಾರಣ ವ್ಯಾಪಾರಸ್ಥರು ತಂದಿದ್ದ ಹೂವು, ಹಣ್ಣುಗಳನ್ನ ರಸ್ತೆಗೆ ಚೆಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಆದರೆ ಇದರಿಂದ ಸಿಟ್ಟಿಗೆದ್ದ ವ್ಯಾಪಾರಸ್ಥರು ನಗರದ ದೊಡ್ಡ ಗಣಪತಿ ದೇವಸ್ಥಾನದ ಬಳಿ ರಸ್ತೆ ಮೇಲೆ ಹೂ ಹಣ್ಣು ಸುರಿದು ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದರು. ನೂತನ ಮಾರುಕಟ್ಟೆಗೆ ಜನ ಬರುತ್ತಿಲ್ಲ. ಅಲ್ಲದೆ ಎಲ್ಲ ವ್ಯಾಪಾರಸ್ಥರಿಗೂ ವ್ಯಾಪಾರ ಮಾಡಲು ಸೂಕ್ತ ವ್ಯವಸ್ಥೆ ಕೂಡ ಇಲ್ಲ. ಆದರೆ ವರಮಹಾಲಕ್ಷ್ಮಿ ಹಬ್ಬ ಇರುವ ಹಿನ್ನಲೆಯಲ್ಲಿ ಎಲ್ಲ ವ್ಯಾಪಾರಸ್ಥರು 10-20 ಸಾವಿರ ಬೆಲೆಯ ಹೂ ಹಣ್ಣು ಹಾಕಿಸಿಕೊಂಡಿದ್ದಾರೆ. ಆದರೆ ನೂತನ ಮಾರುಕಟ್ಟೆಯಲ್ಲಿ ಕುಳಿತರೇ ಇದೆಲ್ಲವನ್ನು ವ್ಯಾಪಾರ ಮಾಡಲು ಜನ ಬರುವುದಿಲ್ಲ. ಇಂತಹ ಹಬ್ಬದಲ್ಲಿಯೂ ವ್ಯಾಪಾರ ಮಾಡಿಕೊಳ್ಳದೆ ಇದ್ದಲ್ಲಿ ನಮ್ಮ ಜೀವನ ನಡೆಯುವುದಾದರು ಹೇಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನೂತನ ಮಾರುಕಟ್ಟೆ ನಿರ್ಮಾಣ ಮಾಡಿದರು ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ನಾವು ಜನರು ಓಡಾಡುವ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿಲ್ಲ. ದೇವಸ್ಥಾನದ ಸುತ್ತ ವ್ಯಾಪಾರ ಮಾಡಲು ಮುಂದಾದರೂ ಅಧಿಕಾರಿಗಳು ಹೂವಿನ ಬುಟ್ಟಿಗಳನ್ನು ಎತ್ತಿಕೊಂಡು ಹೋಗಿ ಬಳಿಕ 500, ಸಾವಿರ ದಂಡ ವಸೂಲಿ ಮಾಡಿಕೊಂಡು ದೌರ್ಜನ್ಯ ಎಸಗುತ್ತಾರೆ. ನಾವು ನಿತ್ಯ ದುಡಿಯುವುದೇ 300 ರೂ ಇವರು ಈ ರಿತಿ ದಂಡ ವಸೂಲಿ ಮಾಡಿದರೇ ನಮ್ಮ ಮಕ್ಕಳನ್ನು ಸಾಕುವುದಾದರೂ ಹೇಗೆ ಎಂದು ಆಕ್ರೋಶ ಹೊರಹಾಕಿದರು.
ಗಣೇಶ ಚತುರ್ಥಿವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ
ಇನ್ನು ಪ್ರತಿಭಟನೆ ಬಳಿಕ ಎಲ್ಲ ವ್ಯಾಪಾರಸ್ಥರು ನಗರಸಭೆಗೆ ಮುತ್ತಿಗೆ ಹಾಕಿ ನಗರಸಭೆ ಗೇಟ್ ಎದುರು ಪ್ರತಿಭಟನೆ ನಡೆಸಿದರು. ಪೌರಾಯುಕ್ತ ಆರ್.ಪಿ.ನಾಯ್ಕ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದರು. ಬಳಿಕ ಬೀದಿಬದಿ ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿರುವ ನಗರಸಭೆ ಅಧ್ಯಕ್ಷ, ಆಯುಕ್ತರು ಗಣೇಶ ಚತುರ್ಥಿವರೆಗೆ ಕುಳಿತುಕೊಳ್ಳುವಂತೆ ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದು ಈ ಬಳಿಕ ವ್ಯಾಪಾರಸ್ಥರು ತಮ್ಮ ಪ್ರತಿಭಟನೆಯನ್ನ ಕೈಬಿಟ್ಟರು.

ಒಟ್ಟಾರೇ ನಗರಸಭೆ ಅಧಿಕಾರಿ, ಸಿಬ್ಬಂದಿಗಳ ಅಚಾತುರ್ಯದಿಂದಾಗಿ ಬೀದಿಬದಿ ವ್ಯಾಪಾರಸ್ಥರಿಗೆ ಹಬ್ಬದ ವ್ಯಾಪಾರಕ್ಕೆ ಅಡ್ಡಿಯಾಗಿದ್ದು ಹೂವು, ಹಣ್ಣುಗಳನ್ನು ಬೀದಿಗೆ ಚೆಲ್ಲಿ ದೌರ್ಜನ್ಯ ತೋರಿದ್ದು ನಿಜಕ್ಕೂ ಅಮಾನವೀಯವಾಗಿದೆ.












Click it and Unblock the Notifications