Get Updates
Get notified of breaking news, exclusive insights, and must-see stories!

ಶಿಷ್ಯ ಘೋಟ್ನೇಕರ್ ವಿರುದ್ಧ ‘ಗೇಮ್ ಪ್ಲಾನ್’ ಆರಂಭಿಸಿದ್ರಾ ದೇಶಪಾಂಡೆ?

ಕಾರವಾರ, ಸೆಪ್ಟೆಂಬರ್ 17: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ವಿರುದ್ಧ ಕೆಲ ಮರಾಠಾ ಸಮುದಾಯ ನಾಯಕರು ತಿರುಗಿಬಿದ್ದಿದ್ದಾರೆ. ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ಘೋಟ್ನೇಕರ್ ಹಣಿಯಲು ದೇಶಪಾಂಡೆ ಈ ಮೂಲಕ ಗೇಮ್ ಪ್ಲಾನ್ ಮಾಡಿದ್ದಾರಾ ಅನ್ನುವ ಮಾತು ಇದೀಗ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಎರಡು ಬಾರಿ ಜಿಲ್ಲೆಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಎಲ್. ಘೋಟ್ನೇಕರ್ ಈ ಬಾರಿ ಹಳಿಯಾಳ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಹೋಗಿದ್ದರು. ತನ್ನ ರಾಜಕೀಯ ಗುರು ಆರ್.ವಿ. ದೇಶಪಾಂಡೆ ವಿರುದ್ಧ ತಿರುಗಿ ಬಿದ್ದಿದ್ದ ಘೋಟ್ನೇಕರ್ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ತನಗೆ ಟಿಕೇಟ್ ಕೊಡುವಂತೆ ಬೇಡಿಕೆ ಇಟ್ಟಿದ್ದು, ಒಂದೊಮ್ಮೆ ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿಯಾದರೂ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು.

ಕ್ಷೇತ್ರದಲ್ಲಿ ಅಧಿಕವಾಗಿ ಮರಾಠಾ ಸಮುದಾಯದವರಿದ್ದು, ಘೋಟ್ನೇಕರ್ ಸಹ ಮರಾಠಾ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಹೆಚ್ಚಿನ ಮತಗಳನ್ನು ಕಬಳಿಸಿ ಸುಲಭವಾಗಿ ಗೆಲ್ಲಬಹುದು ಎನ್ನುವ ನಿಟ್ಟಿನಲ್ಲಿ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದರು. ಇದೀಗ ಮರಾಠಾ ಸಮುದಾಯದ ಕೆಲ ನಾಯಕರೇ ಘೋಟ್ನೇಕರ್ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದು, ಗುರುವಾರ ಘೋಟ್ನೇಕರ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಾರೆ.

Karwar: RV Deshpande Started Game Plan Against SL Ghotnekar To Contest In Haliyal Constituency

ಹಳಿಯಾಳದಲ್ಲಿ ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ಬಿಸಿಎಂ ಇಲಾಖೆ ವತಿಯಿಂದ ಹಣ ಮಂಜೂರಾಗಿದ್ದು, ಸಮುದಾಯ ನಿರ್ಮಾಣ ಮಾಡಬೇಕಾಗಿದ್ದ ಕಟ್ಟಡದಲ್ಲಿ ಶಾಲೆ ಕಟ್ಟಡ ನಿರ್ಮಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆ ಸಹ ನಡೆಯುತ್ತಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಕೊರ್ವೇಕರ್ ನೇತೃತ್ವದಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ.

ಕಳೆದ ಕಾಂಗ್ರೆಸ್ ಸರ್ಕಾರದಲ್ಲಿಯೇ ಹಳಿಯಾಳದಲ್ಲಿ ಮರಾಠಾ ಸಮುದಾಯ ಭವನಕ್ಕೆ ಹಣ ಬಿಡುಗಡೆಯಾಗಿತ್ತು. ಅಂದು ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಸಮುದಾಯ ಭವನಕ್ಕೆ ಮಂಜೂರಾಗಿದ್ದ ಹಣ ಬೇರೆ ಕಾರಣಕ್ಕೆ ಬಳಕೆಯಾದ ಬಗ್ಗೆ ತಿಳಿದಿದ್ದರೂ, ತನ್ನೊಟ್ಟಿಗೆ ಘೋಟ್ನೇಕರ್ ಇದ್ದ ಕಾರಣದಿಂದ ಮೌನ ವಹಿಸಿದ್ದರು. ಸದ್ಯ ಘೋಟ್ನೇಕರ್ ದೇಶಪಾಂಡೆ ವಿರುದ್ಧವೇ ಕಿಡಿಕಾರುತ್ತಿದ್ದು, ಇದೇ ಕಾರಣಕ್ಕೆ ತನ್ನ ಶಿಷ್ಯ ಸುಭಾಷ್ ಕೊರ್ವೇಕರ್ ಮೂಲಕ ಘೋಟ್ನೇಕರ್ ವಿರುದ್ಧ ಅಸ್ತ್ರವನ್ನು ಪ್ರಯೋಗ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿದೆ.

ಈ ಮೂಲಕ ದೇಶಪಾಂಡೆ ಚುನಾವಣೆ ವೇಳೆಗೆ ಎದುರಾಳಿಯಾಗಿರುವ ಘೋಟ್ನೇಕರ್‌ರನ್ನು ಕಟ್ಟಿಹಾಕುವ, ಜೊತೆಗೆ ಮರಾಠಾ ಸಮಯುದಾಯದವರಲ್ಲೇ ಬೆಂಬಲ ಇಲ್ಲ ಎನ್ನುವುದನ್ನು ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದ್ದು, ಇದು ಹಳಿಯಾಳ ರಾಜಕೀಯದಲ್ಲಿ ಇನ್ನಷ್ಟು ಬೆಳವಣಿಗೆ ಆಗುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ.

ಘೋಟ್ನೇಕರ್‌ರಿಂದ ಮರಾಠಾ ಸಮುದಾಯಕ್ಕೆ ಏನೂ ಕೊಡುಗೆ ಇಲ್ಲ
ಹಳಿಯಾಳ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಕೃಪೆಯಿಂದ ಹತ್ತು ಹಲವಾರು ವಿವಿಧ ಹುದ್ದೆಗಳನ್ನು ಕಬಳಿಸಿಕೊಂಡಿದ್ದಾರೆ. ಎರಡು ಅವಧಿಯ ಎಂಎಲ್‌ಸಿ ಸ್ಥಾನ ಒಟ್ಟು ಹನ್ನೊಂದುವರೆ ವರ್ಷ ಮುಕ್ತಾಯಗೊಳಿಸುತ್ತಿದ್ದಾರೆ. ಮರಾಠಾ ಭವನ ಮತ್ತು ತಾಲೂಕು ಮರಾಠಾ ಪರಿಷತ್ ಅಧ್ಯಕ್ಷ ಸ್ಥಾನ ಕಬಳಿಸಿಕೊಂಡಿದ್ದಾರೆ. ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ತಮ್ಮ ಮರಾಠಾ ಸಮುದಾಯಕ್ಕೆ ಘೋಟ್ನೇಕರ್ ಕೊಡುಗೆ ಏನೂ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಕೊರ್ವೇಕರ್ ಹಾಗೂ ಇತರರು ಕಿಡಿಕಾರಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಘೋಟ್ನೇಕರ್ ತಾನು ಬಹುಸಂಖ್ಯಾತ ಮರಾಠಾ ಸಮಾಜದ ವ್ಯಕ್ತಿಯಾದ ಕಾರಣ ತಮಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ತನ್ನ ದುರಹಂಕಾರಿ, ಸ್ವಾರ್ಥಪರ ನಿಲುವಿನ ಕಾರಣ ಮರಾಠಾ ಸಮಾಜಕ್ಕೆ, ಸಮಾಜದ ಮುಖಂಡರಿಗೆ ಬೆಳೆಯದಂತೆ ತುಳಿಯುತ್ತಲೇ ಬಂದ ಘೋಟ್ನೇಕರ್ ತಾನು ಅಧ್ಯಕ್ಷ ಹಾಗೂ ನಿರ್ದೆಶಕನಾಗಿರುವ ಕೆಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ರಿಯಾಯಿತಿ ದರದಲ್ಲಿ ಟ್ರಾಕ್ಟರ್ ನೀಡದೇ ನಾಲ್ಕು ನೂರು ಫಲಾನುಭವಿಗಳ ಕಣ್ಣೀರಿನ ಶಾಪಕ್ಕೆ ಗುರಿಯಾಗುವುದು ನಿಶ್ಚಿತ ಎಂದರು.

ಸಾಫ್ಟ್‌ವೇರ್ ಉದ್ಯಮಿ ಹಾಗೂ ಘೋಟ್ನೇಕರ್ ಸಹೋದರನ ಅಳಿಯ ನಾರಾಯಣ ಠೋಸೂರ ಮರಾಠಾ ಅನುದಾನ ದುರುಪಯೋಗವಾಗಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ, ಹಳಿಯಾಳ ತಾಲೂಕು ಕೇಂದ್ರದಲ್ಲಿರುವ ತಾಲೂಕಿನ ಏಕೈಕ ಮರಾಠಾ ಭವನವನ್ನು ಘೋಟ್ನೇಕರ್ ಕಬ್ಜಾ ಮಾಡಿಕೊಂಡ ನಂತರ, ಆ ಭವನದಲ್ಲಿ ಮರಾಠಾ ಸಮಾಜದ ಸರ್ವಾಂಗೀಣ ಏಳಿಗೆಯ ಯಾವುದೇ ಕಾರ್ಯಾಗಾರಗಳಾಗಲಿ, ನಿಯಮಿತವಾಗಿ ಇತರ ಯಾವುದೇ ಸಮಾರಂಭಗಳಾಗಲೀ ನೆರವೇರಲು ಅವಕಾಶ ನೀಡಲಿಲ್ಲ. ಬದಲಿಗೆ ಭವನವನ್ನು ವಾರ್ಷಿಕ ಬಾಡಿಗೆಗೆ ನೀಡಲಾಗಿದೆ. ಮರಾಠಾ ಭವನವನ್ನು ಘೋಟ್ನೇಕರ್ ತಮ್ಮ ಕಪಿಮುಷ್ಟಿಯಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮರಾಠಾ ಸಮುದಾಯದ ವಿವಿಧ ಹೆಸರಿನಿಂದ ನಕಲಿ ಸಂಸ್ಥೆಗಳನ್ನು ಹುಟ್ಟು ಹಾಕಿದ ಷಡ್ಯಂತ್ರ ಹಾಗೂ ಅನುದಾನ ದುರುಪಯೋಗ ಮಾಡಿದವರ ವಿರುಧ್ಧ ಧ್ವನಿ ಎತ್ತುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಇಂದಿನ ಮತ್ತು ಮುಂದಿನ ಮರಾಠಾ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಪತ್ರಿಕಾಗೋಷ್ಟಿಯಲ್ಲಿ ನಾಯಕರು ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಶಂಕರ ಬೆಳಗಾಂವಕರ, ವೈ.ಪಿ. ಕೊರ್ವೇಕರ್, ಎನ್.ವಿ.ಗೌಡಾ, ದೇಮಾಣಿ ಶಿರೋಜಿ, ಪ್ರಕಾಶ ಫಾಕರೆ, ಕೃಷ್ಣಾ ಪಾಟಿಲ, ಸಂಜು ಮಿಶಾಳಿ, ಪಾಂಡುಪಾಟಿಲ, ದೆಮಾಣಿ ಶಿರೋಜಿ, ನಿಂಗಪ್ಪಾ ಢಾಮನೆಕರ, ಅಶೋಕ ಅಂಗ್ರೊಳ್ಳಿ, ನಂದಾ ಕೊರ್ವೇಕರ್, ಅಶೋಕ ಯಲ್ಲಾರಿ ಗೌಡಾ, ರವಿದಾಸ ಸುಂಟಕಾರ, ಎನ್.ವಿ. ಗೌಡಾ, ಜೀವಪ್ಪಾ ಭಂಡಾರಿ, ಫಕ್ಕೀರಪ್ಪ ಡಮ್ಮನಗಿ, ಅಶೋಕ ಅಂಗ್ರೊಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.

Recommended Video

      ಬುಮ್ರಾರನ್ನು ಎದುರಿಸೋ ತಾಕತ್ತಿರೋದು RCB ಯ ಈ ಆಟಗಾರನಿಗೆ ಮಾತ್ರ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+