ಪರೇಶ್ ನದು ಕೊಲೆಯಲ್ಲ, ಆಕಸ್ಮಿಕ ಸಾವು: ವಿಧಿವಿಜ್ಞಾನ ವರದಿ
ಕಾರವಾರ, ಡಿಸೆಂಬರ್ 12: ಹೊನ್ನಾವರದ ಪರೇಶ್ ಮೇಸ್ತಾ ಸಾವು ಕೊಲೆಯಲ್ಲ ಎಂಬ ಮಾಹಿತಿ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಮೇಸ್ತಾ ಆವರ ಮರಣೋತ್ತರ ವರದಿ ಪೊಲೀಸರಿಗೆ ಲಭ್ಯವಾಗಿದೆ.
ಮೃತರ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ, ಆಯುಧಗಳಿಂದ ಹಲ್ಲೆ ಮಾಡಿದ ಕುರುಹು ಸಹ ಇಲ್ಲ ಎಂದು ಮಣಿಪಾಲ ವಿಧಿವಿಜ್ಞಾನ ವಿಭಾಗದ ಡಾ.ಶಂಕರ್ ಎಂ.ಬಕ್ಕಣ್ಣನವರ್ ತಿಳಿಸಿದ್ದಾರೆ.

ಪೊಲೀಸರು ಕೇಳಿದ್ದ 18 ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಪರೇಶ್ ಸಾವು ಆಕಸ್ಮಿಕ. ಆತನ ದೇಹದ ಮೇಲೆ ಸುಟ್ಟ ಗಾಯಗಳಿಲ್ಲ. ಕಿವಿಯಲ್ಲಿ ಸಹ ಯಾವುದೇ ಗಾಯಗಳಿಲ್ಲ. ತಲೆಗೆ ಯಾವುದೇ ತರಹದ ಪೆಟ್ಟು ಬಿದ್ದಿಲ್ಲ. ಕೈ ಮೇಲಿನ ಹಚ್ಚೆ ಗುರುತಿಗೂ ಹಾನಿಯಾಗಿಲ್ಲ. ದೇಹ ಕಪ್ಪಾಗಿರುವುದು ಸಹಜ ಪ್ರಕ್ರಿಯೆ ಎಂದಿದ್ದಾರೆ.

ಬೆರಳುಗಳ ಮೇಲಿನ ಉಗುರು ಸಹಜವಾಗಿವೆ. ದೇಹದ ಮೇಲೆ ಬಿಸಿನೀರು ಅಥವಾ ಆಸಿಡ್ ಎರಚಿಲ್ಲ. ಶವ ನೀರಿನಲ್ಲಿದ್ದ ಕಾರಣ ಶಿಶ್ನ ಕೊಳೆತ ರೀತಿ ಇವೆ. ಕರಳು ಮತ್ತು ಜಠರವನ್ನು ರಾಸಾಯನಿಕ ಪ್ರಕ್ರಿಯೆ ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ವರದಿಯಲ್ಲಿ ವಿವರಿಸಿದ್ದಾರೆ.

ಪರೇಶ್ ಮೇಸ್ತಾ ಅವರಿಗೆ ಪೊಲೀಸರೇ ಚಿತ್ರ ಹಿಂಸೆ ಕೊಟ್ಟು ಕೊಂದಿದ್ದಾರೆ ಎಂಬ ಆರೋಪದಲ್ಲಿ ತಿರುಳಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.

ಆದರೆ, ಇದು ಕಾಂಗ್ರೆಸ್ ಸರಕಾರದ ಕುತಂತ್ರ. ಡಿವೈಎಸ್ ಪಿ ಗಣಪತಿ, ಡಿ.ಕೆ.ರವಿ ಮರಣೋತ್ತರ ವರದಿಯನ್ನೇ ತಿರುಚಿದ ಸರಕಾರಕ್ಕೆ ಪರೇಶ್ ಸಾವಿನ ವರದಿ ತಿರುಚಲು ಎಷ್ಟು ಹೊತ್ತು ಬೇಕು? ಇದು ಸುಳ್ಳು ವರದಿ ಎಂದು ಸೋಮವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸುದ್ದಿ ಹರಿಬಿಟ್ಟಿವೆ.












Click it and Unblock the Notifications