ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಗೆ ಎರಡೂ ಪಕ್ಷಗಳು ನಿರಾಕರಣೆ: ಪರಮೇಶ್ವರ್
ಕಾರವಾರ: 'ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಿರಾಕರಿಸಿವೆ. ಹೀಗಾಗಿ, ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ' ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.
ಹೊನ್ನಾವರ ತಾಲ್ಲೂಕಿನ ಇಡಗುಂಜಿಯ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
'ಸಮ್ಮಿಶ್ರ ಸರ್ಕಾರದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗುತ್ತದೆ' ಎಂದು ಸ್ಪಷ್ಟಪಡಿಸಿದರು.

'ಲೋಕಸಭಾ ಚುನಾವಣೆಯೊಳಗೆ ಸಮ್ಮಿಶ್ರ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಹಾಗೂ ನಿಗಮ ಮಂಡಳಿಗಳ ಹುದ್ದೆಯನ್ನು ನೇಮಕ ಮಾಡಲಾಗುವುದು. ಸಮ್ಮಿಶ್ರ ಸರ್ಕಾರದ ಆರಂಭದಲ್ಲಿ ಹಂಚಿಕೆಯಾದಂತೆ ಕಾಂಗ್ರೆಸ್ನಲ್ಲಿ ಆರು ಹಾಗೂ ಜೆಡಿಎಸ್ನಲ್ಲಿ ಒಂದು ಸಚಿವ ಸ್ಥಾನ ಬಾಕಿ ಇದೆ' ಎಂದು ಮಾಹಿತಿ ನೀಡಿದರು.
'ಈಶ್ವರಪ್ಪ ಹೇಳಿರುವ ಹೇಳಿಕೆಗೆ ಮಹತ್ವ ನೀಡಬೇಕೆಂದೇನಿಲ್ಲ. ಅವರು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ರಾಜಕಾರಣದಲ್ಲಿ ಇದ್ದೇವೆ ಎಂಬ ಮಾತ್ರಕ್ಕೆ ಹೇಗೆ ಮಾತನಾಡಿದರೂ ನಡೆಯುತ್ತದೆ ಎಂದುಕೊಳ್ಳುವುದು ಸರಿಯಲ್ಲ' ಎಂದು ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದಲ್ಲಿ ಇರಬೇಕಿತ್ತು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

'ಆಪರೇಶನ್ ಬಿಜೆಪಿ ನಡಿಯಲ್ಲ. ಬಿಜೆಪಿಯ ಕೆಲವರೇ ಕ್ಷೇತ್ರದಲ್ಲಿ ಕೆಲಸ ಆಗಬೇಕು, ಅಭಿವೃದ್ಧಿ ಆಗಬೇಕು ಎಂದು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ' ಎಂದು ಪತ್ರಕರ್ತರ ಪ್ರಶ್ನೆಯೊಂದಿಗೆ ಪ್ರತಿಕ್ರಿಯೆ ನೀಡಿದರು.












Click it and Unblock the Notifications