ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಶಂಕೆ: ಭಟ್ಕಳದ ಮೂವರು ಎನ್ಐಎ ವಶಕ್ಕೆ
ಕಾರವಾರ,
ಆಗಸ್ಟ್ 06: ಗುರುವಾರ ಮಂಗಳೂರಿನಲ್ಲಿ ಮಾಜಿ ಶಾಸಕ ದಿ.ಬಿ.ಎಂ. ಇದಿನಬ್ಬ ಮೊಮ್ಮಗ ಉಮ್ಮರ್ ಅಬ್ದುಲ್ ರೆಹಮಾನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳು, ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಲಗ್ಗೆ ಇಟ್ಟಿದ್ದಾರೆ. ಭಟ್ಕಳದಿಂದಲೂ ಮೂವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಮುಂದಾಗಿದ್ದಾರೆ. id="toptextpromo"> id='are-slot-1' class='oiad oi-axt oiadv'>ಸಾಮಾನ್ಯವಾಗಿ
ದೇಶದ ಯಾವ ಮೂಲೆಯಲ್ಲೇ ಭಯೋತ್ಪಾದನಾ ಚಟುವಟಿಕೆ ನಡೆದರೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಹೆಸರು ಅದರೊಟ್ಟಿಗೆ ತಳಕು ಹಾಕಿಕೊಳ್ಳುತ್ತದೆ. ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲಿ ನಡೆಯುವ ಉಗ್ರ ಕೃತ್ಯಗಳ ವೇಳೆಯೂ ಜಗತ್ತಿನ ಕಣ್ಣು ಭಟ್ಕಳದ ಮೇಲೆ ಒಮ್ಮೆ ಬೀರುತ್ತದೆ. ದಶಕಗಳುರುಳಿದರೂ ಭಟ್ಕಳದ ಜೊತೆಗಿನ ಭಯೋತ್ಪಾದನೆ ಎಂಬ ತಳುಕು ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತಿಲ್ಲ. 2008ರಲ್ಲಿ ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳ ಬಳಿಕ ಇದರಲ್ಲಿ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ ಸಹೋದರರ ಕೈವಾಡ ಕೇಳಿಬಂದಿತ್ತು. id='are-slot-2' class='oiad oi-axt oiadv'>
ಭಟ್ಕಳದ ಹೆಸರು ಕೂಡ ಕುಖ್ಯಾತಿ
ಅಂದಿನಿಂದ ಭಯೋತ್ಪಾದನಾ ಚಟುವಟಿಕೆಗಳೊಂದಿಗೆ ಭಟ್ಕಳದ ಹೆಸರು ಕೂಡ ಕುಖ್ಯಾತಿ ಗಳಿಸುತ್ತಲೇ ಇದೆ. ಈ ಸಹೋದರರು ‘ಭಟ್ಕಳ ಬ್ರದರ್ಸ್' ಅಂತಲೇ ಕುಖ್ಯಾತಿ ಗಳಿಸಿದ್ದು, ಇನ್ನೂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾರೆಂದು ಹೇಳಲಾಗುತ್ತದೆ.
ಇವರು ತಾವು ಸ್ಥಾಪಿಸಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ರಾಜ್ಯದ ಕರಾವಳಿಯ ಯುವಕರನ್ನು ಬಳಸಿಕೊಂಡು, ರಾಜ್ಯದಲ್ಲಿ ಸಂಘಟನೆ ನೆಲೆಯೂರುವಂತೆ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಇನ್ನು ಇವರ ಸಂಬಂಧಿ, ಪ್ರಸ್ತುತ ಬಂಧನದಲ್ಲಿರುವ ಯಾಸೀನ್ ಭಟ್ಕಳ ಕೂಡ ಮೂಲತಃ ಭಟ್ಕಳದವನಾಗಿರುವ ಕಾರಣ ಸಹಜವಾಗಿ ಯಾವುದೇ ಉಗ್ರ ಚಟುವಟಿಕೆ ಪ್ರಕರಣಗಳಲ್ಲಿ ಭಟ್ಕಳದ ಹೆಸರು ಕೂಡ ಇದ್ದೇ ಇರುತ್ತದೆ.

ಇದಿನಬ್ಬ ಪುತ್ರ ಭಾಷಾರನ್ನು ವಶಕ್ಕೆ ಪಡೆದಿತ್ತು
ಆದರೆ ಸಿರಿಯಾ, ಇರಾಕ್ನಲ್ಲಿ ನೆಲೆ ಕಂಡುಕೊಂಡಿರುವ ಐಸಿಸ್ ಉಗ್ರ ಸಂಘಟನೆ ಕೂಡ ಇತ್ತೀಚಿಗೆ ರಾಜ್ಯದ ಕರಾವಳಿಯಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇತ್ತೀಚಿಗೆ ಕರಾವಳಿಯಲ್ಲಿ ಎನ್ಐಎ ವಶಕ್ಕೆ ಪಡೆಯುತ್ತಿರುವುದು ಕೂಡ ಇದೇ ಸಂಘಟನೆಯ ನಂಟಿನ ಶಂಕೆಯಲ್ಲಿ. ಮಂಗಳೂರಿನಲ್ಲಿ ನಿನ್ನೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಕೂಡ ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯ ಆಧಾರದಲ್ಲೇ ಮಾಜಿ ಶಾಸಕ, ದಿ.ಬಿ.ಎಂ. ಇದಿನಬ್ಬ ಮೊಮ್ಮಗ ಉಮ್ಮರ್ ಅಬ್ದುಲ್ ರೆಹಮಾನ್ನನ್ನು ವಶಕ್ಕೆ ಪಡೆದಿತ್ತು. ದಿ.ಬಿ.ಎಂ. ಇದಿನಬ್ಬ ಮರಿಮೊಮ್ಮಗಳು ಅಜ್ಮಲಾಳನ್ನು ಕೇರಳದ ಯುವಕನೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಆತ ಉದ್ಯೋಗಕ್ಕೆಂದು ಶ್ರೀಲಂಕಾಕ್ಕೆ ಹೋದವನು ವಾಪಸ್ಸಾಗಿಲ್ಲ. ಹೀಗಾಗಿ ಆತ ಉಗ್ರ ಸಂಘಟನೆ ಸೇರಿರುವ ಶಂಕೆ ಕೇರಳದಲ್ಲಿದೆ.

ಐಸಿಸ್ ಸಂಘಟನೆಗೆ ಸೇರ್ಪಡೆಯಾಗಿರುವ ಶಂಕೆ
ಇನ್ನು ಕೇರಳದ ಅನೇಕರು ಐಸಿಸ್ ಸಂಘಟನೆಗೆ ಸೇರ್ಪಡೆಯಾಗಿರುವ ಶಂಕೆಯೂ ಇದ್ದು, ಅದರಲ್ಲಿ ಈ ಅಜ್ಮಲಾ ಕುಟುಂಬ ಕೂಡ ಒಂದು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಎನ್ಐಎ ಉಮ್ಮರ್ ಅಬ್ದುಲ್ ರೆಹಮಾನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇನ್ನು ಇದೇ ಪ್ರಕರಣದಲ್ಲಿ ಮುಂದುವರಿದು ಇಂದು ಭಟ್ಕಳದ ಎರಡು ಕಡೆಗಳಲ್ಲಿ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಅಧಿಕಾರಿಗಳು, ಮೂವರನ್ನು ವಶಕ್ಕೆ ಪಡೆದಿದೆ. ಭಟ್ಕಳ ಪಟ್ಟಣದ ಉಮರ್ ಸ್ಟ್ರೀಟ್ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳ ಮೇಲೆ ಸ್ಥಳೀಯ ಪೊಲೀಸರ ನೆರವಿನಿಂದ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು, ಮೂವರನ್ನು ವಶಕ್ಕೆ ಪಡೆದು ತೆರಳಿದೆ ಎನ್ನಲಾಗಿದೆ. ಈ ಹಿಂದೆ ಭಯೋತ್ಪಾದನಾ ಆರೋಪದಲ್ಲಿ ಬಂಧನದಲ್ಲಿರುವವನೊಬ್ಬನ ತಮ್ಮನನ್ನೂ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದೆ ಎನ್ನಲಾಗಿದೆ.

ಉಗ್ರ ಸಂಘಟನೆಯೊಂದಿಗೆ ಸಂಪರ್ಕ, ಹಣ ಸಂಗ್ರಹ
ಸಾಮಾಜಿಕ ಜಾಲತಾಣಗಳಲ್ಲಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ, ಹಣ ಸಂಗ್ರಹ, ಯುವಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇಮಕಾತಿ ಮಾಡಿಕೊಳ್ಳುವ ಕಾರ್ಯಗಳು ರಾಜ್ಯದ ಕರಾವಳಿ ಭಾಗದಲ್ಲೇ ಹೆಚ್ಚಾಗಿ ನಡೆಯುತ್ತಿರುವ ಅನುಮಾನ ಎನ್ಐಎಯದ್ದು. ಹೀಗಾಗಿ ಈ ಆರೋಪಗಳಲ್ಲೇ ಹೆಚ್ಚಿನವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಭಟ್ಕಳದಲ್ಲಿ ಇಂದು ವಶಕ್ಕೆ ಪಡೆದವರ ಕುರಿತು ಅಧಿಕೃತ ಮಾಹಿತಿ ಇನ್ನೇನು ಹೊರ ಬರಬೇಕಿದೆ.
Recommended Video

ನಿನ್ನೆಯಿಂದಲೇ ಎಸ್ಪಿ ಮೊಕ್ಕಾಂ
ಇನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಹೀಗೊಂದು ಶಂಕೆಯ ಮಾಹಿತಿ ಬಂದ ಕಾರಣ ನಿನ್ನೆಯಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭಟ್ಕಳದಲ್ಲಿ ಮೊಕ್ಕಾಂ ಹೂಡಿದ್ದರು. ಕೆಎಸ್ಆರ್ಪಿ ತುಕಡಿಗಳಿಂದ ವಿವಿಧೆಡೆ ಬಿಗಿ ಭದ್ರತೆಯನ್ನೂ ವಹಿಸಲಾಗಿತ್ತು. ಸದ್ಯ ವಶಕ್ಕೆ ಪಡೆದಿರುವ ಮೂವರಿಗೂ ಐಸಿಸ್ ನಂಟು ಇರುವುದಾಗಿ ಶಂಕೆ ವ್ಯಕ್ತವಾಗಿದ್ದು, ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಎನ್ಐಎ ಹಂಚಿಕೊಂಡಿಲ್ಲ. ಸ್ಥಳೀಯ ಪೊಲೀಸರು ಕೂಡ ಹೆಚ್ಚಿನ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಲು ಹಿಂದೇಟು ಹಾಕಿದ್ದಾರೆ.












Click it and Unblock the Notifications