SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾದ ನಾಗಾಂಜಲಿ ನಾಯ್ಕ
ಕಾರವಾರ, ಏಪ್ರಿಲ್ 30:ಮಾಜಿ ಬಿಎಸ್ಎಫ್ ಯೋಧನ ಮಗಳು ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕುಮಟಾ ಕಲಭಾಗದ ಕೊಲಬಾ ವಿಠೋಬಾ ಶಾನಭಾಗ ಕಲಭಾಗಕರ್ ಹೈಸ್ಕೂಲ್ ನ (ಸಿವಿಎಸ್ ಕೆ) ವಿದ್ಯಾರ್ಥಿನಿ ನಾಗಾಂಜಲಿ ನಾಯ್ಕ 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾಳೆ.
ನಾಗಾಂಜಲಿ, ಪರಮೇಶ್ವರ ನಾಯ್ಕ ಹಾಗೂ ಚೇತನಾ ನಾಯ್ಕ ದಂಪತಿಯ ಪುತ್ರಿ. ಪರಮೇಶ್ವರ ಅವರು ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸಿ, 2006ರಲ್ಲಿ ನಿವೃತ್ತಿ ಪಡೆದರು. ತದನಂತರ ಕಳೆದ ಹತ್ತು ವರ್ಷಗಳಿಂದ ಸ್ವಂತ ಟೆಂಪೊವೊಂದನ್ನು ಇಟ್ಟುಕೊಂಡು, ಬಾಡಿಗೆಗೆ ಬಿಡುತ್ತಿದ್ದಾರೆ.

"ನಾಗಾಂಜಲಿ Rank ಬರುತ್ತಾಳೆಂಬ ವಿಶ್ವಾಸ ನಮಗೆ ಹಾಗೂ ಅವಳಿಗೂ ಇತ್ತು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಹಳ ಕೂಲಂಕುಷವಾಗಿ ಅಧ್ಯಯನ ಮಾಡಿದ್ದಳು. ತುಂಬಾ ಮುಗ್ಧೆ ಹಾಗೂ ವಿಧೇಯಕ ವಿದ್ಯಾರ್ಥಿನಿ" ಎನ್ನುವುದು ಶಾಲೆಯ ಮುಖ್ಯ ಶಿಕ್ಷಕಿ ಸುಮಾ ಪ್ರಭು ಅವರ ಅಭಿಪ್ರಾಯ.
ಶಾಲೆಯಲ್ಲಿ ಪ್ರತಿವರ್ಷ 90ಕ್ಕೂ ಅಧಿಕ ಮಕ್ಕಳು ಡಿಸ್ಟಿಂಕ್ಷನ್ ಬರುತ್ತಿದ್ದರು. ಶೇ. 70 ನಮ್ಮಲ್ಲಿ ಕನಿಷ್ಠ ಅಂಕ. ಈ ಬಾರಿ 129 ಮಕ್ಕಳು ಪರೀಕ್ಷೆಗೆ ಕುಳಿತಿದ್ದರು ಎಂದು ಸುಮಾ ಪ್ರಭು ಅವರು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆ. ಈ ಬಾರಿ ಶೇ 88.12 ಫಲಿತಾಂಶ ದಾಖಲಿಸಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಬಾರಿ ಇಷ್ಟೇ ಫಲಿತಾಂಶ ದಾಖಲಿಸಿ ಎರಡನೇ ಸ್ಥಾನದಲ್ಲಿತ್ತು. ಶಿರಸಿ ಶೈಕ್ಷಣಿಕ ಜಿಲ್ಲೆ 21ನೇ ಸ್ಥಾನದಲ್ಲಿತ್ತು. ಈ ಬಾರಿ 12ನೇ ಸ್ಥಾನಕ್ಕೆ ಬಂದಿದೆ.












Click it and Unblock the Notifications