ಉತ್ತರ ಕನ್ನಡ; ಅಂಕೋಲಾದಲ್ಲಿ 30ಕ್ಕೂ ಅಧಿಕ ನಕಲಿ ವೈದ್ಯರ ಪತ್ತೆ
ಅಂಕೋಲಾ, ಮೇ 09; ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದು ವಾರದಿಂದ ತಾಲೂಕು ವೈದ್ಯಾಧಿಕಾರಿ ಡಾ. ನಿತೀನ್ ಹಸ್ಮೇಲಕರ್ ನೇತೃತ್ವದಲ್ಲಿ ನಕಲಿ ವೈದ್ಯರ ಪತ್ತೆಗೆ ದಾಳಿ ನಡೆಯುತ್ತಿದೆ.
ಶನಿವಾರ ಸಹ ತಾಲೂಕಿವ ಅವರ್ಸಾ ಗ್ರಾಮದಲ್ಲಿ ಇಬ್ಬರು ನಕಲಿ ವೈದ್ಯರ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಔಷಧಿ ಸೇರಿದಂತೆ ವೈದ್ಯಕೀಯ ಸೇವೆಗೆ ಬಳಕೆಯಾಗುತ್ತಿದ್ದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಯಾರೇ ಕ್ಲಿನಿಕ್ ಅಥವಾ ಆಸ್ಪತ್ರೆಗಳನ್ನು ನಡೆಸಬೇಕಾದರೆ ನಿಗದಿತ ಶಿಕ್ಷಣ ಪಡೆದು ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಪ್ರಾರಂಭಿಸಬೇಕು.
ಅಲ್ಲದೇ ಮೆಡಿಕಲ್ ತ್ಯಾಜ್ಯ ವಿಲೇವಾರಿಯ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ಜೊತೆಗೆ ಪರಿಸರ ಬೋರ್ಡ್ನಿಂದ ಸಹ ಅನುಮತಿಯನ್ನ ಪಡೆಯಬೇಕು. ಆದರೆ ತಾಲೂಕಿನಲ್ಲಿ ಹಲವರು ನಿಗದಿತ ಶಿಕ್ಷಣ ಪಡೆಯದೇ ಕೆ.ಪಿ.ಎಂ.ಇ ಅಡಿಯಲ್ಲೂ ನೋಂದಣಿ ಮಾಡಿಕೊಳ್ಳದೇ ಕ್ಲೀನಿಕ್ ನಡೆಸಿ ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಅವರ್ಸಾ ಗ್ರಾಮದಲ್ಲಿ ನಾಗರಾಜ್ ನಾಯ್ಕ ಹಾಗೂ ಪ್ರೇಮಾನಂದ ನಾಯ್ಕ ಎನ್ನುವವರ ಕ್ಲಿನಿಕ್ಗಳ ಮೇಲೆ ಶನಿವಾರ ತಾಲೂಕು ವೈದ್ಯಾಧಿಕಾರಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಯಾವುದೇ ಅನುಮತಿಯನ್ನು ಪಡೆಯದೇ ಕ್ಲಿನಿಕ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇನ್ನು ಓರ್ವ ವ್ಯಕ್ತಿ ನಡೆಸುತ್ತಿದ್ದ ಕ್ಲಿನಿಕ್ನಲ್ಲಿ ಅಪಾರ ಪ್ರಮಾಣದ ಔಷಧಿಗಳು, ವೈದ್ಯಕೀಯ ಉಪಕರಣಗಳು ಪತ್ತೆಯಾಗಿದೆ.

ಯಾವುದೇ ದಾಖಲೆಗಳು ಇಲ್ಲ
ಇದಲ್ಲದೇ ಕ್ಲೀನಿಕ್ನಲ್ಲಿ ಮೂರು ಬೆಡ್ ಹಾಗೂ ಒಂದು ಡೆಲಿವರಿ ಬೆಡ್ ಸಹ ಪತ್ತೆಯಾಗಿದ್ದು, ಹೆರಿಗೆಯನ್ನು ಸಹ ಮಾಡಿಸಲಾಗುತ್ತಿತ್ತೇ? ಎನ್ನುವ ಅನುಮಾನ ವ್ಯಕ್ತವಾಗಿದೆ. ತಾಲೂಕು ವೈದ್ಯಾಧಿಕಾರಿ ದಾಳಿ ನಡೆಸಿದ ವೇಳೆ ಇಬ್ಬರ ಬಳಿ ಯಾವುದೇ ದಾಖಲೆ ಇರದಿರುವುದು ಕಂಡು ಬಂದಿದೆ. ಇನ್ನು ಕ್ಲಿನಿಕ್ನಲ್ಲಿ ಪತ್ತೆಯಾದ ಔಷಧಿಗಳನ್ನ ಸಹ ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

30ಕ್ಕೂ ಅಧಿಕ ನಕಲಿ ವೈದ್ಯರ ಪತ್ತೆ
ತಾಲೂಕಿನಲ್ಲಿ ಈವರೆಗೆ ಸುಮಾರು 30ಕ್ಕೂ ಅಧಿಕ ನಕಲಿ ವೈದ್ಯರುಗಳು ಪತ್ತೆಯಾಗಿದ್ದು, ಯಾವುದೇ ವೈದ್ಯಕೀಯ ಶಿಕ್ಷಣ ಪಡೆಯದೇ ವೈದ್ಯರೆಂದು ಕ್ಲಿನಿಕ್ ನಡೆಸಿ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದರು. ಇನ್ನು ಕೆಲವೆಡೆ ಬಿಎಂಎಸ್, ಬಿಎಚ್ಎಂಎಸ್ ಆದವರು ಅಲೋಪತಿ ಚಿಕಿತ್ಸೆ ಕೊಡುತ್ತಿದ್ದುದನ್ನ ಪತ್ತೆಯಾಗಿದೆ. ಕೊರೊನಾ ಸಂದರ್ಭದಲ್ಲಿ ಹಲವರು ಜ್ವರ ಇನ್ನಿತರ ಸಮಸ್ಯೆ ಎದುರಾದಾಗ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ತಾಲೂಕಿನಲ್ಲಿ ಕೆಲವೆಡೆ ಕೊರೊನಾ ಸೋಂಕಿನ ಲಕ್ಷಣ ಇರುವವರು ಈ ನಕಲಿ ವೈದ್ಯರ ಬಳಿಯೇ ತೆರಳಿ ಚಿಕಿತ್ಸೆ ಪಡೆದು ಸೋಂಕು ಮುಚ್ಚಿಡುವ ಪ್ರಯತ್ನಕ್ಕೆ ಇಳಿದ್ದಾರೆ.

ನಕಲಿ ವೈದ್ಯರ ಹಾವಳಿ
ಅಂಕೋಲಾ ತಾಲೂಕು ವೈದ್ಯಾಧಿಕಾರಿ ನಕಲಿ ವೈದ್ಯರ ಹಾವಳಿ ತಡೆಯಲು ಪರಿಶ್ರಮಿಸುತ್ತಿದ್ದು ತಾಲೂಕು ವೈದ್ಯಾಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
"ಯಾರೇ ಕ್ಲೀನಿಕ್ ಅಥವಾ ಆಸ್ಪತ್ರೆ ನಡೆಸಬೇಕಾದರು ಕೆ.ಪಿ.ಎಂ ಈ ಕಾಯ್ದೆ ಪ್ರಕಾರ ನೋಂದಣಿ ಮಾಡಿಕೊಂಡು ಸೇವೆ ಸಲ್ಲಿಸಬೇಕು. ತಾಲೂಕಿನಲ್ಲಿ ಕೋವಿಡ್ ಸಂಧರ್ಭದಲ್ಲೂ ಹಲವರು ರೋಗ ಲಕ್ಷಣ ಕಂಡು ಬಂದರು ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದಿತ್ತು. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಅದರಂತೆ ದಾಳಿ ನಡೆಸಿದ್ದು ಹಲವು ನಕಲಿ ವೈದ್ಯರು ಪತ್ತೆ ಮಾಡಲಾಗಿದೆ" ಎಂದು ತಾಲೂಕು ವೈದ್ಯಾಧಿಕಾರಿ ಡಾ.ನಿತೀನ್ ಹೊಸ್ಮೆಲ್ಕರ್ ತಿಳಿಸಿದ್ದಾರೆ.
Recommended Video

ನೋಂದಣಿ ಮಾಡಿಕೊಳ್ಳದೇ ಚಿಕಿತ್ಸೆ
ಸುಮಾರು 15 ಜನರು ವೈದ್ಯಕೀಯ ಶಿಕ್ಷಣ ಪಡೆದಿದ್ದರು ನೊಂದಣಿ ಮಾಡಿಕೊಳ್ಳದೇ ಚಿಕಿತ್ಸೆ ನೀಡುತ್ತಿದ್ದು ಅವರಿಗೂ ನೊಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು 9 ಜನರು ನೊಂದಣಿ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಆಯುರ್ವೇದ, ಹೋಮಿಯೋಪತಿ ಶಿಕ್ಷಣ ಪಡೆದವರು ಅಲೋಪಥಿ ಚಿಕಿತ್ಸೆ ಕೊಡಲು ಬರುವುದಿಲ್ಲ. ಅಂತವರಿಗೆ ನಿಲ್ಲಿಸುವಂತೆ ಸೂಚನೆ ನೀಡಿದ್ದು ತಾಲೂಕಿನಲ್ಲಿ ನಕಲಿ ವೈದ್ಯರಿಗೆ ಇಲಾಖೆಯಿಂದ ಬ್ರೇಕ್ ಹಾಕುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications