ಸಚಿವ ದೇಶಪಾಂಡೆ ಬಿಜೆಪಿ ಸೇರ್ತಾರೆ ಎನ್ನುವುದಕ್ಕೆ ಸಿಕ್ತು ಉತ್ತರ
ಕಾರವಾರ, ನವೆಂಬರ್ 20: ಉತ್ತರಕನ್ನಡ ಜಿಲ್ಲಾ ಉಸ್ತುವಾರಿ, ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಗೆ ತೆರೆ ಬಿದ್ದಿದೆ.
2018ರ ಚುನಾವಣೆ, ಪಕ್ಷಾಂತರ ಮಾಡಲಿರುವ ಶಾಸಕರ ಪಟ್ಟಿ!
ಇತ್ತೀಚಿಗೆ ಹಳಿಯಾಳದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ದೇಶಪಾಂಡೆ, "ನಾನು ಎಂದಿಗೂ ಬಿಜೆಪಿಗೆ ಸೇರುವುದಿಲ್ಲ. ಬಿಜೆಪಿಯಿಂದಲೇ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ನಾನು ಬಿಜೆಪಿ ಸೇರುತ್ತೇನೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ' ಅಂತ ಸ್ಪಷ್ಟನೆ ನೀಡಿದರು.
ಈ ಮೂಲಕ ಕೆಲ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೇಶಪಾಂಡೆ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಅವರು ಸ್ಪಷ್ಟನೆ ನೀಡುವ ಮೂಲಕ ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಹರಿದಾಡುತ್ತಿದ್ದ ಗುಸುಗುಸು ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರವು ರಾಜ್ಯದ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಆಡಳಿತ ನೀಡುತ್ತಿದೆ.
ನನ್ನ ಹಾಗೂ ನಮ್ಮ ಕಾಂಗ್ರೆಸ್ ಪಕ್ಷದಲ್ಲಿರುವ ಸಿದ್ಧಾಂತವು ಜನಪರ ಯೋಜನೆಗಳು ಯಾವ ಪಕ್ಷದಲ್ಲಿಯೂ ಇಲ್ಲ. ರಾಜ್ಯ ಸರ್ಕಾರದ ಹಿರಿಯ ಸಚಿವನಾಗಿರುವ ನಾನು ಎಂದಿಗೂ ಕಾಂಗ್ರೆಸ್ ನಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದರು.
ಸಂಸದರಾಗಿ ಐದು ಬಾರಿ ಆಯ್ಕೆಯಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಅನಂತಕುಮಾರ ಹೆಗಡೆಯವರು ಈಗ ಕೇಂದ್ರ ಸಚಿವರಾಗಿದ್ದು, ತಮಗೆ ನೀಡಿರುವ ಖಾತೆಯ ಬಗ್ಗೆ ಗಮನ ಹರಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದನ್ನು ಭಾಷಣ ಬಿಗಿಯುವುದರಲ್ಲಿ ನಿರತರಾಗಿದ್ದಾರೆ' ಎಂದು ಗುಡುಗಿದರು.