ಶಿರಸಿಯಲ್ಲಿ ಉಡ ನುಂಗಲು ಯತ್ನಿಸಿ ವಿಫಲವಾದ ಕಾಳಿಂಗ ಸರ್ಪ
ಕಾರವಾರ, ಸೆಪ್ಟೆಂಬರ್, 12: ಶಿರಸಿಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ತಾನು ಬೇಟೆಯಾಡಿದ ಉಡವನ್ನು ನುಂಗಲು ಸತತ ಪ್ರಯತ್ನ ನಡೆಸಿದೆ. ಆದರೂ ಉಡವನ್ನು ನುಂಗಲು ಸಾಧ್ಯವಾಗದೆ ಬೃಹತ್ ಕಾಳಿಂಗ ಸರ್ಪ ಕೊನೆಗೂ ನಿರಾಶೆಯಾಗಿದೆ. ಉಡವನ್ನು ಬಿಟ್ಟು ನಿರಾಶೆಯಿಂದ ತೆರಳಿದ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗಿದೆ.
ಕಾಳಿಂಗ ಸರ್ಪ ಉಡವನ್ನು ನುಂಗುತ್ತಿರುವ ವಿಡಿಯೋ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅನಂತಮೂರ್ತಿ ಮತ್ತಿಘಟ್ಟ ಎನ್ನುವ ಬೈಕ್ ಸವಾರ ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬೃಹತ್ ಗಾತ್ರದ ಕಾಳಿಂಗ ಸರ್ಪ ಉಡವನ್ನು ನುಂಗಲು ಯತ್ನಿಸಿದೆ. ಆದರೆ ಸರ್ಪ ಶತಪ್ರಯತ್ನ ನಡೆಸಿದರೂ ಉಡವನ್ನು ನುಂಗಲಾರದೆ ಹಿಂದಕ್ಕೆ ತೆರಳಿದೆ. ಬಳಿಕ ಕಾಳಿಂಗ ಸರ್ಪ ಸೋಲನ್ನು ಒಪ್ಪಿಕೊಂಡು ಹಿಂದೆ ಸರಿದಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ.
ಗಾತ್ರದಲ್ಲಿ ಉಡ ದೊಡ್ಡದಿದ್ದುದರಿಂದ ಹಾಗೂ ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲಾಗಿರಲಿಲ್ಲ. ಉಡವನ್ನು ನುಂಗಲು ಕಾಳಿಂಗ ಸರ್ಪ ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. ಅರ್ಧ ನುಂಗಿದ ಉಡವನ್ನು ಮತ್ತೆ ವಾಪಸ್ ಹೊರಹಾಕಿ ನಿರಾಸೆಯಿಂದ ತೆರಳಿದೆ.

ಕಾರವಾರದಲ್ಲಿ ಬೃಹತ್ ಕಾಳಿಂಗ ಸರ್ಪದ ರಕ್ಷಣೆ
ಕಾರವಾರ ತಾಲೂಕಿನ ಶಿರವಾಡದ ನಾರಗೇರಿಯಲ್ಲಿ ಆಹಾರ ಅರಸಿ ಬೃಹತ್ತ ಕಾಳಿಂಗ ಸರ್ಪವೊಂದು ಕಾಡಿನಿಂದ ನಾಡಿಗೆ ಬಂದಿತ್ತು. ಜನವಸತಿ ಪ್ರದೇಶಕ್ಕೆ ನುಗ್ಗಿದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಪುನಃ ಕಾಡಿಗೆ ಬಿಡಲಾಗಿದೆ. ನಾಡಗೇರಿ ಸಮೀಪದಲ್ಲೇ ಇರುವ ದಟ್ಟ ಅರಣ್ಯ ಪ್ರದೇಶದಿಂದ ಸುಮಾರು 10 ಅಡಿ ಉದ್ದದ ಹೆಬ್ಬಾವು ಆಹಾರವನ್ನು ಹುಡುಕುತ್ತಾ ನಾರಗೇರಿಯ ಜನವಸತಿ ಪ್ರದೇಶಕ್ಕೆ ಬಂದಿತ್ತು. ಈ ವೇಳೆ ಬಂಜರು ಗದ್ದೆಯಲ್ಲಿ ಕಾಳಿಂಗ ಸರ್ಪ ಇರುವುದನ್ನು ಕಂಡ ಗ್ರಾಮಸ್ಥರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಉರಗ ಪ್ರೇಮಿ ನಿತಿನ್ ಪೂಜಾರಿ ಅವರಿಗೆ ವಿಷಯ ಮುಟ್ಟಿಸಲಾಯಿತು. ನಿತಿನ್ ಪೂಜಾರಿ ಸ್ಥಳಕ್ಕೆ ಗಮಿಸಿ, ಸ್ಥಳೀಯರ ನೆರವಿನಿಂದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ಬಳಿಕ ಅರಣ್ಯಾಧಿಕಾರಿಗಳು ಕಾಳಿಂಗ ಸರ್ಪವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ರಕ್ಷಣೆ ಮಾಡಿದ್ದಾರೆ.
ಈ ಹಿಂದೆಯೂ ಸರ್ಪಗಳ ಹಾವಳಿ
ಈ ಹಿಂದೆಯೂ ಇದೇ ರೀತಿಯಾಗಿ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದಲ್ಲಿ ಬೃಹತ್ ಗಾತ್ರದ ಎರಡು ಕಾಳಿಂಗ ಸರ್ಪಗಳನ್ನು ರಕ್ಷಣೆ ಮಾಡಿದ್ದರು. ಈ ಮೂಲಕ ಒಟ್ಟು 200 ಕಾಳಿಂಗ ಸರ್ಪಗಳನ್ನು ರಕ್ಷಣೆ ಮಾಡುವಲ್ಲಿ ಸ್ನೇಕ್ ಅಶೋಕ್ ಲಾಯಿಲ ಎಂಬವರು ಯಶಸ್ವಿ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಉಷಾ ಎನ್ನುವವರ ಮನೆಗೆ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ನುಗ್ಗಿತ್ತು. ಅಲ್ಲಿನ ನಿವಾಸಿಗಳು ತಕ್ಷಣ ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಳದಂಗಡಿ ಅರಣ್ಯಾಧಿಕಾರಿ ಸುರೇಶ್ ಗೌಡ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದಿದ್ದಾರೆ. ನಂತರ ಬೆಳ್ತಂಗಡಿ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದರು.

ಸುರಕ್ಷಿತವಾಗಿ ಹಾವನ್ನು ಹಿಡಿದು, ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬಿಡಲು ಹೋಗಿದ್ದರು. ಆಗ ಲಾಯಿಲ ಗ್ರಾಮದ ಕಾಶಿಬೆಟ್ಟು ಪ್ರಗತಿನಗರದ ವೆಂಕಪ್ಪ ಎಂಬವರ ಮನೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಸರ್ಪವೊಂದು ಹೆಬ್ಬಾವನ್ನು ನುಂಗಿತ್ತು. ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಿತ್ತು. ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿದಾಗ ವಾಪಸ್ ಕಾಶಿಬೆಟ್ಟುಗೆ ಬಂದಿದ್ದಾರೆ. ಈ ವೇಳೆ ಕಾಳಿಂಗ ಸರ್ಪ ಗುಹೆಗೆ ನುಗ್ಗುತ್ತಿತ್ತು. ತಕ್ಷಣ ಹೊರತೆಗೆದು ಹಿಡಿದು ಎರಡು ಕಾಳಿಂಗ ಸರ್ಪಗಳನ್ನು ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬಿಟ್ಟಿದ್ದರು. ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡುವುದನ್ನು ಕೇಳಿದ್ದೇವೆ. ಆದರೆ ಇದೀಗ ಸರ್ಪಗಳು ಕೂಡ ನಾಡಿಗೆ ಲಗ್ಗೆ ಇಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿವೆ.












Click it and Unblock the Notifications