ಕಾರವಾರದಲ್ಲಿ ಮನೆಯ ಹಿರಿಯ ಜೀವವನ್ನೇ ಕತ್ತಲೆ ಕೋಣೆಯಲ್ಲಿಟ್ಟ ಮನೆ ಮಂದಿ!
ಕಾರವಾರ, ನವೆಂಬರ್ 20: ಆಧುನಿಕ ಜಗತ್ತಿನಲ್ಲಿ ಮಾನವೀಯತೆಯೇ ಮರೆಯಾಗುತ್ತಿದೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಒಂದು ಕಾಲದಲ್ಲಿ ಮನೆಯ ನೊಗ ಹೊತ್ತು ಸಾಗಿದ ಹಿರಿಯ ಜೀವ ಇಂದು ಕತ್ತಲೆ ಕೋಣೆಯಲ್ಲಿ ನರಳುತಿದೆ.
ಮನೆಯ ಹಿರಿಯ ಜೀವವನ್ನು ಮೂಲೆಗೆ ತಳ್ಳಿರುವ ಮನೆಯ ಮಂದಿ ಮನುಷ್ಯತ್ವವನ್ನೇ ಮರೆತಂತೆ ವರ್ತಿಸಿದ್ದಾರೆ. ಕತ್ತಲೆ ಕೋಣೆಯಲ್ಲಿ ನರಳುತ್ತಿದ್ದ ವೃದ್ಧೆಗೆ ನಾಯಾಧೀಶೆ ರೇಣುಕಾ ರಾಯ್ಕರ್ ನೆರವಿನ ಹಸ್ತ ಚಾಚಿದ್ದಾರೆ.
ಕಾರವಾರದ ಕೋಡಿಬಾಗದಲ್ಲಿ ಇರುವ ಜೋಪಡಿಯೊಂದರಲ್ಲಿ ಒಂದು ವರ್ಷದಿಂದ ಅನ್ನ ನೀರು ಸಿಗದೆ, ಆರೈಕೆಯೂ ಇಲ್ಲದೇ ಕತ್ತಲ ಕೋಣೆಯಲ್ಲಿ ಕಮಲಾ ಎಂಬ ವೃದ್ಧೆ ನರಳಾಡುತ್ತಿದ್ದರು. ವೃದ್ಧೆಯ ಸಂಕಷ್ಟದ ಸ್ಥಿತಿಗೆ ಮರುಗಿದ ನ್ಯಾಯಾಧೀಶರೊಬ್ಬರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಮಾಹಿತಿ ನೀಡಲು ಸ್ಥಳೀಯರ ಹಿಂದೇಟು
ಕಳೆದೊಂದು ವರ್ಷದಿಂದ ಕಾರವಾರ ನಗರದ ಕೋಡಿಬಾಗದ ಜೋಪಡಿಯೊಂದರಲ್ಲಿ ವೃದ್ಧೆ ಕಮಲಾ ವಾಸವಾಗಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾದವರಂತೆ ಕಾಣುವ ಅಜ್ಜಿಗೆ ಮನೆಯವರ ಆರೈಕೆ ಇಲ್ಲ. ಕತ್ತಲೆ ಕೋಣೆಯಲ್ಲಿ ವೃದ್ಧೆಯನ್ನು ಕೂಡಿಹಾಕಿ ಮನೆಯವರು ಅಮಾನೀಯವಾಗಿ ನಡೆದುಕೊಂಡಿದ್ದಾರೆ.ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನಾಯಾಧೀಶೆ ರೇಣುಕಾ ರಾಯ್ಕರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತೆರಳಿದ್ದರು. ವೃದ್ಧೆಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ ನಾಯಾಧೀಶೆ ರೇಣುಕಾ, ತಕ್ಷಣ 108 ಅಂಬ್ಯುಲೆನ್ಸ್ ಮೂಲಕ ವೃದ್ಧೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ನ್ಯಾ. ರೇಣುಕಾ ರಾಯ್ಕರ್, ವೃದ್ಧೆಯನ್ನು ಕತ್ತಲೆ ಕೋಣೆಯಲ್ಲಿ ಕೂಡಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆ ಸ್ಥಳಕ್ಕೆ ತೆರಳಿದಾಗ ಬಾಗಿಲು ಇಲ್ಲದ ಗುಡಿಸಲಿನಲ್ಲಿ ವೃದ್ಧೆಯನ್ನು ಕೂಡಿ ಹಾಕಿದ್ದರು. ವೃದ್ಧೆಗೆ ಓರ್ವ ಮಗನಿದ್ದಾನೆ ಎನ್ನುವ ಮಾಹಿತಿ ಇದೆ. ಆದರೆ ನಾವು ಭೇಟಿ ನೀಡಿದ ವೇಳೆ ಅಲ್ಲಿ ಆತ ಇರಲಿಲ್ಲ. ಸ್ಥಳೀಯರು ಕೂಡ ವೃದ್ಧೆಯ ಬಗ್ಗೆ ಯಾವುದೇ ಮಾಹಿತಿ ನೀಡಲು ತಯಾರಿರಲಿಲ್ಲ ಎಂದರು.

ರೇಣುಕಾ ರಾಯ್ಕರ್ರಿಂದ ವೃದ್ಧೆಗೆ ಚಿಕಿತ್ಸೆ
ಇದೇ ವೇಳೆ ವೃದ್ಧೆಯ ಸಂಬಂಧಿಕರನ್ನು ಆಸ್ಪತ್ರೆಗೆ ಕರೆಸಲಾಗಿತ್ತು. ಮನುಷ್ಯರಾದವರು ಮನುಷ್ಯರಿಗೆ ಎರಡು ತುತ್ತು ಊಟ ಹಾಕಿದರೆ ಇಂತಹ ಪರಿಸ್ಥಿತಿ ಬರುವುದಿಲ್ಲ. ಮನುಷ್ಯತ್ವ ಇಲ್ಲದಂತೆ ನಡೆದುಕೊಂಡಿದ್ದೀರಾ ನೀವು. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರೆ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಬೇಕಿತ್ತು. ನಿಮಗೆ ಸಾಧ್ಯವಾಗದೆ ಇದ್ದರೆ ಜಿಲ್ಲಾ ಆಸ್ಪತ್ರೆಗಾದರೂ ಸೇರಿಸಬೇಕಿತ್ತು. ಆದರೆ ಈ ರೀತಿ ಕೊಚ್ಚೆಯಲ್ಲಿ ಬಿಟ್ಟಿರುವುದು ಎಷ್ಟು ಸರಿ? ಮನುಷ್ಯರಾದವರು ಯಾರು ಇಂತಹ ಕೆಲಸ ಮಾಡುವುದಿಲ್ಲ. ನಿಮ್ಮ ಒಡ ಹುಟ್ಟಿದವರನ್ನೇ ಈ ರೀತಿ ನಡೆಸಿಕೊಂಡು ಮಾನವೀಯತೆಯನ್ನು ಮರೆತಿದ್ದೀರಿ ಎಂದು ತೀವ್ರವಾಗಿ ತರಾಟೆ ತೆಗೆದುಕೊಂಡರು.

ವೃದ್ಧೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ
ವೃದ್ಧೆ ಕಮಲಾ ಸಹೋದರನನ್ನು ಸಂಪರ್ಕಿಸಿದಾಗ ನಮ್ಮೊಂದಿಗೆ ವಾಗ್ವಾದ ನಡೆಸಿದರು. ಅವರು ವೃದ್ಧೆಯನ್ನು ನಾಯಿಗಿಂತಲೂ ಕಡೆಯಾಗಿ ನೋಡಿಕೊಂಡಿದ್ದಾರೆ. ಇಂತಹ ಸ್ಥಿತಿಗೆ ಯಾರು ತಳ್ಳಬಾರದು. ಸದ್ಯ ವೃದ್ಧೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ದಾಖಲಿಸುವ ವೇಳೆ ಆಕೆ ಮಾನಸಿಕವಾಗಿ ಖಿನ್ನತೆಗೊಳಗಾದವರಂತೆ ಯಾವುದೇ ವರ್ತನೆಯನ್ನು ತೋರಿಲ್ಲ. ನಗರಸಭೆ ಮೂಲಕ ವೃದ್ಧೆಯ ಮನೆ ದುರಸ್ತಿ ಮಾಡಿಸಿ ಆಕೆಗೆ ವಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ ವೃದ್ಧೆಗೆ ಅವಶ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಷ್ಟಗಳನ್ನು ತಿಳಿಯದ ಪಾಪಿ ಮಕ್ಕಳು
ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಮಕ್ಕಳು ಬೆಳೆದು ದೊಡ್ಡವರಾದರೆಂದರೆ ಅವರಿಗೆ ಪೋಷಕರ ಕಡೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವರು ತಮಗಾಗಿ ಪಟ್ಟ ಕಷ್ಟಗಳನ್ನೆಲ್ಲ ಮರೆತು, ಕೊನೆಗೆ ಮನೆಯಿಂದ ಆಚೆ ಹಾಕುವುದು ಹೆಚ್ಚಾಗಿ ಬಿಟ್ಟಿದೆ. ಆದರೆ ತಮಗೆ ಎಷ್ಟೇ ಕಷ್ಟ ಬಂದರೂ ಸಹ ಮಕ್ಕಳು ಮಾತ್ರ ಸುಖವಾಗಿ ಬಾಳಬೇಕು ಎಂಬುದು ಪೋಷಕರ ಆಶಯವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಅಮ್ಮಂದಿರ ದಿನಾಚರಣೆ, ಅಪ್ಪಂದಿರ ದಿನಾಚರಣೆಗಳು ಕೇವಲ ವಾಟ್ಸಪ್ ಸ್ಟೇಟಸ್ಗಳಿಗೆ ಮಾತ್ರ ಸೀಮಿತವಾಗಿದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರ ಸಂಖ್ಯೆ ಕಡಿಮೆ ಆಗಿ ಬಿಟ್ಟಿದೆ. ಹಾಗೆಯೇ ನಮ್ಮ ತಂದೆ- ತಾಯಿಯೇ ಸರ್ವಸ್ವ ಅಂತಾ ಹೇಳಿಕೊಂಡು ಅವರನ್ನು ಕೊನೆಗೆ ದೂರ ತಳ್ಳುವವರೇ ಹೆಚ್ಚಾಗಿ ಬಿಟ್ಟಿದ್ದಾರೆ. ಪೋಷಕರು ಮಾತ್ರ ತಮ್ಮ ಕಷ್ಟಗಳನ್ನು ಯಾವತ್ತೂ ಮಕ್ಕಳ ಬಳಿ ಹಂಚಿಕೊಳ್ಳುವುದಿಲ್ಲ. ನಮ್ಮ ಕಷ್ಟ ಮಕ್ಕಳಿಗೆ ಬೇಡ ಅಂದುಕೊಂಡು ಮನಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತಿರುತ್ತಾರೆ.












Click it and Unblock the Notifications