ಕಾರವಾರ ಬಂದರು ವಿವಾದ: ಸತೀಶ್ ಸೈಲ್ ವಿರುದ್ಧ ಆಕ್ರೋಶ
ಕಾರವಾರ, ಜನವರಿ 15: ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಯಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ರಾಜಕೀಯ ಮಾಡಲು ಹೊರಟಿದ್ದಾರೆ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಸೋಮವಾರದಿಂದ ಪ್ರಾರಂಭವಾಗಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಯೋಜನೆ ಮುಂದುವರೆಸುವುದು ಬೇಡ ಎಂದು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಇಳಿದಿದ್ದಾರೆ.
ಮುಂದುವರಿದ ಮೀನುಗಾರರ ಪ್ರತಿಭಟನೆ: ಕಾರವಾರದಲ್ಲಿ ಅಘೋಷಿತ ಬಂದ್
ಕಡಲತೀರ ಉಳಿಸಿ ಎಂದು ಮೀನುಗಾರರು ನಡೆಸಿದ ಹೋರಾಟದಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಪಾಲ್ಗೊಂಡಿದ್ದರು. ಅಲ್ಲದೇ ಸೋಮವಾರ ಕಾಮಗಾರಿ ತಡೆಯಲು ಮುಂದಾದ ಮೀನುಗಾರರನ್ನು ವಶಕ್ಕೆ ಪಡೆದ ನಂತರ ಸತೀಶ್ ಸೈಲ್, ಬಂಧನದಲ್ಲಿದ್ದವರನ್ನು ಭೇಟಿಯಾಗಿ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಸಾಗರಮಾಲಾ ಯೋಜನೆಗೆ ಚಾಲನೆ ಸಿಕ್ಕಿದ್ದು ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಾಮಗಾರಿಗೆ ಚಾಲನೆ ಕೊಟ್ಟಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಗಿನ ಶಾಸಕರಾಗಿದ್ದ ಸತೀಶ್ ಸೈಲ್ ಅವರೇ ವಹಿಸಿದ್ದರು.
2017 ರ ಡಿಸೆಂಬರ್ನಲ್ಲಿ ಸತೀಶ್ ಸೈಲ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಾಗರಮಾಲಾ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಬ್ಯಾರಿಕೇಡ್ ಮುರಿದು ಕಾಮಗಾರಿಗೆ ತಡೆವೊಡ್ಡಲು ಯತ್ನ; ನೂರಾರು ಮೀನುಗಾರರು ಪೊಲೀಸರ ವಶಕ್ಕೆ
ಕಾಮಗಾರಿ ಶಿಲಾನ್ಯಾಸ ಮಾಡುವ ವೇಳೆ ಸತೀಶ್ ಸೈಲ್ ವಿರೋಧ ವ್ಯಕ್ತ ಮಾಡದೇ, ಈಗ ಬಿಜೆಪಿ ಶಾಸಕರು ಬಂದ ನಂತರ ರಾಜಕೀಯ ಮಾಡವುದಕ್ಕೆಂದೇ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಮಾಡಲು ಶುರು ಮಾಡಿದ್ದಾರೆ.
ಮಂಗಳವಾರ ಮೀನುಗಾರರ ಪ್ರತಿಭಟನೆ ಮಂದುವರೆದು ಶಾಸಕಿ ರೂಪಾಲಿ ನಾಯ್ಕ್ ಹಾಗೂ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕುತ್ತಿದ್ದಂತೆ ಬಿಜೆಪಿಯ ಸಾಮಾಜಿಕ ಜಾಲತಾಣಗಳ ಗ್ರೂಪ್ಗಳಲ್ಲಿ ಹರಿಬಿಟ್ಟಿದ್ದಾರೆ.
ಅಲ್ಲದೇ ಮೊದಲ ಕಾಮಗಾರಿ ಪ್ರಾರಂಭದ ವೇಳೆಯೇ ವಿರೋಧ ಮಾಡಿದ್ದರೆ ಕಾಮಗಾರಿ ನಿಲ್ಲಿಸಬಹುದಿತ್ತು. ಕಾಮಗಾರಿಯ ಶಿಲಾನ್ಯಾಸವನ್ನು ಮಾಡಿ ಈಗ ವಿರೋಧ ವ್ಯಕ್ತಪಡಿಸಿ, ಮೀನುಗಾರರ ದಿಕ್ಕುತಪ್ಪಿಸುವ ಕಾರ್ಯಕ್ಕೆ ಸೈಲ್ ಮುಂದಾಗಿದ್ದಾರೆಂದು ಬಿಜೆಪಿ ವಾಟ್ಸಪ್ ಗ್ರೂಪ್ಗಳಲ್ಲಿ ಹಂಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ತಟಸ್ಥವಾಗಿ ಉಳಿದ ಆನಂದ
ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಸಂಬಂಧ ಮೀನುಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ, ಇತ್ತ ಮಾಜಿ ಸಚಿವ ಆನಂದ ಅಸ್ನೋಟಿಕರ್ ಮಾತ್ರ ಯೋಜನೆಯ ಕುರಿತು ತಟಸ್ಥವಾಗಿ ಉಳಿಸಿದ್ದಾರೆ. ಮೀನುಗಾರರು ಎರಡು ದಿನಗಳಿಂದ ಹೋರಾಟವನ್ನು ನಡೆಸುತ್ತಿದ್ದು, ಜನವರಿ 16 ಕ್ಕೆ ಕಾರವಾರ ಬಂದ್ ಕರೆಯನ್ನೂ ನೀಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಆನಂದ್, ಘಟನೆ ಸಂಬಂಧ ಯಾವುದೇ ಹೇಳಿಕೆ ನೀಡದೆ ತಟಸ್ಥವಾಗಿ ಉಳಿದಿದ್ದಾರೆ.