Karnataka Budget 2023 Expectations: ಉತ್ತರ ಕನ್ನಡ ಜಿಲ್ಲೆಯ ನಿರೀಕ್ಷೆಗಳೇನು?
ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆ ಆಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕ ಬಜೆಟ್ 2023ರ ಮೇಲಿನ ಉತ್ತರ ಕನ್ನಡ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿವೇಶನದಲ್ಲಿ ಅಧಿಕಾರವಧಿಯ ಕೊನೆಯ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಜೆಟನಲ್ಲಿ ಉತ್ತರ ಕನ್ನಡ ಜಿಲ್ಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದು, ಈಗಾಗಲೇ ಹಲವು ಬೇಡಿಕೆಗಳನ್ನು ಸಲ್ಲಿಕೆ ಕೂಡ ಮಾಡಲಾಗಿದೆ.
ಚುನಾವಣೆ ಹೊಸ್ತಿಲಲ್ಲಿರುವ ಸರ್ಕಾರ ಈ ಬೇಡಿಕೆಗಳೊಂದಿಗೆ ಹೊಸ ಯೋಜನೆಗಳನ್ನು ಘೋಷಿಸಬಹುದೇ ಎನ್ನುವ ಕುತೂಹಲ ಇದೀಗ ಜನಸಾಮಾನ್ಯರಲ್ಲಿ ಹೆಚ್ಚಾಗಿದೆ. ಉತ್ತರ ಕನ್ನಡ ಜಿಲ್ಲೆ ಯಾವುದೇ ಸರ್ಕಾರ ಬಂದರೂ ನಿರ್ಲಕ್ಷ್ಯಕ್ಕೆ ಒಳಗಾಗುವ ಜಿಲ್ಲೆ ಎಂಬ ಮಾತಿದೆ.
ಸಾಕಷ್ಟು ವಿಸ್ತಾರವಾಗಿ ಅರಣ್ಯ ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಜಿಲ್ಲೆಯಲ್ಲಿ ಇಂದಿಗೂ ಕೆಲ ಮೂಲಭೂತ ಸೌಕರ್ಯಗಳು ಮರಿಚಿಕೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಕೊರತೆ, ನಿರುದ್ಯೋಗ, ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಮೀನುಗಾರರಿಗೆ, ಜಿಲ್ಲೆಯ ಕುಗ್ರಾಮ ವಾಸಿಗಳಿಗೆ ಮೂಲಭೂತ ಸೌಕರ್ಯಗಳು ಇಂದಿಗೂ ಮರೀಚಿಕೆಯಾಗಿದ್ದು, ಈ ಬಾರಿ ಬಜೆಟ್ನಲ್ಲಿ ಜಿಲ್ಲೆಗೆ ಕೆಲ ಅಗತ್ಯ ಬೇಡಿಕೆಗಳು ಹಾಗೂ ಹೊಸ ಯೋಜನೆಗಳನ್ನು ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.

ಪ್ರತ್ಯೇಕ ಶಿರಸಿ ಜಿಲ್ಲೆ ನಿರೀಕ್ಷೆ
ರಾಜ್ಯದಲ್ಲಿಯೇ ವಿಸ್ತಾರವಾದ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡವನ್ನು ಇಬ್ಬಾಗಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಬೇಕೆಂಬ ಕೂಗು ಕಳೆದ ಹಲವು ದಶಕಗಳಿಂದ ಘಟ್ಟದ ಮೇಲ್ಬಾಗದ ಜನರಿಂದ ಕೇಳಿಬರುತ್ತಲೇ ಇದೆ. ಅಲ್ಲದೆ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ, ಪಾದಯಾತ್ರೆ, ಮನವಿಗಳನ್ನು ಸಲ್ಲಿಸಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯಿಸಲಾಗಿದೆ.
ಅಲ್ಲದೆ ಇತ್ತೀಚೆಗೆ ಸ್ಪೀಕರ್ ಕಾಗೇರಿ ಕೂಡ ಜಿಲ್ಲೆಯ ಜನರ ಪ್ರತ್ಯೇಕ ಜಿಲ್ಲೆ ಕೂಗಿಗೆ ಬಗ್ಗೆ ಪ್ರತಿಕ್ರಿಸಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಚುನಾವಣೆ ಹೊಸ್ತಿಲಿನಲ್ಲಿರುವ ಸರ್ಕಾರ ಇದನ್ನು ಘೋಷಣೆ ಮಾಡುವ ದೊಡ್ಡ ನಿರೀಕ್ಷೆ ಹೊಂದಿದೆ.
ಕರಾವಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯ
ಇನ್ನು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಮಾಡಬೇಕಾದರೆ ಧಾರವಾಡ, ಮಂಗಳೂರು ಇಲ್ಲವೇ ಶಿವಮೊಗ್ಗ ಕಡೆ ತೆರಳಬೇಕಾಗಿದೆ. ಜಿಲ್ಲೆಯಲ್ಲಿ ಅರಣ್ಯ ವಿಶ್ವವಿದ್ಯಾಲಯ ಹೊರತುಪಡಿಸಿ ಬೆರೆ ಯಾವುದು ಇಲ್ಲ. ಈ ಕಾರಣದಿಂದ ಜಿಲ್ಲೆಗೆ ವಿಶ್ವವಿದ್ಯಾಲಯ ಘೋಷಣೆ ಮಾಡಬೇಕು.

ಅದರಲ್ಲಿಯೂ ಇತ್ತೀಚೆಗೆ ಶಿರಸಿಗೆ ಆಗಮಿಸಿದಾಗ ಸಿಎಂ ನೀಡಿದ ಪರಿಸರ ಅಧ್ಯಯನ ವಿವಿಯನ್ನು ಜಿಲ್ಲೆಯ ಕರಾವಳಿ ಭಾಗಕ್ಕೆ ನೀಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಕೆಲ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮೀನುಗಾರಿಕೆಗೆ ಹೆಚ್ಚಿನ ಬೆಂಬಲ
ಮೀನುಗಾರರಿಗೆ ಸೀಮೆಎಣ್ಣೆ ಸರಿಯಾಗಿ ಸಿಗುತ್ತಿಲ್ಲ. ಡಿಸೇಲ್ ದರ ಕೂಡ ತುಟ್ಟಿಯಾಗಿರುವುದು ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕೆಲ ಬಾರಿ ಮೀನುಗಾರಿಕೆಗಿಂತ ಖರ್ಚೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಡಿಸೇಲ್ ಸಬ್ಸಿಡಿ ನೀಡಬೇಕು. ಜೊತೆಗೆ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಹಣ ಮೀಸಲಿಡಬೇಕು. ಮೀನುಗಾರರ ಸಾಲ ಮನ್ನಕ್ಕೆ ಹಣ ಮೀಸಲಿಡಬೇಕು. ಸೀಮೆ ಎಣ್ಣೆ ಪೂರೈಕೆಗೆ ಹಣ ಮೀಸಲು ಇಡಬೇಕು ಎಂಬ ಒತ್ತಾಯ ಮೀನುಗಾರರಿಂದ ಕೇಳಿಬರುತ್ತಲೇ ಇದೆ.
ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ
ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುಮುಖ್ಯ ಸಮಸ್ಯೆಗಳಲ್ಲಿ ಒಂದಾಗಿರುವ ಸೂಪರ್ ಸ್ಪೆಷ್ಟಾಲಿಟಿ ಆಸ್ಪತ್ರೆ ಆದಷ್ಟು ಬೇಗ ನಿರ್ಮಾಣ ಮಾಡಬೇಕು ಎನ್ನುವ ಕೂಗು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಸುಸಜ್ಜಿತ ಆಸ್ಪತ್ರೆಗಾಗಿ ಈಗಾಗಲೇ ಹಲವು ಸುತ್ತಿನ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈಬಗ್ಗೆ ಭರವಸೆ ನೀಡಿದ್ದರು. ಇದರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್ನಲ್ಲಿ ಘೋಣೆಯಾಗುವ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.

ಪ್ರವಾಸೋದ್ಯಮ ಅಭಿವೃದ್ದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯ ಬೆಳವಣಿಗೆಗೆ ವಿಪುಲ ಅವಕಾಶಗಳಿದ್ದರೂ ಅನುದಾನದ ಕೊರತೆ ಇದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇಲ್ಲದೇ ಸುಂದರ ಪ್ರವಾಸಿ ತಾಣಗಳು ಹಾಗೆ ಉಳಿದುಕೊಂಡಿವೆ. ಈ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕೆಂಬುದು ಜಿಲ್ಲೆಯ ಜನಪ್ರತಿನಿಧಿಗಳ ಒತ್ತಾಯ ಇರುವ ಕಾರಣ ಸರ್ಕಾರ ತನ್ನ ಬಜೆಟ್ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಇದಲ್ಲದೆ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರ, ಕುಡಿಯುವ ನೀರು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಘೋಷಣೆಯಾಗುವ ನಿರೀಕ್ಷೆ ಇದ್ದು, ಚುನಾವಣೆ ಹೊಸ್ತಿಲಲ್ಲಿ ಸರ್ಕಾರ ಯಾವೆಲ್ಲ ಯೋಜನೆಗಳು ಘೋಷಣೆ ಮಾಡಲಿದೆ ಎನ್ನುವುದೇ ಇದೀಗ ಜಿಲ್ಲೆಯ ಜನರ ಕುತೂಹಲ ಹೆಚ್ಚಿಸುವಂತೆ ಮಾಡಿದೆ.












Click it and Unblock the Notifications