ಬಜೆಟ್ 2021; ಉತ್ತರ ಕನ್ನಡ ಜಿಲ್ಲೆಯ ನಿರೀಕ್ಷೆಗಳು
ಉತ್ತರ ಕನ್ನಡ, ಮಾರ್ಚ್ 06: ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ 2021ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಬಜೆಟ್ ಬಗ್ಗೆ ಅಪಾರವಾದ ನಿರೀಕ್ಷೆಗಳಿವೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಮತ್ತು ಹಳಿಯಾಳ ಕ್ಷೇತ್ರದ ಶಾಸಕ ಆರ್. ವಿ. ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಗೆ ಯಾವ-ಯಾವ ಯೋಜನೆಗಳು ಬೇಕು?, ಬಜೆಟ್ನಲ್ಲಿ ಆದ್ಯತೆ ಯಾವುದಕ್ಕೆ ಸಿಗಬೇಕು ಎಂಬುದನ್ನು ವಿವರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವಿವಿಧ ತಾಲೂಕುಗಳಲ್ಲಿ ಹಲವಾರು ವರ್ಷಗಳ ಹಿಂದೆ ಪ್ರಾರಂಭಿಸಲಾದ ಶಾಲೆಗಳು ಶಿಥಿಲಾವಸ್ಥೆ ಕಟ್ಟಡಗಳಲ್ಲಿಯೇ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ರಾಜ್ಯದಲ್ಲಿ 50, 75, 100 ವರ್ಷ ಪೂರೈಸಿದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ವಿಶೇಷ ಅನುದಾನ ಬೇಕು ಎಂದು ಹೇಳಿದ್ದಾರೆ.
ಕನ್ನಡದ ಪ್ರಪ್ರಥಮ ರಾಜಧಾನಿ ಹಾಗೂ ಆದಿಕವಿ ಪಂಪನ ನಾಡಾದ ಬನವಾಸಿಯ ಅಭಿವೃದ್ಧಿಗೆಂದು ರಚನೆ ಆಗಿರುವ ಬನವಾಸಿ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನ ದೃಷ್ಟಿಯಿಂದ ಇತಿಹಾಸ ಮತ್ತು ಅಧ್ಯಯನಕಾರರರಿಗೆ ಅನುಕೂಲವಾಗುವಂತೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನ ಪೀಠ ಆರಂಭಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಂದರು, ಜಲಸಾರಿಗೆ, ಕೈಗಾರಿಕಾ ಇಲಾಖೆ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪವಿರುವ ಮಾದನಗೇರಿ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಭೂಮಿ ಲಭ್ಯವಿದ್ದು, ಈ ಭೂಮಿಯನ್ನು ಪರಿಸರ, ಪ್ರವಾಸೋದ್ಯಮ ಯೋಜನೆಗಾಗಿ ಅಥವ ರಫ್ತು ಆಧಾರಿತ ಕೈಗಾರಿಕೆಗಳಿಗೆ, ಕೈಗಾರಿಕಾ ಪಾರ್ಕ್ಗಳನ್ನು ಸ್ಥಾಪಿಸಲು ಬಳಸಿಕೊಳ್ಳಬಹುದು.
ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಯತ್ನಗಳ ಹೊರತಾಗಿಯೂ ಹೊಸ ಬಂದರುಗಳ ನಿರ್ಮಾಣ ಹಾಗೂ ಅಭಿವೃದ್ಧಿ ಸ್ಥಗಿತವಾಗಿರುವುದರಿಂದ ಹೂಡಿಕೆದಾರರಿಗೆ ಹಿನ್ನಡೆಯಾಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಬಂದರುಗಳ ನಿರ್ಮಾಣ ಮಾಡಲು ಆದ್ಯತೆ ನೀಡಬೇಕಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಜಿಲ್ಲೆಯಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆ ತುರ್ತು ಚಿಕಿತ್ಸೆ ನೀಡಲು ಹತ್ತಿರದಲ್ಲಿ ಯಾವುದೇ ವೈದ್ಯಕೀಯ ಸೇವೆ ಲಭ್ಯವಿಲ್ಲ ಹುಬ್ಬಳ್ಳಿ, ಬೆಳಗಾವಿ, ಗೋವಾ ಮತ್ತು ಉಡುಪಿಯ ಮಣಿಪಾಲ ಆಸ್ಪತ್ರೆಗಳಿಗೆ ಹೋಗಬೇಕಿದೆ. ಜಿಲ್ಲೆಯ ಕುಮಟಾ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿರುವ ಆಸ್ಪತ್ರೆಗಳಲ್ಲಿ ಟ್ರೋಮಾ ಸೆಂಟರ್ಗಳನ್ನು ಸ್ಥಾಪಿಸುವುದು ಅತೀ ಅಗತ್ಯವಾಗಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಎಲ್ಲರ ಬಹುದಿನದ ಬೇಡಿಕೆಯಾಗಿದೆ.
ದಾಂಡೇಲಿಯಲ್ಲಿ ಈಗಾಗಲೇ 100 ಹಾಸಿಗೆಗಳ ಆಸ್ಪತ್ರೆ ಮತ್ತು ಇಎಸ್ಐ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತಿದೆ. ಆದರೆ ದಾಂಡೇಲಿಯಲ್ಲಿ ತುರ್ತು ಹೃದಯ ರೋಗ ಚಿಕಿತ್ಸೆಗೆ ಬೇಕಾದ ಆಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯ ಸಹಯೋಗದೊಂದಿಗೆ ದಾಂಡೇಲಿಯಲ್ಲಿ ಆಧುನಿಕ 'ಕಾರ್ಡಿಯಕ್ ಕೇರ್ ಸೆಂಟರ್' ಸ್ಥಾಪಿಸುವುದು ಅತಿ ಅವಶ್ಯವಾಗಿದೆ.

ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆ
ಉತ್ತರ ಕನ್ನಡ ಜಿಲ್ಲೆಯು ಮಲೆನಾಡು ಪ್ರದೇಶವಾಗಿರುವುದರಿಂದ ಹೆಚ್ಚು ಮಳೆ ಬೀಳುತ್ತದೆ. ಮಳೆಗಾಲದ ಸಂದರ್ಭದಲ್ಲಿ ಹಳ್ಳ-ಕೊಳ್ಳ ನೀರಿನಿಂದ ತುಂಬಿ ಹೋಗಿ ಕಾಲುದಾರಿಗಳ ಸಂಪರ್ಕ ಕಡಿದು ಹೋಗುತ್ತದೆ. ಜಿಲ್ಲೆಯ ನೂರಾರು ಹಳ್ಳಿಗಳು ಪ್ರತಿ ವರ್ಷವು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರಿಂದ ವಿಶೇಷವಾಗಿ ಹಿರಿಯ ನಾಗರಿಕರಿಗೆ, ವಿದ್ಯಾಭಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ರೋಗಿಗಳು ತೊಂದರೆ ಪಡುತ್ತಿದ್ದಾರೆ. ಕಾಲುಸಂಕಗಳ ನಿರ್ಮಾಣ ಮಾಡಲು ಪಂಚಾಯತರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಆಯ್ಯವ್ಯಯದಲ್ಲಿ ವಿಶೇಷ ಅನುದಾನ ಮೀಸಲಿಡಬೇಕು.
ದಾಂಡೇಲಿ ಸೇರಿದಂತೆ ರಾಜ್ಯದಲ್ಲಿರುವ ಹೊಸ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯ ಪ್ರಾರಂಭಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವ ಸಲುವಾಗಿ ಪ್ರಸುತ್ತ ಸಾಲಿನ ಆಯ್ಯವ್ಯಯದಲ್ಲಿ ಅನುದಾನ ಮೀಸಲಿಡಲು ಅತೀ ಅವಶ್ಯಕವಾಗಿದೆ.
ದಾಂಡೇಲಿ ಪಕ್ಕದಲ್ಲಿಯೇ ಹರಿಯುವ ಕಾಳಿ ನದಿಯಿಂದ ಹಳಿಯಾಳ ಪಟ್ಟಣ ಮತ್ತು ಹಳಿಯಾಳ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ದಾಂಡೇಲಿ ನಗರಕ್ಕೆ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನಿರಂತರ ಕುಡಿಯುವ ನೀರಿನ ಪೂರೈಕೆ ಬಹುದಿನದ ಬೇಡಿಕೆಯಾಗಿದ್ದು, ಈ ಯೋಜನೆಗೆ ಪ್ರಸುತ್ತ ಸಾಲಿನ ಬಜೆಟ್ನಲ್ಲಿ ಅನುದಾನ ಅಗತ್ಯವಾಗಿದೆ.

ಅರಣ್ಯ, ಪಶುಸಂಗೋಪನಾ ಇಲಾಖೆ
ಜಿಲ್ಲೆಯ ಹಳಿಯಾಳ, ಮುಂಡಗೋಡ, ಯಲ್ಲಾಪುರ ತಾಲೂಕುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಅತಿ ಹಿಂದುಳಿದ ಸಮುದಾಯಕ್ಕೆ ಸೇರಿದ ಗೌಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಮುಖ್ಯ ಕಸಬು ಹೈನುಗಾರಿಕೆ. ಈ ಸಮುದಾಯದ ಜೀವನೋಪಾಯಕ್ಕೆ ಸಹಾಯಗುವಂತೆ ಹಸು/ ಎಮ್ಮೆಗಳನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಬೇಕು ಎಂದು ತಿಳಿಸಿದ್ದಾರೆ.
ಭಾರತದ ಸರ್ಕಾರದ 'ವನ ಧನ್ ಯೋಜನೆ' ಮಾದರಿಯಲ್ಲಿ ಮುಖ್ಯವಾಗಿ ಸಿದ್ಧಿ ಸಮುದಾಯದವರಿಗೆ ಕಿರು ಅರಣ್ಯ ಉತ್ಪನ್ನಗಳ ಸಂಸ್ಕರಣೆ, ಔಷಧಿಯ ಸಸ್ಯಗಳ ಉತ್ಪಾದನೆ ಮತ್ತು ಮೌಲ್ಯವರ್ಧನೆ ಕುರಿತು ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆರ್. ವಿ. ದೇಶಪಾಂಡೆ ಹೇಳಿದ್ದಾರೆ.

ಪ್ರವಾಸೋದ್ಯಮ, ಉನ್ನತ ಶಿಕ್ಷಣ, ತೋಟಗಾರಿಕೆ
ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಕಾಶ್ಮೀರ ಎಂದು ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ ಹಲವಾರು ಪ್ರಸಿದ್ಧ ಪ್ರವಾಸಿ ಸ್ಥಳಗಳಿವೆ. ಕಾರವಾರ ಮತ್ತು ಶಿರಸಿಯಲ್ಲಿ ಸಮಾವೇಶ ಕೇಂದ್ರಗಳ ನಿರ್ಮಾಣ ಮಾಡುವುದು ಅವಶ್ಯವಿರುತ್ತದೆ. ಈ ಸಮಾವೇಶ ಕೇಂದ್ರಗಳಿಂದ ಪ್ರವಾಸೋದ್ಯಮದ ಬಗ್ಗೆ ಕಾರ್ಯಾಗಾರ, ಪ್ರದರ್ಶನ ಇನ್ನಿತರ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಅಧ್ಯಯನ ಪೀಠ ಸ್ಥಾಪಿಸಲು ಪ್ರಸುತ್ತ ಸಾಲಿನ 2021- 22ರ ಆಯವ್ಯಯದಲ್ಲಿ ಘೋಷಣೆ ಮಾಡಬೇಕು.
ಜಿಲ್ಲೆಯ ಹಲವಾರು ಕಡೆಗಳಲ್ಲಿ ಜನ ಜೇನು ಕೃಷಿಯನ್ನು ಉಪಕಸುಬಾಗಿ ಮಾಡಿಕೊಂಡಿದ್ದು, ಇದಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿದರೆ ಇನ್ನು ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಜೇನು ಕೃಷಿಯನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ಜೇನು ಕೃಷಿಗೆ ತೋಟಗಾರಿಕಾ ಇಲಾಖೆಯ ಮೂಲಕ ಉತ್ತೇಜನ ನೀಡಬೇಕಾಗಿದೆ.
ಜಿಲ್ಲೆಯ ಹವಾಮಾನವು ಗೋಡಂಬಿ ಬೆಳೆಗೆ ಸೂಕ್ತವಾಗಿದೆ. ಕರಾವಳಿ ಪ್ರದೇಶದಲ್ಲಿ ಗೋಡಂಬಿ ತೋಟಗಳು ಹೆಚ್ಚಿದ್ದು, ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಸಹ ದೊಡ್ಡ ಪ್ರಮಾಣದಲ್ಲಿ ಗೋಡಂಬಿ ತೋಟಗಳನ್ನು ಅಭಿವೃದ್ಧಿಪಡಿಸಲು ಅರಣ್ಯ ಭೂಮಿ ಮತ್ತು ಬರಡು ಭೂಮಿಯನ್ನು ಬಳಸಲು ಅನುವು ಮಾಡಿಕೊಡುವುದು ಸೂಕ್ತವಾಗಿದೆ.












Click it and Unblock the Notifications