ಗೋವಾ ಗಡಿ ಬಂದ್; ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಕಾರವಾರ, ಆಗಸ್ಟ್ 29: ಲಾಕ್ ಡೌನ್ ಸಡಿಲಿಕೆ ನಡುವೆಯೂ ಗೋವಾ ಸರ್ಕಾರ ಗಡಿ ಬಂದ್ ಮಾಡಿರುವುದಕ್ಕೆ ಮತ್ತು ಕೋವಿಡ್ ಪರೀಕ್ಷೆ ಕಾರಣವೊಡ್ಡಿ 2 ಸಾವಿರ ಪಡೆಯುತ್ತಿರುವುದನ್ನು ವಿರೋಧಿಸಿ ಗೋವಾ ಗಡಿಯಲ್ಲಿ ಶನಿವಾರ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
Recommended Video
ಕೇಂದ್ರ ಸರ್ಕಾರ ಈಗಾಗಲೇ ಎಲ್ಲ ರಾಜ್ಯಗಳಿಗೂ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಆದರೆ ಗೋವಾ ಸರ್ಕಾರ ಮಾತ್ರ ಗಡಿ ಬಂದ್ ಮಾಡಿ ಹಟಮಾರಿ ಧೋರಣೆ ಮುಂದುವರಿಸುತ್ತಿದೆ. ಮಾತ್ರವಲ್ಲದೆ ರಾಜ್ಯದಿಂದ ಗೋವಾಗೆ ತೆರಳುವವರಿಗೆ ಹೆಚ್ಚುವರಿ ಎರಡು ಸಾವಿರ ರೂಪಾಯಿ ಕೋವಿಡ್ ಪರೀಕ್ಷೆಗೆಂದು ವಸೂಲಿ ಮಾಡಲಾಗುತ್ತಿದೆ ಎಂದು ವಾಟಾಳ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಟ್ಯಾಕ್ಸಿ ಯುನಿಯನ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಗೋವಾ ಗೇಟ್ ಬಳಿ ತೆರಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಗೋವಾ ಪ್ರಯಾಣದ ಮೇಲಿದ್ದ ನಿರ್ಬಂಧ ಸಡಿಲ; ಆದರೆ ಷರತ್ತು ದುಬಾರಿ!
ಉತ್ತರ ಕನ್ನಡ ಜಿಲ್ಲೆ ಹಾಗೂ ಗೋವಾ ನಡುವೆ ಸಾಕಷ್ಟು ಒಡನಾಟ ಇದೆ. ಜಿಲ್ಲೆಯ ಜನರು ಗೋವಾದಲ್ಲಿದ್ದು, ಗೋವಾದವರು ಜಿಲ್ಲೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಹೀಗಿರುವಾಗ ಕೇವಲ ಗೋವಾ ರಾಜ್ಯಕ್ಕೆ ಅವಶ್ಯವಿರುವ ಮೀನು, ತರಕಾರಿ, ಹಾಲು ಸೇರಿದಂತೆ ಇನ್ನಿತರ ವಾಹನಗಳ ಬಿಡಲಾಗುತ್ತಿದೆ. ಉಳಿದಂತೆ ಯಾರೇ ಹೋದರೂ ಕೋವಿಡ್ ಪರೀಕ್ಷೆಗೆಂದು ಎರಡು ಸಾವಿರ ಪಡೆಯುತ್ತಿರುವುದು ಸರಿಯಲ್ಲ. ಕೂಡಲೇ ಗಡಿ ತೆರವುಗೊಳಿಸಿ ಹಣ ಪಡೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಶಾಸಕಿ ರೂಪಾಲಿ ನಾಯ್ಕ ಗೋವಾ ಮುಖ್ಯಮಂತ್ರಿ ಜೊತೆ ಮಾತನಾಡಿರುವುದಾಗಿ ತಿಳಿಸಿದ್ದು, ಸೆ.1ರಿಂದ ಗಡಿ ತೆರವುಗೊಳಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಭರವಸೆ ನೀಡಿರುವುದು ತಿಳಿದು ಬಂದಿದೆ. ಒಂದೊಮ್ಮೆ ಮಾತು ತಪ್ಪಿದ್ದಲ್ಲಿ ಸೆ.5ರಂದು ಈ ಬಗ್ಗೆ ಗೋವಾ ರಾಜ್ಯದ ವಾಹನಗಳನ್ನು ತಡೆದು ಗಡಿಯಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ನೀವಿದ್ದೀರಿ. ನಾವೆಲ್ಲರೂ ಒಂದು. ಸುಖಾಸುಮ್ಮನೆ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಇದನ್ನು ನಾವು ಸಹಿಸುವುದಿಲ್ಲ. ತಾಕತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಬೇಕಾದರೆ ಮಾಡಿಕೊಳ್ಳಿ ಎಂದರು.