ಉತ್ತರ ಕನ್ನಡ: ಧರೆ ಕುಸಿತ, ಐದು ತಾಸು ಸಂಚಾರ ಸ್ಥಗಿತ
ಕಾರವಾರ, ಜೂನ್.13: ಸಿದ್ದಾಪುರ ತಾಲ್ಲೂಕಿನ ಜೋಗಿನಮಠ (ಹೊನ್ನಾವರ-ತುಮಕೂರ ರಾಷ್ಟ್ರೀಯ ಹೆದ್ದಾರಿ 206) ರಸ್ತೆ ಪಕ್ಕದ ಧರೆ ಬುಧವಾರ ನಸುಕಿನಲ್ಲಿ ಕುಸಿದು ರಸ್ತೆ ಸಂಚಾರ ಐದಾರು ತಾಸು ಸಂಪೂರ್ಣ ಸ್ಥಗಿತಗೊಂಡ ಘಟನೆ ಬುಧವಾರ ನಡೆದಿದೆ.
ಕೆಲ ದಿನಗಳಿಂದ ಜಿಲ್ಲೆಯ ಮಲೆನಾಡ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಮಣ್ಣು ಮೃದುಗೊಂಡು ಧರೆ ಕುಸಿದಿದೆ.
ಸುಮಾರು 9 ಮರಗಳು ಹಾಗೂ ಬೃಹತ್ ಬಂಡೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದವು. ಇದರಿಂದಾಗಿ ವಾಹನಗಳೆಲ್ಲವೂ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತವು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಸಿಬ್ಬಂದಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಶ್ರಮಿಸಿ ರಸ್ತೆಗೆ ಅಡ್ಡಲಾಗಿದ್ದ ಮರ ಹಾಗೂ ಬಂಡೆಗಳನ್ನು ತೆರವು ಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿಕೊಟ್ಟರು.

ತಹಶೀಲ್ದಾರ್ ಪುಟ್ಟರಾಜ ಗೌಡ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ರಸ್ತೆ ಸಂಚಾರ ಐದಾರು ತಾಸು ಸಂಪೂರ್ಣ ಸ್ಥಗಿತಗೊಂಡ ಘಟನೆ ಬುಧವಾರ ನಡೆದಿದೆ.
ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಭಟ್ಕಳ, ಹೊನ್ನಾವರ, ಕಾರವಾರ, ಹಳಿಯಾಳ, ದಾಂಡೇಲಿ ಹಾಗೂ ಮುಂಡಗೋಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ, ಆಗಾಗ ಗುಡ್ಡಗಳು ಕುಸಿಯುವುದು ಸಾಮಾನ್ಯವಾಗಿದೆ.
ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ಗುಡ್ಡ ಕುಸಿದು ಜೀವಹಾನಿ ಸಂಭವಿಸದಂತೆ ಹೊನ್ನಾವರ ತಾಲೂಕಿನ ಕೆಳಗಿನೂರು, ಕರ್ಕಿ ಹಾಗೂ ಕುಮಟಾ ತಾಲೂಕಿನ ತಂಡ್ರಕುಳಿಯಲ್ಲಿ ಕುಟುಂಬಗಳನ್ನು ತಾತ್ಕಾಲಿಕವಾಗಿ ಮೂರ್ನಾಲ್ಕು ತಿಂಗಳ ಅವಧಿಗೆ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.












Click it and Unblock the Notifications