ಕೊರೊನಾ ಭೀತಿ ನಡುವೆಯೇ ಕಾರವಾರ ಬಂದರಿಗೆ ಬಂದ ವಿದೇಶಿ ಹಡಗು
ಕಾರವಾರ, ಮಾರ್ಚ್ 11: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಭೀತಿ ಉತ್ತರ ಕನ್ನಡವನ್ನೂ ಆವರಿಸಿದೆ. ಈ ನಡುವೆ ಸರಕು ಸಾಗಣೆ ಹಡಗೊಂದು ಕಾರವಾರದ ವಾಣಿಜ್ಯ ಬಂದರಿಗೆ ಬಂದಿದ್ದು, ತಪಾಸಣೆ ಮುಂದುವರಿದಿದೆ.
ಜಿಲ್ಲೆಯಾದ್ಯಂತ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆಯಾದರೂ, ಜನರಲ್ಲಿ ವೈರಸ್ ಭಯ ಮುಂದುವರಿದಿದೆ. ಈ ನಡುವೆ ಇಂಡೋನೇಷಿಯಾದ ಬೆಲ್ವಾನ್ ವಾಣಿಜ್ಯ ಬಂದರಿನಿಂದ ಮುಂಬೈಗೆ ಹೋಗಿದ್ದ ಹಡಗು ಅಲ್ಲಿಂದ ನೇರವಾಗಿ ಪಾಮ್ ಆಯಿಲ್ (ತಾಳೆ ಎಣ್ಣೆ) ತುಂಬಿಕೊಂಡು ಹಡಗು ಕಾರವಾರಕ್ಕೆ ಬಂದಿದೆ. ಹಡಗಿನಲ್ಲಿ ಚೀನಾ ಮತ್ತು ಕೊರಿಯಾ ಸೇರಿದಂತೆ ವಿವಿಧ ದೇಶದ ಒಟ್ಟು 24 ಸಿಬ್ಬಂದಿ ಇದ್ದಾರೆ. ಹೀಗಾಗಿ ಆತಂಕದ ನಡುವೆಯೇ ತಪಾಸಣೆ ನಡೆಯುತ್ತಿದೆ.
ಕೊರೊನಾದಿಂದ ದೇವಾಲಯಗಳಿಗೆ ಬೀಗ: ಸಂಕಟ ಬಂದರೂ ವೆಂಕಟರಮಣ ಅನ್ನಂಗಿಲ್ಲ!
ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳವಾದ ಕಾರವಾರ, ಗೋಕರ್ಣ, ಮುರುಡೇಶ್ವರ, ದಾಂಡೇಲಿ, ಶಿರಸಿ, ಮುಂಡಗೋಡಿನ ಟಿಬೆಟಿಯನ್ ಕಾಲೋನಿಗೆ ಪ್ರಥಮ ಹಂತದಲ್ಲಿ ಎಂಟು ಥರ್ಮಲ್ ಸ್ಕ್ಯಾನರ್ ಗಳನ್ನು ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಿಗೂ ಥರ್ಮಲ್ ಸ್ಕ್ಯಾನರ್ ಗಳನ್ನು ಆರೋಗ್ಯ ಇಲಾಖೆ ನೀಡಲಿದೆ.
ಹಡಗಿನ ಸಿಬ್ಬಂದಿಯ ಆರೋಗ್ಯ ತಪಾಸಣೆ
"ಯಾವುದೇ ಹಡಗು ಬಂದರೂ, ಪ್ರದೇಶಕ್ಕೆ ಆಗಮಿಸಿದಾಗ ಅದರೊಳಗಿದ್ದ ಎಲ್ಲಾ ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನು ನಾವು ಮಾಡುತ್ತೇವೆ. ಇದು ಸಾಮಾನ್ಯ ಕಾರ್ಯಸೂಚಿ. ಈಗ ಕೊರೊನಾ ವೈರಸ್ ಭೀತಿ ಇರುವ ಹಿನ್ನೆಲೆಯಲ್ಲಿ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಡಗಿನಲ್ಲಿದ್ದ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ" ಎಂದು ಆರೋಗ್ಯ ಇಲಾಖೆ ಹಾಗೂ ಬಂದರು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲವೂ ನಿಯಂತ್ರಣದಲ್ಲಿ
ಮುಖ್ಯ ಕಾರ್ಯದರ್ಶಿಗಳ ಆದೇಶದ ಮೇರೆಗೆ ಜನರಲ್ಲಿ ಕೊರೊನಾ ಭಯ ಹೋಗಲಾಡಿಸಲು ಕ್ಲಸ್ಟರ್ ಕಂಟೇನ್ಮೆಂಟ್ ಯೋಜನೆ ಸಿದ್ಧಪಡಿಸಿ, ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿತ್ತು. ಅಲ್ಲಿ ತಪಾಸಣೆ, ಜಾಗೃತಿ ಕಾರ್ಯಕ್ರಮ ನಡೆಸಲು ಅವರು ತಿಳಿಸಿದ್ದರು. ಗೋಕರ್ಣ ಹಾಗೂ ಮುಂಡಗೋಡ ಟಿಬೇಟಿಯನ್ ಕಾಲೊನಿಯಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿರುವ ಕಾರಣ ಇವೆರಡನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿತ್ತು. ಅಲ್ಲಿ ಅಧಿಕಾರಿ, ವೈದ್ಯರ ತಂಡ ಮನೆಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದ್ದಾರೆ.
20 ದಿನಗಳ ಬಳಿಕ ಕ್ರೂಸ್ ನಿಂದ ಹೊರಬಂದ ಭಾರತೀಯರು
ಸ್ಥಳೀಯರಿಗೆ 100 ಹಾಸಿಗೆ ಮೀಸಲು
‘ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಎನ್-95 ಮಾಸ್ಕ್ ಇದ್ದು, ಇದನ್ನು ಉಪಯೋಗಿಸುವ ಅವಶ್ಯಕತೆ ನಮ್ಮಲ್ಲಿ ಈವರೆಗೆ ಬಂದಿಲ್ಲ. ತ್ರಿಬಲ್ ಲೇಯರ್ ಮಾಸ್ಕ್ 10 ಸಾವಿರಕ್ಕಿಂತ ಹೆಚ್ಚಿದ್ದು, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಮಾಡಿದ್ದೇವೆ. ಮಾಸ್ಕ್ ವಿತರಣೆಯ ಸಂದರ್ಭ ಬಂದಲ್ಲಿ ಇದನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ತುರ್ತು ಸಂದರ್ಭಗಳಲ್ಲಿ ಪರ್ಸನಲ್ ಪ್ರೊಟೆಕ್ಷನ್ ಇಕ್ವೆಪ್ ಮೆಂಟ್- ಕಂಪ್ಲೀಟ್ ಸೂಟ್ ವೈದ್ಯರು ಹಾಗೂ ಅಧಿಕಾರಿಗಳಿಗೆ ಅವಶ್ಯವಾಗುತ್ತದೆ. ಇಂಥ ಸೂಟ್ಸ್ ನಮ್ಮಲ್ಲಿ 21 ಇದ್ದು, ಎಚ್1ಎನ್1 ಹಾಗೂ ಸ್ವಯಂ- ಫ್ಲೂಗೆ ಕೂಡ ಬಳಸುತ್ತೇವೆ. ನೌಕಾನೆಲೆಯವರು ತಮ್ಮ ಆಸ್ಪತ್ರೆಯಲ್ಲಿ 100 ಹಾಸಿಗೆಯನ್ನು ಸ್ಥಳೀಯರಿಗಾಗಿ ಮೀಸಲಿರಿಸಿದ್ದಾರೆ' ಎಂದು ತಿಳಿಸಿದ್ದಾರೆ.
ಕೊರೊನಾದೊಂದಿಗೆ ಮಂಗನ ಕಾಯಿಲೆ ಭೀತಿ
‘ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಸಿದ್ದಾಪುರದ ಭಾಗದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದು ಆಕಸ್ಮಿಕವಾಗಿ ಆಗಿದೆ. ನಮ್ಮ ಅಧಿಕಾರಿಗಳು, ವೈದ್ಯರು ಹಾಗೂ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಟೀಮ್ ಅರಣ್ಯ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಜೊತೆಗೆ ಲಸಿಕೆ ಹಾಗೂ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ 10 ಸಾವಿರ ಲಸಿಕೆಯನ್ನು ಹಾಕಲಾಗಿದೆ. ಈ ತಿಂಗಳ ಒಳಗೆ ಮತ್ತೆ ಐದು ಸಾವಿರ ಗುರಿ ಇಟ್ಟಿದ್ದೇವೆ. 46,872 ಡಿಎಂಪಿ ತೈಲ ಬಾಟಲ್ಸ್ ವಿತರಣೆ ಮಾಡಲಾಗಿದೆ. ಯಾವ ರೀತಿ ತೈಲ ಹಚ್ಚಿಕೊಳ್ಳಬೇಕು ಎಂಬುದರ ಬಗ್ಗೆಯೂ ತಿಳಿವಳಿಕೆ ಮೂಡಿಸಲಾಗುತ್ತಿದೆ' ಎಂದು ಹೇಳಿದರು.