ಭಾರೀ ಮಳೆ ಹಿನ್ನೆಲೆ ಜೋಯಿಡಾದ ಕ್ಯಾಸಲ್ ರಾಕ್ ಬಳಿ ಗುಡ್ಡಕುಸಿತ: ಹುಬ್ಬಳ್ಳಿ-ಗೋವಾ ಮಾರ್ಗದ ರೈಲು ಸಂಚಾರ ಸ್ಥಗಿತ
ಕಾರವಾರ, ಜುಲೈ, 26: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಬುಧವಾರವೂ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಜೊಯೀಡಾದ ಕ್ಯಾಸಲ್ ರಾಕ್ ಸಮೀಪದ ಕರಂಜೋಲ್ ಬಳಿ ಗುಡ್ಡ ಕುಸಿದಿದ್ದು, ರೈಲ್ವೆ ಸಂಚಾರ ಸ್ಥಗೀತಗೊಂಡಿದೆ.
ಕಳೆದ ಕೆಲ ದಿನಗಳಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಕರಂಜೋಲ್ ರೈಲ್ವೆ ಮಾರ್ಗದಲ್ಲಿಯೇ ಭೂಕುಸಿತವಾಗಿದೆ. ಘಟನೆಯಿಂದ ಹುಬ್ಬಳ್ಳಿ-ಗೋವಾ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಭೂಕುಸಿತದ ಸ್ಥಳದಲ್ಲಿನ ಮಣ್ಣನ್ನು ರೈಲ್ವೆ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ ತೆರವಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೂ ಇದೇ ರಿತಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿತ್ತು.

ಕೆಸರುಗದ್ದೆಯಂತಾದ ಹೆದ್ದಾರಿ
ಶಿರಸಿ-ಕುಮಟಾ ಹೆದ್ದಾರಿಯ ರಾಗಿ ಹೊಸಳ್ಳಿ ಬಳಿ ಗುಡ್ಡ ಕುಸಿದು ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದ್ದು, ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳ ಹಿಂದೆ ಗುಡ್ಡ ಕುಸಿತವಾಗಿ ಸಂಚಾರ ಕೆಲ ಗಂಟೆಗಳವರೆಗೆ ಸಂಪೂರ್ಣವಾಗಿ ಬಂದಾಗಿತ್ತು. ಬಳಿಕ ಮಣ್ಣು ತೆರವುಗೊಳಿಸಲಾಗಿತ್ತು. ಆದರೂ ಇದೇ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತವಾಗಿ ಮಣ್ಣು ಹೆದ್ದಾರಿಗೆ ಬಂದಿದೆ. ಸದ್ಯ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆದರೆ ಈ ಪ್ರದೇಶದಲ್ಲಿ ಹೆದ್ದಾರಿ ಸಂಪೂರ್ಣ ಕೆಸರುಮಯವಾದ ಕಾರಣ ವಾಹನಗಳು ಸಂಚರಿಸುವಾಗ ಕೆಸರಿನಲ್ಲಿ ಸಿಲುಕಿಕೊಂಡು ಪರದಾಡಬೇಕಾಗಿದೆ. ಬುಧವಾರ ಮುಂಜಾನೆ ಕೂಡ ಕಾರೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಹೆದ್ದಾರಿ ಕಾಮಗಾರಿಯ ಕಾರ್ಮಿಕರು, ಪ್ರಯಾಣಿಕರು ವಾಹನವನ್ನು ತಳ್ಳಿ ಮೇಲೆತ್ತಲು ಪ್ರಯತ್ನಿಸಿದರು ಕೂಡ ಸಾಧ್ಯವಾಗಿರಲಿಲ್ಲ. ಕೊನೆಗೆ ಜೆಸಿಬಿ ಮೂಲಕ ಸಿಲುಕಿರುವ ವಾಹನಕ್ಕೆ ಹಗ್ಗ ಕಟ್ಟಿ ಎಳೆದು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮುಂದುವರೆದ ಮಳೆ ಆರ್ಭಟ
ಇನ್ನು ಜಿಲ್ಲೆಯಲ್ಲಿ ಬುಧವಾರವೂ ಮಳೆ ಆರ್ಭಟ ಮುಂದುವರೆದಿದೆ. ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲ್ಭಾಗದ ತಾಲೂಕುಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಮಂಗಳವಾರ ಮಧ್ಯಾಹ್ನದವರೆಗೂ ಮಳೆ ಬಿಡುವು ನೀಡಿದ್ದರಿಂದ ಜಿಲ್ಲೆಯ ನದಿ ತೀರಗಳಲ್ಲಿ ಸೃಷ್ಟಿಯಾಗಿದ್ದ ಪ್ರವಾಹ ಇಳಿಮುಖವಾಗಿತ್ತು. ಆದರೆ ಇದೀಗ ಮತ್ತೆ ಮಳೆ ಆರ್ಭಟ ಮುಂದುವರಿದಿರುವ ಕಾರಣ ಮತ್ತೆ ನೆರೆ ಭೀತಿ ಎದುರಿಸುವಂತಾಗಿದೆ.
ಜಿಲ್ಲೆಯ ಕೆಲವೆಡೆ ಶಾಲಾ-ಕಾಲೇಜುಗಳಿಗೆ ರಜೆ
ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳಲ್ಲಿ ಅಗತ್ಯ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. ಜಿಲ್ಲಾಡಳಿತವು ಜುಲೈ 26ರಂದು ಈ ನಾಲ್ಕು ತಾಲೂಕಗಳ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಭಟ್ಕಳ, ಹೊನ್ನಾವರದಲ್ಲಿಯೂ ಸ್ಥಳೀಯ ಆಡಳಿತ ಮಳೆ ಮುಂದುವರೆದ ಕಾರಣ ರಜೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಇನ್ನುಳಿದ ತಾಲೂಕುಗಳಲ್ಲಿ ಮಳೆ ಪ್ರಮಾಣವನ್ನು ಅವಲೋಕಿಸಿ ಅಲ್ಲಿನ ತಹಶೀಲ್ದಾರ್ ಅವರಿಗೆ ಶಾಲೆ-ಕಾಲೇಜುಗಳ ರಜೆ ಬಗ್ಗೆ ಅಗತ್ಯ ಕ್ರಮವಹಿಸಲು ಅಧಿಕಾರ ನೀಡಲಾಗಿದೆ.












Click it and Unblock the Notifications