ಭಾರೀ ಮಳೆ; ಜನರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಚ್ಚರಿಕೆ
ಕಾರವಾರ, ಜುಲೈ 23; " ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವಕಾರಣ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜನರು ಯಾವುದೇ ಕಾರಣಕ್ಕೂ ನಿಷೇಧಿತ ಪ್ರದೇಶದಲ್ಲಿ ಸಂಚರಿಸಬಾರದು" ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಜಿಲ್ಲಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು. "ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಪ್ರಮುಖ ನದಿಗಳಾದ ಅಗನಾಶಿನಿ, ಕಾಳಿ ಹಾಗೂ ಗಂಗಾವಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿರುವ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ" ಎಂದರು.
"ಅರಣ್ಯ ಪ್ರದೇಶದಲ್ಲಿರುವ ಸಣ್ಣಪುಟ್ಟ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಜಿಲ್ಲೆಯ ಜನರೂ ಸಹ ಸಾಕಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ. ಜಲಾಶಯ ಹಾಗೂ ನದಿ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣಾಕಾರ್ಯ ಪ್ರಗತಿಯಲ್ಲಿದೆ. ಜನರು ಎಚ್ಚರಿಕೆಯಿಂದ ಸಂಚರಿಸಬೇಕು" ಎಂದು ಹೇಳಿದರು.

"ಜೊತೆಗೆ ಮಳೆ ಹಾಗೂ ಪ್ರವಾಹದಿಂದ ತೊಂದರೆಯಾಗುವ ಮುನ್ಸೂಚನೆ ಇರುವಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಪ್ರವಾಹ ಮತ್ತು ಮಳೆಯಿಂದಾಗುವ ತೊಂದರೆಯಾದರೆ ತಕ್ಷಣ ತಹಶೀಲ್ದಾರ್, ಜಿಲ್ಲಾಡಳಿತ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಅಜಾಗರೂಕತೆಯಿಂದ ವರ್ತಿಸಬಾರದು ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳಿಗೆ ಸಹಕರಿಸಬೇಕು" ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಅಂಕೋಲಾ ತಾಲೂಕಿನ 32, ಹಳಿಯಾಳ 1, ಕಾರವಾರ 27, ಕುಮಟಾ 9, ಮುಂಡಗೋಡ 1, ಸಿದ್ದಾಪುರ 5 ಹಾಗೂ ಶಿರಸಿಯ 1 ಗ್ರಾಮ ಸೇರಿದಂತೆ ಒಟ್ಟಾರೆ 79 ಗ್ರಾಮಗಳು ನದಿ ಹಾಗೂ ಜಲಾಶಯದಿಂದ ಹೊರ ಬಿಡಲಾದ ನೀರಿನಿಂದ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿವೆ. ಜಿಲ್ಲೆಯಲ್ಲಿ ಒಟ್ಟು 11084 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೊನ್ನಾವರ ತಾಲೂಕಿನಲ್ಲಿ ಮೀನುಗಾರ ಮಹಿಳೆಯೊಬ್ಬರು ಹಾಗೂ ಶಿರಸಿ ತಾಲೂಕಿನಲ್ಲಿಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ನದಿಯ ಪ್ರವಾಹ ಸಿಲುಕಿ ಮೃತರಾಗಿದ್ದು, ಅವರ ಮೃತದೇಹ ಪತ್ತೆಯಾಗಿವೆ. ಅಂಕೋಲಾ ತಾಲೂಕಿನಲ್ಲಿಇಬ್ಬರು ಕಾಣೆಯಾಗಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
ಮಳೆ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ 1, ಕಾರವಾರ 5 ಹಾಗೂ ಯಲ್ಲಾಪುರ 3 ಸೇರಿದಂತೆ ಒಟ್ಟು 9 ಮನೆಗಳು ಪೂರ್ಣ ಹಾಗೂ 55 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟಾರೆಯಾಗಿ ಮಳೆ ಹಾಗೂ ಪ್ರವಾಹದಲ್ಲಿ ಸಿಲುಕಿದಂತಹ ಒಟ್ಟು 3776 ಜನರನ್ನುರಕ್ಷಿಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಕಾಳಜಿ ಕೇಂದ್ರ ಸ್ಥಾಪನೆ; ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಅಂಕೋಲಾ ತಾಲೂಕಿನಲ್ಲಿ 19, ಹಳಿಯಾಳ 1, ಕಾರವಾರ 19, ಕುಮಟಾ 9, ಮುಂಡಗೋಡ 1, ಸಿದ್ದಾಪುರ 5, ಶಿರಸಿ 1 ಹಾಗೂ ಯಲ್ಲಾಪುರ 3 ಸೇರಿದಂತೆ ಜಿಲ್ಲೆಯಲ್ಲಿಒಟ್ಟು 58 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಈ ಎಲ್ಲಕೇಂದ್ರಗಳಲ್ಲಿ ಒಟ್ಟು 3,435 ಜನರುಆಶ್ರಯ ಪಡೆದಿದ್ದಾರೆ. ಅಲ್ಲದೇ ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ143 ರಸ್ತೆಗಳು, 22 ಸೇತುವೆಗಳು, 7 ಶಾಲೆಗಳು, 1 ಪ್ರಾಥಮಿಕ ಆರೋಗ್ಯ ಕೇಂದ್ರ, 145 ವಿದ್ಯುತ್ ಕಂಬಗಳು, 5 ಟಿಸಿಗಳಿಗೆ ಹಾನಿಯಾಗಿದೆ.
ಕದ್ರಾ ಜಲಾಶಯದ 10 ಗೇಟ್ ತೆರೆಯಲಾಗಿದ್ದು 212947 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಕೊಡಸಳ್ಳಿ ಜಲಾಶಯದ 9 ಗೇಟ್ ತೆರೆಯಲಾಗಿದ್ದು 183581 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದೆ. ನೆರೆ ಮತ್ತು ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರನ್ನುರಕ್ಷಿಸಲು 20 ಸದಸ್ಯರು ಹಾಗೂ ಬೋಟ್ಗಳನ್ನು ಒಳಗೊಂಡ ಎನ್ಡಿಆರ್ಎಫ್ನ 1 ತಂಡ, 16 ಸದಸ್ಯರು ಹಾಗೂ ಬೋಟ್ ಒಳಗೊಂಡ ಎಸ್ಡಿಆರ್ಎಫ್ನ 1 ತಂಡ ಹಾಗೂ 17 ಸೈನಿಕರು ಮತ್ತು 5 ಜೆಮಿನಿ ಬೋಟ್ ಒಳಗೊಂಡ ನೌಕಾದಳದ 2 ತಂಡವನ್ನು ಬಳಸಿಕೊಳ್ಳಲಾಗುತ್ತಿದೆ.











Click it and Unblock the Notifications