ಉತ್ತರ ಕನ್ನಡದಲ್ಲಿ ರಾಜ್ಯದ ಮೊದಲ "ಕಡಲ ಧಾಮ"; ಏನಿದರ ವಿಶೇಷ?
ಕಾರವಾರ, ಮಾರ್ಚ್ 12: ಅರಣ್ಯ ಪ್ರದೇಶಗಳಲ್ಲಿನ ಸಂರಕ್ಷಣಾ ಚಟುವಟಿಕೆಗಳ ಯಶಸ್ಸಿನಿಂದ ಉತ್ತೇಜಿತರಾಗಿರುವ ರಾಜ್ಯ ಸರ್ಕಾರವು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕದ ಮೊದಲ 'ಕಡಲಧಾಮ' (ಸಾಗರ ಸಂರಕ್ಷಿತ ಪ್ರದೇಶ) ಸ್ಥಾಪಿಸಲು ಒಪ್ಪಿಗೆ ಸೂಚಿಸಿದೆ.
ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮುಗಳಿಯಲ್ಲಿ ಕಡಲಧಾಮ ನಿರ್ಮಿಸಲು ಸರ್ಕಾರ ಅನುಮತಿ ನೀಡಿದ್ದು, ಈ ಯೋಜನೆಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಇತ್ತೀಚೆಗೆ ನಡೆದ ವನ್ಯಜೀವಿ ಮಂಡಳಿಯ 13ನೇ ಸಭೆಯಲ್ಲೂ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಕಡಲತೀರದಿಂದ 6 ಕಿ.ಮೀ ಪ್ರದೇಶ
ಕಡಲ ತೀರದಿಂದ ಸುಮಾರು ಆರು ಕಿಲೋ ಮೀಟರ್ ವರೆಗಿನ ಪ್ರದೇಶವನ್ನು, ಅಂದರೆ ರಾಮೇಶ್ವರ ಗುಡ್ಡದಿಂದ ಅಪ್ಸರಕೊಂಡದವರೆಗಿನ ಪ್ರದೇಶವನ್ನು ಕಡಲಧಾಮ ಪ್ರದೇಶವೆಂದು ಘೋಷಿಸಲಾಗುತ್ತಿದೆ. ಈ ವಲಯದಲ್ಲಿ ಮೀನುಗಾರಿಕೆ ನಡೆಸಲು ಯಾವುದೇ ನಿರ್ಬಂಧವಿಲ್ಲ.

ರೆಡ್ ಲಿಸ್ಟ್ ನಲ್ಲಿರುವ 34 ಅಪರೂಪದ ಜೀವಿಗಳು
ಕಾರವಾರವಾರದಿಂದ ಹೊನ್ನಾವರದವರೆಗೆ ಕಡಲತೀರದಲ್ಲಿ ಅಳಿನಂಚಿನಲ್ಲಿರುವ ಅನೇಕ ಸಮುದ್ರ ಜೀವಿಗಳಿವೆ. ಇಂಟರ್ ನ್ಯಾಶನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ನ (ಐಸಿಯುಎನ್) ರೆಡ್ ಲಿಸ್ಟಿನಲ್ಲಿರುವ 34 ಅಪರೂಪದ ಸಮುದ್ರ ಮೀನುಗಳು ಈ ಕರಾವಳಿ ವಲಯದಲ್ಲಿವೆ ಎನ್ನಲಾಗಿದೆ.

ಅಪರೂಪದ ಕಡಲಾಮೆಗಳು
ಮೂರು ಪ್ರಭೇದದ ಶಾರ್ಕ್, ಎರಡು ಪ್ರಭೇದದ ಡಾಲ್ಫಿನ್, ಎರಡು ಪ್ರಭೇದದ ತಿಮಿಂಗಿಲ, ಸ್ಪಿನ್ನರ್ ಡಾಲ್ಫಿನ್, ಬಾಟಲ್ ನೋಸ್ ಡಾಲ್ಫಿನ್, ಸ್ಫಾಟ್ ಟೈಲ್ ಶಾರ್ಕ್, ವೈಟ್ಟಿಪ್ ಶಾರ್ಕ್, ವೈಟ್ ಚಿಕ್ ಶಾರ್ಕ್ ಮತ್ತು ಆಲಿವ್ ರಿಡ್ಲೆ ಕಡಲಾಮೆಗಳು ಈ ಕರಾವಳಿ ವಲಯದಲ್ಲಿ ಕಂಡು ಬರುತ್ತಿದ್ದು, ಇವುಗಳು ಐಸಿಯುಎನ್ ರೆಡ್ ಲಿಸ್ಟ್ ನಲ್ಲಿವೆ.

ಜೀವವೈವಿಧ್ಯದ ರಕ್ಷಣೆಗೆ ಸಹಾಯ
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಮೊದಲ ಕಡಲಧಾಮ (Marine Eco Park) ಸ್ಥಾಪನೆ ಮಾಡಲು ಸರ್ಕಾರ ಉದ್ದೇಶಿಸಿದೆ. ಈ ಒಂದು ಯೋಜನೆಯಿಂದ ಕಡಲಲ್ಲಿ ವಾಸಿಸುವ ಜೀವವೈವಿಧ್ಯ ರಕ್ಷಣೆಯೊಂದಿಗೆ ಪ್ರವಾಸೋದ್ಯಮವೂ ಚುರುಕುಗೊಳ್ಳಲಿದೆ ಎನ್ನಲಾಗಿದೆ.












Click it and Unblock the Notifications